30.9 C
Mumbai
June 8, 2026
Mumbai News Kannada
ಮುಂಬಯಿ

ಕುಲಾಲ ಸಂಘ ಮುಂಬಯಿ ನವಿ ಮುಂಬಯಿ ಸ್ಥಳೀಯ ಸಮಿತಿಯಿಂದ ಮಂಗಳೂರು ಕುಲಾಲ ಭವನದ ಉದ್ಘಾಟನಾ ಆಹ್ವಾನ ಪತ್ರಿಕೆ ವಿತರಣಾ ಸಮಾರಂಭ





ಸಮಾಜದವರೆಲ್ಲರೂ ಕಾರ್ಯಕ್ರಮಕ್ಕೆ ಸಾಕ್ಷಿಯಾಗಬೇಕು: ರಘು ಎ. ಮೂಲ್ಯ

ನವಿ ಮುಂಬಯಿ, ಅಕ್ಟೋಬರ್ 29: ಕುಲಾಲ ಸಂಘ ಮುಂಬಯಿ, ನವಿ ಮುಂಬಯಿ ಸ್ಥಳೀಯ ಸಮಿತಿಯಿಂದ ಮಂಗಳೂರಿನಲ್ಲಿ ನಿರ್ಮಾಣವಾಗಲಿರುವ ಕುಲಾಲ ಭವನದ ಉದ್ಘಾಟನೆಯ ಆಹ್ವಾನ ಪತ್ರಿಕೆ ವಿತರಣಾ ಕಾರ್ಯಕ್ರಮವು ಶನಿವಾರ, ಅಕ್ಟೋಬರ್ 25 ರಂದು ಸಿಬಿಡಿ ಬೇಲಾಪುರದ ಆಶ್ವಿತ್ ಹೋಟೆಲ್‌ನ ಸಭಾಗೃಹದಲ್ಲಿ ಯಶಸ್ವಿಯಾಗಿ ನೆರವೇರಿತು.

​ಸಂಘದ ಅಧ್ಯಕ್ಷರಾದ ರಘು ಎ. ಮೂಲ್ಯ ಅವರ ಅಧ್ಯಕ್ಷತೆಯಲ್ಲಿ ಹಾಗೂ ಗೌರವ ಅಧ್ಯಕ್ಷರಾದ ದೇವದಾಸ್ ಕುಲಾಲ್, ