ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ)ಕೊಲ್ಯ ಘಟಕ ಇದರ ಆಶ್ರಯದಲ್ಲಿ ಜಾನಪದ ವಿದ್ವಾಂಸರು,ಲೇಖಕರು,ಕರಾವಳಿ ತೀರದಹೆಮ್ಮೆಯಸಾಹಿತಿ,ಅನರ್ಗ್ಯ ರತ್ನ ವಿದ್ವಾನ್ ದಿ.ರಮಾನಾಥ್ ಕೋಟೆಕಾರ್ ಇವರ ಜನುಮದಿನದ ಪ್ರಯುಕ್ತ ರಾಜ್ಯಮಟ್ಟದ ಕಥೆ,ಕವನ ಸ್ಪರ್ಧೆಯನ್ನು ಆಯೋಜಿಸಿದ್ದು ಮುಂಬಯಿ ಲೇಖಕಿ, ಸಾಹಿತಿ ಶ್ರೀಮತಿ ಶಾರದಾ ಎ. ಅಂಚನ್ ಕೊಡವೂರು ಇವರು ಕಥಾ ವಿಭಾಗದಲ್ಲಿ ದ್ವಿತೀಯ ಬಹುಮಾನವನ್ನು ಪಡೆದಿರುತ್ತಾರೆ.
ಪ್ರಶಸ್ತಿ ಮೊತ್ತವು 7,500 ರುಪಾಯಿ ಇದ್ದು ರಾಜ್ಯದಾದ್ಯಂತದ ಸುಮಾರು 130 ಕ್ಕೂ ಹೆಚ್ಚು ಕಥೆಗಾರರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು ಎಂದು ಕಾರ್ಯಕ್ರಮದ ಆಯೋಜಕರು ತಿಳಿಸಿರುತ್ತಾರೆ. ಹಿರಿಯ ಸಾಹಿತಿ ಬಿ. ಸತ್ಯವತಿ ಭಟ್ ಕಳಚಪ್ಪು ಕಥಾ ಸ್ಪರ್ಧೆಯ ತೀರ್ಪುಗಾರರಾಗಿದ್ದರು.
ಮೂಲತ ದಕ್ಷಿಣ ಕನ್ನಡ ಜಿಲ್ಹೆಯ ಉಡುಪಿ ಕೊಡವೂರಿನವರಾದ ಶ್ರೀಮತಿ ಶಾರದಾ ಎ. ಅಂಚನ್ ಇವರು ಕಳೆದ 28 ವರುಷಗಳಿಂದ ನವಿಮುಂಬಯಿ ಎಂ.ಜಿ.ಎಂ. ಮೆಡಿಕಲ್ ಕಾಲೇಜು ವಿಶ್ವವಿದ್ಯಾಲಯದಲ್ಲಿ ರಕ್ತನಿಧಿಯ ಟೆಕ್ನಾಲಾಜಿಸ್ಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು , ಇದುವರೆಗೆ ಸುಮಾರು 20 ಕೃತಿಗಳನ್ನು ಪ್ರಕಟಿಸಿದ್ದು ಇನ್ನೆರಡು ಕೃತಿಗಳು ಪ್ರಕಟಣೆಗೆ ಸಿದ್ಧವಾಗಿವೆ.

“ಪಾರ್ದನ’ – ತುಳು ಕವನ ಸಂಕಲನಕ್ಕೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ಲ ಕುರ್ಲೆ- ಕಥೆಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮದಿಪು ಸಾಹಿತ್ಯ ಪುರಸ್ಕಾರ, “ನಡೆ ನೀ ಮುಂದೆ’- ಕವನ ಸಂಕಲನಕ್ಕೆ “ಶ್ರೀ ಕ್ಷೇತ್ರ ಧರ್ಮಸ್ಥಳ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ” ರಕ್ತವೇ ಜೀವನದಿ -ವೈದ್ಯಕೀಯ ಕೃತಿಗೆ ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನದ “ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ” ಮತ್ತು ಇದೇ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಇವರಿಂದ – ಡಾ .ಎಚ್. ನರಸಿಂಹಯ್ಯ ದತ್ತಿ ಪ್ರಶಸ್ತಿ , ಇವರ ಮತ್ತೊಂದು ವೈದ್ಯಕೀಯ ಕೃತಿ ” ರಕ್ತಶುದ್ಧಿ-ಆರೋಗ್ಯವೃದ್ಧಿ’ ಗೆ – ಕನ್ನಡ ಸಾಹಿತ್ಯಪರಿಷತ್ತಿನ ” ಬಿಸಲೇರಿ ಜಯಣ್ಣ ಮತ್ತು ಬಿಸಲೇರಿ ಬ್ರದರ್ಸ್ ದತ್ತಿ ಪ್ರಶಸ್ತಿ, “ನಂಬಿ ಸತ್ಯೋಲ್” ತುಳು ಅನುವಾದ ಕೃತಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ದಿ//ಶಿವಾನಂದ ಕರ್ಕೇರ ದತ್ತಿ ಪ್ರಶಸ್ತಿ,”ಅಕೇರಿದ ಎಕ್ಕ್” ತುಳು ಕಾದಂಬರಿಗೆ ತುಳು ಕೂಟ ಉಡುಪಿ ಕೊಡ ಮಾಡುವ ಪ್ರತಿಷ್ಠಿತ ಪಣಿಯಾಡಿ ಪ್ರಶಸ್ತಿ, ಹೀಗೆ ಹತ್ತು ಹಲವಾರು ಪ್ರಶಸ್ತಿಗಳನ್ನು ಪಡೆದಿರುತ್ತಾರೆ.
ಔದ್ಯೋಗಿಕವಾಗಿ ರಕ್ತನಿಧಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇವರು ಇದುವರೆಗೆ ಸುಮಾರು1000ಕ್ಕೂ ಹೆಚ್ಚು ರಕ್ತದಾನ ಶಿಭಿರಗಲ್ಲಿ ಭಾಗವಹಿಸಿದ್ದು ಸ್ವತಃ ತಾನೂ ರಕ್ತದಾನಿಯಾಗಿರುತ್ತಾರೆ. ಶಾರದಾ ಅಂಚನ್ ತನ್ನ ವೃತ್ತಿಯ ಜೊತೆಗೆ ಸಾಹಿತ್ಯ,ಸಂಗೀತ, ಸಾಮಾಜಿಕ ಸೇವೆ ಹೀಗೆ ಹತ್ತು ಹಲವು ಕಾರ್ಯ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ.





