
ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಜವಾಬ್ದಾರಿ ವಹಿಸಿಕೊಳ್ಳಲಿರುವ ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಡಿ.ಕೆ. ಶಿವಕುಮಾರ್ ಅವರಿಗೆ ಅವರ ಆತ್ಮೀಯ ಮಿತ್ರರು, ಖ್ಯಾತ ಉದ್ಯಮಿ ಹಾಗೂ ‘ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ’ಯ ಸ್ಥಾಪಕರಾದ ಶ್ರೀ ತೋನ್ಸೆ ಜಯಕೃಷ್ಣ ಶೆಟ್ಟಿ ಮತ್ತು ಸಂಘಟನೆಯ ರಾಜ್ಯ ಸಂಚಾಲಕರಾದ ಶ್ರೀ ಕೆ.ಪಿ. ಜಗದೀಶ್ ಅಧಿಕಾರಿ ಅವರು ಹೃತ್ಪೂರ್ವಕ ಶುಭಾಶಯಗಳನ್ನು ಕೋರಿದ್ದಾರೆ.
ಮೇ 23 ರಂದು ಬೆಂಗಳೂರಿನಲ್ಲಿರುವ ಡಿ.ಕೆ. ಶಿವಕುಮಾರ್ ಅವರ ಅಧಿಕೃತ ನಿವಾಸಕ್ಕೆ ಭೇಟಿ ನೀಡಿದ ತೋನ್ಸೆ ಜಯಕೃಷ್ಣ ಎ. ಶೆಟ್ಟಿಯವರು, ಭಾವಿ ಮುಖ್ಯಮಂತ್ರಿಗಳಿಗೆ ಶಾಲು ಹೊದಿಸಿ, ಸಿಹಿ ನೀಡಿ ಆತ್ಮೀಯವಾಗಿ ಅಭಿನಂದಿಸಿದರು. ಈ ಸೌಹಾರ್ದಯುತ ಭೇಟಿಯ ಸಂದರ್ಭದಲ್ಲಿ ಇಬ್ಬರು ನಾಯಕರ ನಡುವೆ ರಾಜ್ಯದ ಅಭಿವೃದ್ಧಿ ಹಾಗೂ ಸಾಮಾಜಿಕ ಒಳಿತಿನ ಕುರಿತು ಸುದೀರ್ಘ ಮಾತುಕತೆ ನಡೆಯಿತು.
ವಿಶೇಷವಾಗಿ, ಕರಾವಳಿ ಸೇರಿದಂತೆ ರಾಜ್ಯಾದ್ಯಂತ ‘ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ’ಯು ಹಮ್ಮಿಕೊಂಡಿರುವ ಪರಿಸರ ಸಂರಕ್ಷಣೆ, ಸುಸ್ಥಿರ ಅಭಿವೃದ್ಧಿ ಹಾಗೂ ಸಾಮಾಜಿಕ ಜಾಗೃತಿ ಚಟುವಟಿಕೆಗಳ ಕುರಿತು ಡಿ.ಕೆ. ಶಿವಕುಮಾರ್ ಅವರಿಗೆ ಈ ವೇಳೆ ಸವಿಸ್ತಾರವಾಗಿ ವಿವರಣೆ ನೀಡಲಾಯಿತು. ಅದರೊಂದಿಗೆ, ಸಮಿತಿಯು ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಕೈಗೊಳ್ಳಲಿರುವ ವಿನೂತನ ಯೋಜನೆಗಳು ಮತ್ತು ಪರಿಸರ ಪೂರಕ ಕ್ರಮಗಳ ಬಗ್ಗೆಯೂ ಮಹತ್ವದ ಚರ್ಚೆಗಳು ನಡೆದವು.
ಸಂಘಟನೆಯ ಸಮಾಜಮುಖಿ ಕಾರ್ಯಗಳು ಮತ್ತು ದೂರದೃಷ್ಟಿಯ ಯೋಜನೆಗಳನ್ನು ಆಲಿಸಿದ ನಿಯೋಜಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಮಿತಿಯ ಕಾರ್ಯವೈಖರಿಗೆ ಅತ್ಯಂತ ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಕೃತಿಯನ್ನು ಉಳಿಸುತ್ತಲೇ ಪ್ರಗತಿ ಸಾಧಿಸುವ ಇಂತಹ ಸಂಘಟನೆಗಳ ಶ್ರಮ ಸಮಾಜಕ್ಕೆ ಅತ್ಯಗತ್ಯ ಎಂದು ಮುಕ್ತ ಕಂಠದಿಂದ ಶ್ಲಾಘಿಸಿದ ಅವರು, ಸಮಿತಿಯ ಮುಂದಿನ ಎಲ್ಲಾ ಸತ್ಕಾರ್ಯಗಳಿಗೂ ಹಾಗೂ ಪರಿಸರ ಪೂರಕ ಯೋಜನೆಗಳಿಗೂ ತಮ್ಮ ಸಂಪೂರ್ಣ ಬೆಂಬಲ ಮತ್ತು ಸಹಕಾರ ಇರಲಿದೆ ಎಂದು ಭರವಸೆ ನೀಡಿದರು. ಈ ಭೇಟಿಯ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರು ಹಾಗೂ ಹಿತೈಷಿಗಳು ಉಪಸ್ಥಿತರಿದ್ದರು.




