
ಪಶ್ಚಿಮ ಮಹಾರಾಷ್ಟ್ರದ ಇತಿಹಾಸ ಪ್ರಸಿದ್ಧ ಸಮಾಧಿ ಕ್ಷೇತ್ರವಾದ ಗಣೇಶಪುರಿಯ ಸದ್ಗುರು ಶ್ರೀ ನಿತ್ಯಾನಂದ ಮಂದಿರದಲ್ಲಿ ನವೀಕರಣಗೊಂಡ ಮೂರ್ತಿಯ ಪುನರ್ ಪ್ರತಿಷ್ಠಾಪನಾ ಮಹೋತ್ಸವವು ಇದೇ ಗುರುವಾರ (ಜುಲೈ 9) ಅತ್ಯಂತ ವೈಭವದಿಂದ ಜರಗಲಿದೆ.
ಮಂದಿರದ ಶ್ರೀ ಭೀಮೇಶ್ವರ ಸದ್ಗುರು ನಿತ್ಯಾನಂದ ಟ್ರಸ್ಟ್ ವತಿಯಿಂದ ಕಳೆದ ಏಪ್ರಿಲ್ 27 ರಂದು ಮೂರ್ತಿಯ ನವೀಕರಣ ಕಾರ್ಯವನ್ನು ಕೈಗೊಳ್ಳಲಾಗಿತ್ತು. ಇದೀಗ ಈ ಎಲ್ಲಾ ಕೆಲಸ ಕಾರ್ಯಗಳು ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಮೂರ್ತಿಯ ಶುದ್ಧೀಕರಣ ಹಾಗೂ ಸ್ಥಾಪನಾ ವಿಧಿಯ ವಿವಿಧ ವೈದಿಕ ಧಾರ್ಮಿಕ ಕಾರ್ಯಕ್ರಮಗಳು ಜುಲೈ 5 ರಿಂದಲೇ ಆರಂಭಗೊಂಡಿವೆ.
ಇದರ ಮುಕ್ತಾಯದ ಅಂಗವಾಗಿ ಜುಲೈ 9 ರ ಗುರುವಾರದಂದು ನವೀಕರಣಗೊಂಡ ಮೂರ್ತಿಯ ಪುನರ್ ಪ್ರತಿಷ್ಠಾ ವಿಧಿ ವಿಧಾನಗಳು ದಿವ್ಯ ಸನ್ನಿಧಾನದಲ್ಲಿ ನೆರವೇರಲಿವೆ. ಈ ಅಪೂರ್ವ ಹಾಗೂ ಪಾವನ ಕ್ಷಣಕ್ಕೆ ಸಾಕ್ಷಿಯಾಗಲು ಶ್ರೀ ಗುರು ಭಕ್ತರು, ವಿಶೇಷವಾಗಿ ತುಳು-ಕನ್ನಡಿಗ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ‘ಶ್ರೀ ಸ್ವಾಮಿ ನಿತ್ಯಾನಂದ ಭಕ್ತ ಮಂಡಳಿ’ ವಿನಂತಿಸಿದೆ.
ವಿಶೇಷ ಸೂಚನೆ:
ಗುರುವಾರ ಮಧ್ಯಾಹ್ನದ ಮಂಗಳಾರತಿಯ ನಂತರ ಆಗಮಿಸುವ ಎಲ್ಲಾ ಸರ್ವ ಭಕ್ತಾದಿಗಳಿಗೆ ಮಂದಿರದ ಪವಿತ್ರ ಗರ್ಭಗುಡಿಯೊಳಗೆ ಪ್ರವೇಶಿಸಿ, ನೇರವಾಗಿ ದರ್ಶನ ಪಡೆಯಲು ವಿಶೇಷ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ ಎಂದು ಮಂದಿರದ ಪ್ರಕಟಣೆ ತಿಳಿಸಿದೆ.




