
ಶನಿ ದೇವರ ಆರಾಧನೆ ಕೇವಲ ಪೂಜೆಗಷ್ಟೇ ಸೀಮಿತವಾಗಿಲ್ಲ. ಜೀವನದ ಪಾಠವೇ ಆಗಿದೆ: ಮೋಹನ್ ಜಿ ಬಂಗೇರ.
ನಗರದ ಹಿರಿಯ ಧಾರ್ಮಿಕ ಸಂಸ್ಥೆಗಳಲ್ಲೊಂದಾಗಿ ವರ್ಷಪೂರ್ತಿ ಸೇವಾ ಕಾರ್ಯಗಳನ್ನು ನಡೆಸುತ್ತಾ ದೇವಸ್ಥಾನಕ್ಕೆ ಬರುವ ಭಕ್ತರಿಗೆ ವಿವಿಧ ರೀತಿಯ ಸಹಕಾರವನ್ನು ನೀಡುತ್ತಾ ಬಂದಿರುವ ಮಲಾಡ್ ಪೂರ್ವದ ಗೋರೆಗಾಂವ್ ಫೈಓವರ್ ಬಳಿಯಿರುವ ಇರಾನಿ ಕಾಲನಿಯ ಶ್ರೀ ಶನಿ ಮಹಾತ್ಮ ಪೂಜಾ ಸಮಿತಿಯ ವತಿಯಿಂದ ವಾರ್ಷಿಕ ಶನಿ ದೇವರ ಜಯಂತ್ಯೋತ್ಸವ ಆಚರಣೆಯ ಅಂಗವಾಗಿ ಪ್ರಶಾಖ ಅಮವಾಸ್ಯೆಯ ಮಹಾಪೂಜೆಯು ಮೇ 16ರಂದು ವಿವಿಧ ಧಾರ್ಮಿಕ ಶ್ರದ್ದಾಭಕ್ತಿಯಿಂದ ವಿಜೃಂಭಣೆಯಿಂದ ನಡೆಯಿತು.

ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆ ಗಣಪತಿ ಹೋಮದೊಂದಿಗೆ ಪೂಜಾ ಕೈಂಕರ್ಯಗಳು ಪ್ರಾರಂಭಗೊಂಡಿತು. ಬಳಿಕ ಸಾಮೂಹಿಕ ಶನಿ ಶಾಂತಿ
ಕಲಶಾಭಿಷೇಕವು ವಿದ್ವಾನ್ ವೇ। ಮೂ ಕೆ. ಗೋವಿಂದ ಮೂರ್ತಿ ಭಟ್ ಅವರ ನೇತೃತ್ವದಲ್ಲಿ ಜರಗಿತು. ಮಧ್ಯಾಹ್ನ ಶ್ರೀ ಶನಿದೇವರಿಗೆ ಮಹಾ ಮಂಗಳಾರತಿ, ನಡೆದ ನಂತರ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು.

ಅಪರಾಹ್ನ ಕಲಶ ಮುಹೂರ್ತ ನೆರವೇರಿದ ಬಳಿಕ ಸಮಿತಿಯ ವತಿಯಿಂದ ಶ್ರೀ ಶನಿಗ್ರಂಥ ಪಾರಾಯಣ, ಸಮಿತಿಯ ಸದಸ್ಯರಿಂದ ಭಜನ ಕಾರ್ಯಕ್ರಮ, ಸಂಜೆ 7 ರಿಂದ ಮಂಗಳಾರತಿ, ಪ್ರಸಾದ ವಿತರಣೆ ನೆರವೇರಿತು. ಬಳಿಕ ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮವಾಗಿ
ಅಭಿನಯ ಮಂಟಪ ಮುಂಬಯಿ ಕಲಾವಿದರಿಂದ ಕರುಣಾಕರ ಕಾಪು ಅವರ ನಿರ್ದೇಶನದಲ್ಲಿ ಐತಿಹಾಸಿಕ ತುಳುನಾಟಕ “ಕೋರ್ದಬ್ಬು ತನಿಮಾನಿಗ”
ಪ್ರದರ್ಶನಗೊಂಡಿತು.
ದಿನಪೂರ್ತಿ ಜರಗಿದ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು, ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ವಿವಿಧ ಕ್ಷೇತ್ರಗಳ ಗಣ್ಯರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿ ಶ್ರೀಶನಿ ದೇವರಕೃಪೆಗೆ ಪಾತ್ರರಾದರು.

