28.4 C
Mumbai
March 7, 2026
Mumbai News Kannada
ಮುಂಬಯಿ

ಲಾಲ್​ಬಾಗ್​ಚ ರಾಜ ಗಣಪ; ಭಕ್ತರ ಚಿನ್ನಾಭರಣ ಕಾಣಿಕೆಗಳ ಹರಾಜು; ಇ ಬಾರಿಯ ಆದಾಯದ ವಿವರ ಇಲ್ಲಿದೆ.





ಮಹಾರಾಷ್ಟ್ರದಲ್ಲಿ ಗಣೇಶೋತ್ಸವವನ್ನು ಬಹಳ ವ್ಯಾಪಕವಾಗಿ, ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಗಣಪತಿಯ ಮೆರವಣಿಗೆ ಎಂದರೆ ಅದರ ವೈಭವವೇ ಅದ್ಭುತ. ಅದರಲ್ಲೂ ಮುಂಬೈನಲ್ಲಿ ಗಣೇಶೋತ್ಸವ ಬೇರೆಯೇ ಮಟ್ಟದ್ದು. ಎಲ್ಲಾ ಗಣೇಶೋತ್ಸವಗಳೂ ಒಂದಕ್ಕಿಂತ ಒಂದು ಮಿಗಿಲು ಎನಿಸುವಂಥವು. ಲಾಲ್​ಬಾಗ್​ಚ ರಾಜ ಎಂದೇ ಸುಪ್ರಸಿದ್ಧಿ ಪಡೆದಿರುವ ಗಣೇಶೋತ್ಸವ ಮಂಡಲ ಜನರ ಸಂಭ್ರಮ, ಸಡಗರಕ್ಕೆ ಸಾಕ್ಷಿಯಾಗಿದೆ. ಪ್ರತೀ ವರ್ಷ ಲಾಲ್​ಬಾಗ್​ಚ ರಾಜನ ಉತ್ಸವ ಬಹಳ ಅದ್ಭುತವಾಗಿ ನಡೆಯುತ್ತದೆ. ಸಾವಿರ, ಲಕ್ಷ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದರ್ಶನ ಪಡೆದು ಹೋಗುತ್ತಾರೆ. ನಗದು ಹಣ, ಚಿನ್ನಾಭರಣ ಇತ್ಯಾದಿ ಕಾಣಿಕೆಗಳನ್ನು ಭಕ್ತರು ಈ ಗಣಪನಿಗೆ ಅರ್ಪಿಸಿ ಹೋಗುತ್ತಾರೆ. ಈ ಕಾಣಿಕೆಗಳ ಮೌಲ್ಯವೇ ಕೋಟಿಗಟ್ಟಲೆ ಇರುತ್ತದೆ. ಭಕ್ತರು ಕಾಣಿಕೆಯಾಗಿ ಸಲ್ಲಿಸಿರುವ ಆಭರಣಗಳಲ್ಲಿ ಕೆಲ ಭಾಗವನ್ನು ಹರಾಜಿನಲ್ಲಿ ಮಾರಲಾಗಿದೆ. ವರದಿ ಪ್ರಕಾರ ಈ ಹರಾಜಿನಲ್ಲಿ 2.35 ಕೋಟಿ ರೂ ಆದಾಯ ಸಿಕ್ಕಿದೆ.

ಸೆಪ್ಟೆಂಬರ್ 8ರಿಂದ 17ರವರೆಗೆ ಲಾಲ್​ಬಾಗ್​ಚ ರಾಜ ಗಣೇಶೋತ್ಸವ ನಡೆದಿತ್ತು. ಈ ವೇಳೆ ಪಂಡಾಲ್​ನಲ್ಲಿ ಇರಿಸಲಾಗಿದ್ದ ದೊಡ್ಡ ಹುಂಡಿಯಲ್ಲಿ 4.15 ಕಿಲೋ ಚಿನ್ನ, 64.3 ಕಿಲೋ ಬೆಳ್ಳಿ ವಸ್ತುಗಳನ್ನು ಭಕ್ತರು ಕಾಣಿಕೆಯಾಗಿ ನೀಡಿದ್ದರು. ಸಣ್ಣ ವಿಗ್ರಹಗಳು, ಕಿರೀಟಗಳು, ಕಡಗಗಳು ಹೀಗೆ ನಾನಾ ರೀತಿಯ ವಸ್ತುಗಳು ಇದರಲ್ಲಿವೆ.

ಮುಕೇಶ್ ಅಂಬಾನಿ ಅವರ ಕೊನೆಯ ಮಗ ಹಾಗೂ ನವವಿವಾಹಿತ ಅನಂತ ಅಂಬಾನಿ 20 ಕಿಲೋ ತೂಕದ ಚಿನ್ನದ ಕಿರೀಟವನ್ನು ಲಾಲ್​ಬಾಗ್​ಚ ರಾಜನಿಗೆ ಅರ್ಪಿಸಿದ್ದರು. 16 ಕೋಟಿ ರೂ ಮೌಲ್ಯದ ಈ ಸ್ವರ್ಣ ಕಿರೀಟ ಖಾಯಂ ಆಗಿ ಉಳಿಯಲಿದೆ. ಇದು ಪ್ರತೀ ವರ್ಷವೂ ನಿರ್ಮಾಣವಾಗುವ ಲಾಲ್​ಬಾಗ್​ಚ ರಾಜ ಗಣಪನ ಶಿರದ ಮೇಲೆ ರಾರಾಜಿಸಲಿದೆ. ಇದು ಬಿಟ್ಟರೆ ಉಳಿದ ಭಕ್ತರ ಚಿನ್ನ, ಬೆಳ್ಳಿ ಕಾಣಿಕೆಗಳನ್ನು ಹರಾಜಿನಲ್ಲಿ ಮಾರಲಾಗುತ್ತಿದೆ.

11 ದಿನಗಳ ಲಾಲ್​ಬಾಗ್​ಚ ರಾಜ ಗಣೇಶೋತ್ಸವದಲ್ಲಿ ಬರೋಬ್ಬರಿ 5.65 ಕೋಟಿ ರೂ ಮೊತ್ತದ ನಗದು ಹಣವೂ ಹುಂಡಿಯಲ್ಲಿ ಬಿದ್ದಿದೆ. ಶನಿವಾರ ಹರಾಜಿನಲ್ಲಿ ಮಾರಲಾಗಿರುವ ವಸ್ತುಗಳೂ ಸೇರಿದಂತೆ ಇಲ್ಲಿಯವರೆಗೆ ಎಂಟು ಕೋಟಿ ರೂ ಮೊತ್ತದ ಆದಾಯ ಸಿಕ್ಕಿದೆ. ಇನ್ನೂ ಹಲವು ಚಿನ್ನ, ಬೆಳ್ಳಿ ಕಾಣಿಕೆಗಳನ್ನು ಮಾರುವುದು ಬಾಕಿ ಇದೆ.

2023ರಲ್ಲಿ ನಡೆದ ಗಣೇಶೋತ್ಸವದಲ್ಲಿ ಲಾಲ್​ಬಾಗ್​ಚ ರಾಜನಿಗೆ ಜನರು ಕೊಟ್ಟಿದ್ದ ಚಿನ್ನದ ಕಾಣಿಕೆಗಳು 3.2 ಕಿಲೋನಷ್ಟಿದ್ದವು. ಎಂಟು ದಿನದಲ್ಲಿ 51.6 ಕಿಲೋ ಬೆಳ್ಳಿ ವಸ್ತುಗಳನ್ನು ಭಕ್ತರು ಕೊಟ್ಟಿದ್ದರು. ಒಂದು ಕಿಲೋ ಚಿನ್ನದ ಸರ, 100 ಗ್ರಾಮ್ ಚಿನ್ನದ ಗಟ್ಟಿಯೂ ಕಾಣಿಕೆಗಳ ಪೈಕಿ ಇದ್ದವು.

2008ರಲ್ಲಿ ಲಾಲ್​ಬಾಗ್​ಚ ರಾಜ ಗಣೇಶೋತ್ಸವದ ಅಮೃತ ಮಹೋತ್ಸವ ಆಗಿತ್ತು. ಅಂದರೆ 75ನೇ ವಾರ್ಷಿಕೋತ್ಸವ ನಡೆದಿತ್ತು. ಆಗ ಭಕ್ತರು ಕೊಟ್ಟ ಕಾಣಿಕೆಗಳನ್ನು ಹರಾಜು ಹಾಕಿ ಮಾರಿದ ಬಳಿಕ 11.5 ಕೋಟಿ ರೂ ಆದಾಯ ಸಿಕ್ಕಿತ್ತು. ಈವರೆಗೆ ಅತಿಹೆಚ್ಚು ಆದಾಯ ಬಂದಿದ್ದು ಆ ವರ್ಷವೇ.



Related posts

ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ – ಮೀರಾ ಭಾಯಂದರ್ ಶಾಖೆಯ ನೂತನ ಪದಾಧಿಕಾರಿಗಳ ಆಯ್ಕೆ

Mumbai News Desk

ಚಿಣ್ಣರಬಿಂಬ ಮುಂಬಯಿ : 22ನೇ ವಾರ್ಷಿಕ ಮಕ್ಕಳ ಉತ್ಸವದ ನಾಟಕೋತ್ಸವ ಸಮಾರೋಪ

Mumbai News Desk

ಗೋರೆಗಾಂವ್ ಶ್ರೀ ಶಾಂತ ದುರ್ಗಾ ದೇವಿ ದೇವಸ್ಥಾನ, ಬ್ರಹ್ಮಕಲಶೋತ್ಸವ ವೈದಿಕ ವಿಧಿ ವಿಧಾನಗಳಿಗೆ ಚಾಲನೆ 

Mumbai News Desk

ನವ ತರುಣ ಮಿತ್ರ ಮಂಡಳ (ರಿ.) ಮೀರಾ ಭಾಯಂದ‌ರ್ ಆಶ್ರಯದಲ್ಲಿ ಮೀರಾ ರೋಡ್ ನಲ್ಲಿ ಅಮ್ಮು.. ಆಮುಂಡರಾ..? ತುಳು ನಾಟಕ,

Mumbai News Desk

 ಶ್ರೀ ಮಹಿಷಮರ್ದಿನಿ ದೇವಸ್ಥಾನ ಟ್ರಸ್ಟ್ ಬೊರಿವಿಲಿ ಶ್ರೀ ವರಮಹಾಲಕ್ಷ್ಮಿ ವ್ರತ ಪೂಜೆ

Mumbai News Desk

ಶ್ರೀ ಮಹಾಲಕ್ಷ್ಮೀ ಭಜನಾ ಮಂಡಳಿ ಅಂಧೇರಿ ಪಶ್ಚಿಮ –  35ನೇ ವಾರ್ಷಿಕ ಮಹಾಪೂಜೆ ಸಂಪನ್ನ, ಹಿರಿಯ ಸೇವಾ ಕರ್ತರಿಗೆ ಗೌರವ

Mumbai News Desk