April 23, 2026
Mumbai News Kannada
ಪ್ರಕಟಣೆ

ಬೆಂಗ್ರೆಯಲ್ಲಿ ಭಕ್ತಿ-ಸಂಸ್ಕೃತಿಯ ಸಂಗಮ: ಶ್ರೀ ವೀರಭಾರತಿ ವ್ಯಾಯಾಮ ಶಾಲೆಯ ಶತಮಾನೋತ್ಸವ ಹಾಗೂ ಶ್ರೀ ಪಟ್ಟಾಭಿರಾಮ ದೇವರ ಪುನರ್ ಪ್ರತಿಷ್ಠಾಪನಾ ಮಹೋತ್ಸವ





ಮಂಗಳೂರಿನ ಬೆಂಗ್ರೆ ಎಂಬ ಸುಂದರ ಕರಾವಳಿ ಗ್ರಾಮದಲ್ಲಿ ಸಾಂಸ್ಕೃತಿಕ ಪರಂಪರೆಯ ಕೇಂದ್ರವಾಗಿರುವ ಶ್ರೀ ವೀರಭಾರತಿ ವ್ಯಾಯಾಮ ಶಾಲೆಯು ತನ್ನ ಶತಮಾನೋತ್ಸವದ ಸಂಭ್ರಮದಲ್ಲಿದ್ದು, ಈ ಐತಿಹಾಸಿಕ ಸಂದರ್ಭದಲ್ಲಿ ಶ್ರೀ ಪಟ್ಟಾಭಿ ರಾಮಚಂದ್ರ ದೇವರ ನೂತನ ದೇವಾಲಯದ ಪ್ರತಿಷ್ಠಾಪನಾ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದೆ. ಪಶ್ಚಿಮ ಘಟ್ಟದಲ್ಲಿ ಉದ್ಭವಿಸಿ ಅರಬ್ಬಿ ಸಮುದ್ರವನ್ನು ಸೇರುವ ಫಲ್ಗುಣಿ ಮತ್ತು ನೇತ್ರಾವತಿ ನದಿಗಳ ತಟದಲ್ಲಿರುವ ಬೆಂಗ್ರೆಯ ಹಿರಿಯರು 1926ರಲ್ಲಿ ಶ್ರೀ ಪವನಪುತ್ರ ಹನುಮಂತನ ಆರಾಧನೆಯೊಂದಿಗೆ ಈ ವ್ಯಾಯಾಮ ಶಾಲೆಯನ್ನು ಸ್ಥಾಪಿಸಿದ್ದರು. ಬರೋಡಾ ಸಂಸ್ಥಾನದ ಹೆಸರಾಂತ ಕುಸ್ತಿಪಟು ಹಾಗೂ ಗುರುಗಳಾಗಿದ್ದ ದಿವಂಗತ ಶ್ರೀ ಜಪ್ಪು ತಂಕರ ಸುವರ್ಣ ಅವರ ಮಾರ್ಗದರ್ಶನದಲ್ಲಿ ಈ ಸಂಸ್ಥೆಯು ಯುವಜನತೆಯಲ್ಲಿ ದೈಹಿಕ ಶಿಸ್ತು ಮೂಡಿಸುವಲ್ಲಿ ಯಶಸ್ವಿಯಾಗಿ, ‘ತುಳುನಾಡ ಕೇಸರಿ’ ಮತ್ತು ‘ತುಳುನಾಡ ಕುಮಾರ್’ ಅಂತಹ ಬಿರುದುಗಳನ್ನು ಪಡೆದ ಮಲ್ಲರನ್ನು ನಾಡಿಗೆ ಕೊಡುಗೆಯಾಗಿ ನೀಡಿದೆ. ಕೇವಲ ಕ್ರೀಡೆಯಷ್ಟೇ ಅಲ್ಲದೆ ಶಿಕ್ಷಣಕ್ಕೂ ಒತ್ತು ನೀಡುತ್ತಿರುವ ಈ ಸಂಸ್ಥೆಯು ಪ್ರತಿ ವರ್ಷ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುತ್ತಾ ಬಂದಿದೆ. ಇಲ್ಲಿ ಆಯೋಜಿಸಲಾದ ‘ರಾಮ ರಕ್ಷಾ ಸ್ತೋತ್ರ’ ಪಠಣವು ಈಗಾಗಲೇ 10 ಕೋಟಿ ಮೈಲಿಗಲ್ಲನ್ನು ದಾಟಿ ಮುನ್ನಡೆಯುತ್ತಿರುವುದು ವಿಶೇಷ.ಮುಂಬೈನ ಪ್ರಸಿದ್ಧ ಉದ್ಯಮಿ ಹಾಗೂ ಹನುಮದ್ಭಕ್ತರಾದ ಶ್ರೀ ಗಂಗಾಧರ ಪಿ. ಸುವರ್ಣ ಅವರು ನೀಡಿದ ಹನುಮಂತನ ವಿಗ್ರಹವು 1970ರ ಮೇ 8ರಂದು ಇಲ್ಲಿ ಪ್ರತಿಷ್ಠಾಪನೆಯಾಗಿತ್ತು. 