30.6 C
Mumbai
April 23, 2026
Mumbai News Kannada
ಸುದ್ದಿ

ರಾಷ್ಟ್ರೀಯ ಫುಟ್ಬಾಲ್ ಆಟಗಾರ ರವೀಂದ್ರನಾಥ ಶೆಟ್ಟಿ ನಿಧನ





ಮಂಗಳೂರು, ಮಾ. 27: ಮುಂಬೈ ಕ್ರೀಡಾ ಕ್ಷೇತ್ರದಲ್ಲಿ ಕನ್ನಡಿಗರಲ್ಲಿ ರಾಷ್ಟ್ರೀಯ ಮಟ್ಟದ ಫುಟ್ಬಾಲ್ ಆಟಗಾರರಾಗಿ ಗುರುತಿಸಿಕೊಂಡಿದ್ದ ಮುಂಡ್ಕೂರು ದೊಡ್ಡಮನೆ ರವೀಂದ್ರನಾಥ ಶೆಟ್ಟಿ (73) ಅವರು ಮಾರ್ಚ್ 27ರಂದು ಮಂಗಳೂರಿನ ಕದ್ರಿ ನಿವಾಸದಲ್ಲಿ ನಿಧನರಾದರು.

​ಅವರು ಕೆಮ್ತೂರು ಮೇಲ್ಮನೆ ಪಟೇಲ್ ಶಾಮರಾಯ ಶೆಟ್ಟಿ ಮತ್ತು ಮುಂಡ್ಕೂರು ದೊಡ್ಡಮನೆ ಸರೋಜಿನಿ ಶೆಟ್ಟಿ ದಂಪತಿಯ ಪುತ್ರರಾಗಿದ್ದರು. ಇವರು ಮಂಗಳೂರು ಬಂಟರ ಸಂಘದ ಮಾಜಿ ಕೋಶಾಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದರು.

​ಮೃತರು ಪತ್ನಿ ವೀಣಾ ಶೆಟ್ಟಿ, ಮೂವರು ಪುತ್ರರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಇವರು ಕಾಂದಿವಳಿ ಪಶ್ಚಿಮದ ಡ್ರೀಮ್ ಪ್ಯಾಲೇಸ್ ಹೋಟೆಲ್ ಮಾಲೀಕರಾದ ಸತೀಶ್ ಶೆಟ್ಟಿ ಅವರ ಭಾವರಾಗಿದ್ದರು.

ಕ್ರೀಡಾ ಸಾಧನೆ:

ರವೀಂದ್ರನಾಥ ಶೆಟ್ಟಿ ಅವರು ತಮ್ಮ ಪ್ರತಿಭೆಯಿಂದ ಮುಂಬೈಯ ಯೂನಿಯನ್ ಬ್ಯಾಂಕ್‌ನಲ್ಲಿ ಉದ್ಯೋಗಕ್ಕೆ ಸೇರಿದರು. ಮಹಾರಾಷ್ಟ್ರ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಫುಟ್ಬಾಲ್ ಆಡುವ ಮೂಲಕ ರಾಜ್ಯ ಹಾಗೂ ಬ್ಯಾಂಕನ್ನು ಪ್ರತಿನಿಧಿಸಿದ್ದರು. ಅವರು ಕೇವಲ ಉತ್ತಮ ಆಟಗಾರರಲ್ಲದೆ, ಸಮರ್ಥ ಆಡಳಿತಗಾರ, ತರಬೇತುದಾರ ಮತ್ತು ಅನೇಕ ಕ್ರೀಡಾಪಟುಗಳಿಗೆ ಮಾರ್ಗದರ್ಶಕರಾಗಿದ್ದರು.

​ಅವರ ಮಾರ್ಗದರ್ಶನದಲ್ಲಿ ನೂರಾರು ಕ್ರೀಡಾಪಟುಗಳು ಯೂನಿಯನ್ ಬ್ಯಾಂಕ್‌ನಲ್ಲಿ ಉದ್ಯೋಗ ಪಡೆದು ತಮ್ಮ ವೃತ್ತಿಜೀವನವನ್ನು ರೂಪಿಸಿಕೊಂಡಿದ್ದಾರೆ. ಅವರಿಂದ ತರಬೇತಿ ಪಡೆದ ಹಲವರು ಮಹಾರಾಷ್ಟ್ರ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಕ್ರೀಡಾ ಕ್ಷೇತ್ರಕ್ಕೆ ಇವರ ಕೊಡುಗೆ ಅಪಾರವಾಗಿದ್ದು, ಇವರ ನಾಯಕತ್ವದಲ್ಲಿ ಯೂನಿಯನ್ ಬ್ಯಾಂಕ್ ತಂಡವು ಅನೇಕ ಪ್ರಮುಖ ಟ್ರೋಫಿಗಳನ್ನು ಮುಡಿಗೇರಿಸಿಕೊಂಡಿದೆ.