ನಾಟಕ ಪ್ರದರ್ಶನದ ಬಳಿಕ ಕಲಾವಿದರನ್ನು ಸನ್ಮಾನಿಸಿದ ಪೂಜಾ ಸಮಿತಿಯ ಅಧ್ಯಕ್ಷ ಮೋಹನ್ ಜಿ ಬಂಗೇರ ಮಾತನಾಡುತ್ತಾ ಶನಿ ದೇವನು ಯಾವುದೇ ತಾರತಮ್ಯವಿಲ್ಲದೆ ನ್ಯಾಯ ಒದಗಿಸುವವನು. ಅನ್ಯಾಯ, ಅಸತ್ಯ ಮತ್ತು ವಂಚನೆಯ ಮಾರ್ಗದಲ್ಲಿ ನಡೆದವರಿಗೆ ಶನಿ ದೆಸೆಯ ಕಾಲದಲ್ಲಿ ತಕ್ಕ ಶಿಕ್ಷೆಯಾಗುತ್ತದೆ ಎಂಬ ನಂಬಿಕೆ ಇದೆ. ಹೀಗಾಗಿ, ಶನಿ ದೇವರ ಮೇಲಿನ ಭಕ್ತಿಯು ಮನುಷ್ಯನಲ್ಲಿ ಪಾಪಪ್ರಜ್ಞೆಯನ್ನು ಜಾಗೃತಗೊಳಿಸುತ್ತದೆ. ಇದು ವ್ಯಕ್ತಿಯನ್ನು ಸತ್ಯದ ಹಾದಿಯಲ್ಲಿ ನಡೆಯುವಂತೆ, ಇತರರಿಗೆ ದ್ರೋಹ ಬಗೆಯದಂತೆ ಮತ್ತು ನೈತಿಕ ಮೌಲ್ಯಗಳನ್ನು ಕಾಪಾಡಿಕೊಳ್ಳುವಂತೆ ಪ್ರೇರೇಪಿಸುತ್ತದೆ.
ಶನಿ ದೇವರ ಆರಾಧನೆ ಕೇವಲ ಪೂಜೆಗಷ್ಟೇ ಸೀಮಿತವಾಗಿಲ್ಲ. ಜೀವನದ ಪಾಠವೇ ಆಗಿದೆ ಎಂದು ನುಡಿದರು.
ಶ್ರೀಶನಿಮಹಾತ್ಮಪೂಜಾಸಮಿತಿಯ , ಗೌರದ ಕಾರ್ಯದರ್ಶಿಗಳಾದ ಎಚ್. ಎಸ್.ಕರ್ಕೇರ, ಎಂ.ಎನ್.ಸುವರ್ಣ,ಗೌರವ ಕೋಶಾಧಿಕಾರಿಗಳಾದ ಕೆ. ಎನ್. ಸಾಲ್ಯಾನ್, ಆಕುಲ್ ಎಂ. ಓಝಾ ಸಮಿತಿಯ ಸದಸ್ಯರುಗಳಾದ ಎಸ್. ಎನ್. ಕೋಟ್ಯಾನ್, ಎನ್. ಎನ್. ಪೂಜಾರಿ, ಎಸ್.ಎ.ಸಾಲ್ಯಾನ್,ಪಿ. ಆರ್. ಆಮೀನ್, ಬಿ. ಎಚ್. ಹೆಚ್ಚಾಡಿ, ಜಯಾ ಎಂ. ಬಂಗೇರ, ತನೂಜ್ ಕಪ್ಪನ್ಗಲ್, ಯು. ವಿ. ರಾವ್, ಅರ್ಚಕರಾದ ಸುಧಾಕರ್ ಎಂ. ಶೆಟ್ಟಿ ,ಭುವಾಜಿ ಕೆ. ಎನ್ ಸಿ. ಸಾಲ್ಯಾನ್, ಉಪ ಸಮಿತಿಯ ಸದಸ್ಯರಾದ ಪಿ. ಪಿ. ಸಾಲ್ಯಾನ್, ಚಂದ್ರಾವತಿ ಪುತ್ರನ್, ಜಿ. ಆರ್. ಸಾಲ್ಯಾನ್, ಸೂರಜ್ ಸುವರ್ಣ, ಸುಜಿತ್ ಕರ್ಮೊಕರ್, ಆರ್. ಎಸ್. ದೇವಾಡಿಗ, ಆರ್. ವೈ. ಪುತ್ರನ್, ಎನ್. ಆರ್. ಬಂಗೇರ, ವಿ. ಆರ್. ವಾಗ್ದಾರೆ ಸದಸ್ಯ ಬಾಂಧವರು ಪೂಜಾ ಯಶಸ್ವಿಗೆ ಸಹಕರಿಸಿದರು.