2019ರ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ನಡೆದ ಅರುಢ ಪ್ರಶ್ನಾ ಚಿಂತನೆಯಲ್ಲಿ, ಈ ಜಾಗವು ನೂರು ವರ್ಷಗಳ ಹಿಂದೆ ನೈಸರ್ಗಿಕ ವಿಕೋಪದಿಂದ ನಾಶವಾದ ರಾಮ ಮಂದಿರವಾಗಿತ್ತು ಎಂಬ ಅಂಶ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಶ್ರೀ ಪಟ್ಟಾಭಿರಾಮನ ವಿಗ್ರಹವನ್ನು ವೈದಿಕ ವಿಧಿವಿಧಾನಗಳೊಂದಿಗೆ ಸ್ಥಾಪಿಸಲಾಯಿತು. ಇದೀಗ ಶತಮಾನೋತ್ಸವದ ನೆನಪಿಗಾಗಿ ದಿವಂಗತ ಶ್ರೀ ಗಂಗಾಧರ ಪಿ. ಸುವರ್ಣ ಅವರ ಪುತ್ರರಾದ ಶ್ರೀ ಅಜಿತ್ ಜಿ. ಸುವರ್ಣ ಅವರು ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲು ಪಂಚಲೋಹದ ಶ್ರೀ ಪಟ್ಟಾಭಿ ರಾಮಚಂದ್ರ ವಿಗ್ರಹವನ್ನು ಉದಾರವಾಗಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಶ್ರೀ ಪಟ್ಟಾಭಿರಾಮಚಂದ್ರನ ನೂತನ ಗರ್ಭಗುಡಿ ನಿರ್ಮಾಣ, ಶ್ರೀ ನಾಗಾಲಯ ಮತ್ತು ಶ್ರೀ ಹನುಮಾನ್ ಪ್ರತಿಷ್ಠಾಪನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು 2026ರ ಏಪ್ರಿಲ್ 14 ರಿಂದ ಏಪ್ರಿಲ್ 20 ರವರೆಗೆ ವೈಭವದಿಂದ ಜರುಗಲಿವೆ. ಸುಮಾರು 1.50 ಕೋಟಿ ರೂಪಾಯಿ ವೆಚ್ಚದ ಈ ಯೋಜನೆಯ ಯಶಸ್ಸಿಗೆ ಭಕ್ತರು ಉದಾರವಾಗಿ ದೇಣಿಗೆ ನೀಡುವಂತೆ ಸಮಿತಿಯು ವಿನಂತಿಸಿದೆ. 25,000 ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ದೇಣಿಗೆ ನೀಡುವ ಭಕ್ತರ ಹೆಸರನ್ನು ದೇವಾಲಯದ ಪ್ರಾರ್ಥನಾ ಮಂದಿರದ ಅಮೃತಶಿಲೆಯಲ್ಲಿ ಕೆತ್ತಿಸಿ ಗೌರವಿಸಲಾಗುವುದು. ಶ್ರೀ ರಾಮಚಂದ್ರ, ಹನುಮಂತ ಮತ್ತು ನಾಗದೇವತೆಗಳ ಅನುಗ್ರಹ ಎಲ್ಲರಿಗೂ ಲಭಿಸಲಿ ಎಂದು ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ಏಪ್ರಿಲ್ 14ರಿಂದ 20ರ ತನಕ ನಡೆಯುವ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು : ಮಂಗಳೂರಿನ ಬೆಂಗ್ರೆ ಸ್ಯಾಂಡ್‌ಪಿಟ್‌ನಲ್ಲಿರುವ ಶತಮಾನೋತ್ಸವದ ಸಂಭ್ರಮದಲ್ಲಿರುವ ಶ್ರೀ ವೀರಭಾರತಿ ವ್ಯಾಯಾಮ ಶಾಲೆ ಹಾಗೂ ಶ್ರೀ ವೀರಭಾರತಿ ರಾಮಾಂಜನೇಯ ಮಂದಿರದಲ್ಲಿ ಇದೇ ಬರುವ 2026ರ ಏಪ್ರಿಲ್ ತಿಂಗಳಲ್ಲಿ ಅತ್ಯಂತ ವೈಭವದ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ದಶಕೋಟಿ ರಾಮ ಮಂತ್ರ ಜಪಿಸಿದ ಪವಿತ್ರ ಸಾನಿಧ್ಯವಾಗಿರುವ ಈ ಮಂದಿರದಲ್ಲಿ ವಾಸ್ತುಶಾಸ್ತ್ರದಂತೆ ನೂತನವಾಗಿ ನಿರ್ಮಿಸಲ್ಪಟ್ಟ ಶ್ರೀ ಸೀತಾ ರಾಮ ಲಕ್ಷ್ಮಣ ಹನುಮಾನ್ ಸಮೇತ ಪಟ್ಟಾಭಿರಾಮ ದೇವರ ನೂತನ ಬಿಂಬ ಪ್ರತಿಷ್ಠೆ, ಶ್ರೀ ವೀರ ಮಾರುತಿ ದೇವರ ಬಿಂಬ ಪುನಃ ಪ್ರತಿಷ್ಠೆ ಹಾಗೂ ನಾಗಶಿಲಾ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಏಪ್ರಿಲ್ 17 ರಿಂದ ಏಪ್ರಿಲ್ 20 ರವರೆಗೆ ಜರುಗಲಿದೆ.ಈ ಮಹತ್ಕಾರ್ಯವು ವಾಸ್ತುಸ್ಥಪತಿಗಳಾದ ಬ್ರಹ್ಮಶ್ರೀ ಕುಡುಪು ಕೃಷ್ಣರಾಜ ತಂತ್ರಿಗಳ ಮಾರ್ಗದರ್ಶನದಲ್ಲಿ ಹಾಗೂ ಉರ್ವ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಬ್ರಹ್ಮಶ್ರೀ ದೇರೆಬೈಲು ರಮೇಶ್ ತಂತ್ರಿ ಮತ್ತು ಬ್ರಹ್ಮಶ್ರೀ ದೇರೆಬೈಲು ಡಾ. ಶಿವಪ್ರಸಾದ್ ತಂತ್ರಿಗಳ ನೇತೃತ್ವದಲ್ಲಿ ನೆರವೇರಲಿದೆ. ಏಪ್ರಿಲ್ 18 ರಂದು ಶನಿವಾರ ಬೆಳಿಗ್ಗೆ 8.00 ರಿಂದ 9.00 ರ ವೃಷಭ ಲಗ್ನದಲ್ಲಿ ದೇವರ ಪ್ರತಿಷ್ಠಾಪನೆ ಹಾಗೂ ಏಪ್ರಿಲ್ 19 ರ ರವಿವಾರ ಅಕ್ಷಯ ತದಿಗೆಯಂದು ಬೆಳಿಗ್ಗೆ 11.00 ರಿಂದ 12.00 ರ ಮಿಥುನ ಲಗ್ನದಲ್ಲಿ ಬ್ರಹ್ಮ ಕಲಶಾಭಿಷೇಕ ಸಂಪನ್ನಗೊಳ್ಳಲಿದೆ.ಶತಮಾನೋತ್ಸವದ ಅಂಗವಾಗಿ ಏಪ್ರಿಲ್ 4 ರಂದು ಹನುಮಾನ್ ಜಯಂತಿಯ ಪ್ರಯುಕ್ತ ಆಟೋಟ ಸ್ಪರ್ಧೆಗಳು ಆರಂಭವಾಗಲಿದ್ದು, ತುಳುನಾಡ ಕೇಸರಿ ಪ್ರಶಸ್ತಿ ವಿಜೇತ ಶ್ರೀ ಶಾಂತರಾಮ್ ಕರ್ಕೇರ ಉದ್ಘಾಟಿಸಲಿದ್ದಾರೆ. ಏಪ್ರಿಲ್ 5 ರಂದು ವಾಲಿಬಾಲ್, ಕಬ್ಬಡ್ಡಿ, ಸ್ವಿಮ್ಮಿಂಗ್, ಬೋಟ್ ರೇಸ್ ಮುಂತಾದ ಸ್ಪರ್ಧೆಗಳು ನಡೆಯಲಿವೆ. ಏಪ್ರಿಲ್ 15 ರಂದು ಪಟ್ಟಾಭಿರಾಮ ದೇವರ ನೂತನ ಪಂಚಲೋಹ ವಿಗ್ರಹದ ಭವ್ಯ ಮೆರವಣಿಗೆ ನಡೆಯಲಿದ್ದು, ಏಪ್ರಿಲ್ 17 ರಿಂದ ವಿವಿಧ ಹೋಮ-ಹವನಗಳು ಆರಂಭವಾಗಲಿವೆ.

ಈ ಸಮಾರಂಭದಲ್ಲಿ ಪೇಜಾವರ ಮಠದ ಶ್ರೀ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು ಸ್ವಾಗತ ಗೋಪುರ ಉದ್ಘಾಟಿಸಿ ಆಶೀರ್ವಚನ ನೀಡಲಿದ್ದು, ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಕೂಡ ಆಶೀರ್ವಚನ ನೀಡಲಿದ್ದಾರೆ. ಸಭಾ ಕಾರ್ಯಕ್ರಮಗಳಲ್ಲಿ ನಾಡೋಜ ಡಾ| ಜಿ. ಶಂಕರ್ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಂಸದ ಕ್ಯಾ| ಬ್ರಿಜೇಶ್ ಚೌಟ, ಶಾಸಕರಾದ ಶ್ರೀ ಡಿ. ವೇದವ್ಯಾಸ ಕಾಮತ್, ಶ್ರೀ ಯಶ್‌ಪಾಲ್ ಎ. ಸುವರ್ಣ, ಶ್ರೀ ಐವನ್ ಡಿ’ ಸೋಜಾ, ಮಾಜಿ ಸಚಿವ ಶ್ರೀ ಪ್ರಮೋದ್ ಮಧ್ವರಾಜ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.ವೀರ ಭಾರತಿ ವ್ಯಾಯಾಮ ಶಾಲೆಯ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಶ್ರೀ ಅಜಿತ್ ಜಿ. ಸುವರ್ಣ, ಅಧ್ಯಕ್ಷರಾದ ಚೇತನ್ ಬೆಂಗ್ರೆ , ಪ್ರಧಾನ ಕಾರ್ಯದರ್ಶಿ ಮೋಹನ್ ಕುಮಾರ್, ಕೋಶಾಧಿಕಾರಿ ಸುದೇಶ್ ಕೋಟಿಯನ್, ಸಲಹೆಗಾರರಾದ ಲಕ್ಷ್ಮಣ್ ಬಿಕಾಂ, ಕೇಶವ ಕರ್ಕೇರ, ಧನಂಜಯ ಪುತ್ರನ್, ನವೀನ್ ಕರ್ಕೇರ, ಹರಿಶ್ಚಂದ್ರ ಬೆಂಗ್ರೆ, ನರಸಿಂಹ ಶ್ರೀಯನ್, ರಮೇಶ್ ಬೆಂಗ್ರೆ ಆಡಳಿತ ಮಂಡಳಿ ಅಧ್ಯಕ್ಷರಾದ ಆನಂದ ಅಮೀನ್, ಉಪಾಧ್ಯಕ್ಷ ಜಯಪ್ರಕಾಶ್ ಸುವರ್ಣ,ಕಾರ್ಯದರ್ಶಿ ಧನುಷ್ ಖಾರ್ವಿ, ಕೋಶಾಧಿಕಾರಿ ಸುಧೆಶ್ ಕೋಟ್ಯಾನ್ ಹಾಗೂ ಆಡಳಿತ ಸಮಿತಿಯ ಎಲ್ಲಾ ಸದಸ್ಯರು ಭಕ್ತಾದಿಗಳನ್ನು ಆತ್ಮೀಯವಾಗಿ ಆಮಂತ್ರಿಸಿದ್ದಾರೆ. ಕಾರ್ಯಕ್ರಮದ ದಿನಗಳಲ್ಲಿ ಮಹಾ ಅನ್ನಸಂತರ್ಪಣೆ, ಭಜನಾ ಸಂಕೀರ್ತನೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಾದ ರಸಮಂಜರಿ ಹಾಗೂ ‘ಸತ್ಯದ ಸಾದಿಗ್ ಧರ್ಮೊದ ಬೊಲ್ಪು’ ನಾಟಕ ಪ್ರದರ್ಶನಗಳು ನಡೆಯಲಿವೆ. ಭಕ್ತರು ತಾಮ್ರದ ಕಲಶ (₹1000/-) ಅಥವಾ ಬೆಳ್ಳಿ ಕಲಶ (₹50,000/-) ಸೇವೆ ನೀಡಲು ಅವಕಾಶವಿದ್ದು, ಏಪ್ರಿಲ್ 16 ರೊಳಗೆ ಹೊರೆಕಾಣಿಕೆಯನ್ನು ಸಮರ್ಪಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9141816301/ 80888842ಅನ್ನು ಸಂಪರ್ಕಿಸಬಹುದು.



