
ಚಿತ್ರ, ವರದಿ: ಪಿ.ಆರ್.ರವಿಶಂಕರ್
8483980035
ಪಶ್ಚಿಮ ಮಹಾರಾಷ್ಟ್ರದಲ್ಲಿನ ಗಣೇಶಪುರಿಯಲ್ಲಿನ ಇತಿಹಾಸ ಪ್ರಸಿದ್ಧ ಸಮಾಧಿ ಕ್ಷೇತ್ರವಾದ ಸದ್ಗುರು ಶ್ರೀ ನಿತ್ಯಾನಂದ ಮಂದಿರದಲ್ಲಿನ ಮೂರ್ತಿಯ ನವೀಕರಣ ಕಾರ್ಯ ಪೂರ್ಣಗೊಂಡ ಬಳಿಕ , ಪುನರ್ ಪ್ರತಿಷ್ಟಾಪನಾ ಕಾರ್ಯಕ್ರಮವು ಇದೇ ಜುಲೈ ತಾ.09 ಗುರುವಾರದಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿದ್ಯುಕ್ತವಾಗಿ ನೆರವೇರಿತು.
ಮಂದಿರದ ಮುಖ್ಯ ಪ್ರವೇಶ ದ್ವಾರದ ಎದುರು ನಿರ್ಮಿಸಿದ ಯಜ್ಞಶಾಲೆಯಲ್ಲಿ ವಿವಿಧ ಹೋಮಗಳು ಜರಗಿದ್ದು ವೈದಿಕ ವೃಂದದ ಸಾಮೂ ಹಿಕ ಪ್ರಾರ್ಥನೆ ಹಾಗೂ ಪೂರ್ಣಾಹುತಿಯೊಂದಿಗೆ ಸಂಪನ್ನಗೊಂಡವು.
ಪುನರ್ ಪ್ರಾಣಪ್ರತಿಷ್ಟಾ ವಿಧಿವಿಧಾನಗಳು ಪೂರ್ಣವಾದ ಬಳಿಕ ಮಹಾಮಂಗಳಾರತಿಯ ನಂತರ ಆಗಮಿಸಿದ ಎಲ್ಲಾ ಭಕ್ತಾದಿಗಳಿಗೆ ಸಮಾಧಿ ಮಂದಿರದ ಪವಿತ್ರ ಗರ್ಭಗುಡಿಯೊಳಗೆ ಪ್ರವೇಶ ಹಾಗೂ ಗುರುದರ್ಶನದ ಅವಕಾಶವನ್ನು ಏರ್ಪಡಿಸಲಾಗಿತ್ತು.

ಕಳೆದ ಐದಾರು ದಿನಗಳಲ್ಲಿ ಸುರಿದ ವಿಪರೀತ ಮಳೆಯ ಪರಿಣಾಮ ಸಂಚಾರ ವ್ಯವಸ್ಥೆಯಲ್ಲಿನ ಅನನುಕೂಲ ಪರಿಸ್ಥಿತಿಯ ನಡುವೆಯೂ ದೂರದ ಸ್ಥಳಗಳಿಂದ ಭಕ್ತಾಭಿಮಾನಿಗಳು ಉತ್ಸಾಹದಿಂದ ಬಂದು ಈ ಪವಿತ್ರ ಹಾಗೂ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿ ಧನ್ಯತಾ ಭಾವದೊಂದಿಗೆ ತೆರಳಿದರು.
ಈ ಸಂದರ್ಭದಲ್ಲಿ ಭೀಮೇಶ್ವರ ಸದ್ಗುರು ನಿತ್ಯಾನಂದ ಸಂಸ್ಥೆಯ ಟ್ರಸ್ಟೀ ಜಗನ್ನಾಥ್ ಪಾಟೀಲ್ , ಸದ್ಗುರು ಇಂಟರ್ ನ್ಯಾಷನಲ್ ಮುಂಬೈ ಉದ್ಯಮಿ ಹಾಗೂ ಉಡುಪಿಯ ಶ್ರೀ ನಿತ್ಯಾನಂದ ಮಂದಿರ ಮಠದ ಕಾರ್ಯದರ್ಶಿ ತೋನ್ಸೆ ನವೀನ್ ಶೆಟ್ಟಿ , ಪಾಲ್ಘರ್ ಉದ್ಯಮಿ ಹಾಗೂ ಕಾಂಞಂಗಾಡ್ ನಿತ್ಯಾನಂದ ಕ್ಷೇತ್ರದ ವಿಶ್ವಸ್ಥ ರಮೇಶ್ ಶೆಟ್ಟಿ , ಪಾಲ್ಘರ್ ತಾಲೂಕು ಹೋಟೆಲ್ ಅಸೋಸಿಯೇಶನ್ ಅಧ್ಯಕ್ಷ ರಘುರಾಮ್ ರೈ ಬೊಯಿಸರ್ , ಉದ್ಯಮಿ ಹಾಗೂ ಬೊಯಿಸರ್ ಸ್ವಾಮಿ ನಿತ್ಯಾನಂದ ಮಂದಿರದ ವಿಶ್ವಸ್ಥರು ಸತ್ಯಾ ಎಸ್. ಕೋಟ್ಯಾನ್ , ಥಾಣೆ ನಿತ್ಯಾನಂದ ಸೇವಾ ಬಳಗದ ರಘುನಾಥ್ ರೈ , ಸಿಬಿಡಿ ಭಾಸ್ಕರ್ ಶೆಟ್ಟಿ , ಹರೀಶ್ಚಂದ್ರ ಶೆಟ್ಟಿ , ಥಾಣೆ ದಿನೇಶ್ ಶೆಟ್ಟಿ , ಎನ್.ಕೆ.ಭಿಲ್ಲವ , ಪ್ರಸಿದ್ಧ ನಟ ಹಾಗೂ ತುಳು ರಂಗ ಕಲಾವಿದ ಅರವಿಂದ್ ಬೋಳಾರ್ ಸೇರಿದಂತೆ ವಿವಿಧ ಊರುಗಳಿಂದ ಆಗಮಿಸಿದ್ದ ಉದ್ಯಮಿಗಳು , ವಿವಿಧ ಸಂಸ್ಥೆಯ ಪದಾಧಿಕಾರಿಗಳು , ಸ್ಥಳೀಯರು , ತುಳು ಕನ್ನಡಿಗ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಬಳಿಕ ಪ್ರಸಾದರೂಪದಲ್ಲಿ ಅನ್ನಸಂತರ್ಪಣೆಯ ವ್ಯವಸ್ಥೆ ಮಾಡಲಾಗಿತ್ತು.
ಚಿತ್ರ ಮತ್ತು ವರದಿ :
ಪಿ.ಆರ್.ರವಿಶಂಕರ್( photo joirnalist)
8483980035