ಯುವ ಆಟಗಾರರ ಮೇಲಿನ ಅವರ ಪ್ರೀತಿ ಮತ್ತು ಬೆಂಬಲ ಅಪ್ರತಿಮವಾಗಿತ್ತು. ತಮ್ಮ ವೈಯಕ್ತಿಕ ಸಂಪನ್ಮೂಲಗಳನ್ನು ಬಳಸಿಕೊಂಡು ಆಟಗಾರರಿಗೆ ನೆರವು ನೀಡುತ್ತಿದ್ದರು. ಕ್ರೀಡಾ ಆಸಕ್ತಿಗಾಗಿ ತಮ್ಮ ಸಮಯ ಮತ್ತು ಹಣವನ್ನು ತ್ಯಾಗ ಮಾಡಿದ ಅದ್ಭುತ ವ್ಯಕ್ತಿ ಇವರು. ತಮ್ಮ ಸಂಬಳದ ಬಹುಭಾಗವನ್ನು ಯುವ ಫುಟ್ಬಾಲ್ ಆಟಗಾರರ ಮಾಸಿಕ ರೈಲು ಪಾಸ್ ಹಾಗೂ ಕ್ಯಾಂಟೀನ್ ಉಪಾಹಾರಕ್ಕಾಗಿ ವ್ಯಯಿಸುತ್ತಿದ್ದರು.

​ಮುಂಬೈಯ ಕರ್ನಾಟಕ ಮೈದಾನದಲ್ಲಿ ಯುವ ಆಟಗಾರರಿಗೆ ತರಬೇತಿ ನೀಡುತ್ತಾ, ಅವರ ಬೆಳವಣಿಗೆಗೆ ಸದಾ ಪ್ರೋತ್ಸಾಹ ನೀಡುತ್ತಿದ್ದರು. ಅಂಧೇರಿ ಪಶ್ಚಿಮದ ಉದಯ್ ಶೆಟ್ಟಿ ಮತ್ತು ಇತರ ಅನೇಕ ತುಳು ಕನ್ನಡಿಗರಿಗೆ ವೇಟ್‌ಲಿಫ್ಟಿಂಗ್ ಕ್ಷೇತ್ರದಲ್ಲಿ ಸಾಧನೆ ಮಾಡಲು ಇವರೇ ಪ್ರೇರಣೆಯಾಗಿದ್ದರು. ಉದಯ್ ಶೆಟ್ಟಿಯವರಂತಹ ಕ್ರೀಡಾಳುಗಳಿಗೆ ಬ್ಯಾಂಕಿನಲ್ಲಿ ಉದ್ಯೋಗ ಕೊಡಿಸುವಲ್ಲಿಯೂ ಇವರು ಪ್ರಮುಖ ಪಾತ್ರ ವಹಿಸಿದ್ದರು.

​ರವೀಂದ್ರನಾಥ ಶೆಟ್ಟಿ ಅವರ ನಿಧನಕ್ಕೆ ಅವರಿಂದ ತರಬೇತಿ ಪಡೆದ ಹಾಗೂ ಯೂನಿಯನ್ ಬ್ಯಾಂಕ್‌ನಲ್ಲಿ ಉದ್ಯೋಗದಲ್ಲಿರುವ ನೂರಾರು ಅಭಿಮಾನಿಗಳು ಮತ್ತು ಕ್ರೀಡಾಪಟುಗಳು ತೀವ್ರ ಸಂತಾಪ ಸೂಚಿಸಿದ್ದಾರೆ.



Related posts

ಸಿ ಎ ಪರೀಕ್ಷೆ ಫಲಿತಾಂಶ 2024 ಪ್ರತೀಕ್ಷಾ ಪ್ರಕಾಶ್ ಆಚಾರ್ಯ ಉತ್ತೀರ್ಣ

Mumbai News Desk

ಕುತ್ಯಾರು ವಿದ್ಯಾದಾಯಿನಿ ಹಿ.ಪ್ರಾ.ಶಾಲೆ ಶತಸಂವತ್ಸರೋತ್ಸವ

Mumbai News Desk

ಜ.11 : ಡಿವೈನ್ ಪಾರ್ಕ್‌ನ ಮಹಾರಾಷ್ಟ್ರ ಘಟಕದ ವತಿಯಿಂದ ಡಾಕ್ಟರ್‌ಜೀ ಅವರಿಗೆ ಶ್ರದ್ಧಾಂಜಲಿ ಹಾಗೂ ಪ್ರಾರ್ಥನಾ ಸಭೆ

Mumbai News Desk

ಮತ್ಸ್ಯಗಂಧ ರೈಲಿನಲ್ಲಿ 45.8.ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ

Mumbai News Desk

ಚಿತ್ರರಂಗದ ಮಿನುಗು ತಾರೆ ರೀಟಾ ಆರ್. ಅಂಚನ್ ವಿಧಿವಶ

Mumbai News Desk

ಪೊಲಿಪು ಶ್ರೀಧರ್ ಕಾಂಚನ್ ನಿಧನ

Mumbai News Desk