Related posts

ಕನ್ಯಾನ ಸದಾಶಿವ ಶೆಟ್ಟಿ ಅಭಿಮಾನಿ ಬಳಗ. ಪೆ 8:ಮೀಂಜ ಬಂಟರ ಸಂಘ ಮೈದಾನದಲ್ಲಿ ಸದಾಶಿವ ಸಹಾಯ ಹಸ್ತ ವಿತರಣೆ ಮತ್ತು ಉಚಿತ ಅರೋಗ್ಯ ವಿಮೆ,

Mumbai News Desk

ತುಳು ಸಂಘ ಬೋರಿವಲಿ ವತಿಯಿಂದ ನ. 16ರಂದು ಸ್ವಚ್ಛತಾ ಅಭಿಯಾನ

Mumbai News Desk

ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ) ಬೆಂಗಳೂರು, ಮಹಾರಾಷ್ಟ್ರ ಘಟಕ ವತಿಯಿಂದ ಅಖಿಲ ಭಾರತ ಪ್ರಥಮ ಕೇಂದ್ರ ಕನ್ನಡ ಸಾಹಿತ್ಯ ಸಮ್ಮೇಳನ

Mumbai News Desk

ಡಿ. 24ರಂದು ಶ್ರೀ ಕೃಷ್ಣ ವಿಠ್ಠಲ ಪ್ರತಿಷ್ಠಾನ (ರಿ) ಮುಂಬೈಯ 26ನೇ ವಾರ್ಷಿಕ ಉತ್ಸವ ಸಂಭ್ರಮ

Mumbai News Desk

ಪೆ  17 :ಶ್ರೀಮದ್ಭಾರತ  ಮಂಡಳಿಯ  146 ನೇ ವಾರ್ಷಿಕೋತ್ಸವ

Mumbai News Desk

ಕುಮಾರ  ಕ್ಷತ್ರಿಯ ಸಂಘ  59 ನೇ ವಾರ್ಷಿಕ ಮಹಾಸಭೆ, ಪೆ.16 :   ಸತ್ಯನಾರಾಯಣ ಮಹಾಪೂಜೆ, ಹಳದಿ ಕುಂಕುಮ

Mumbai News Desk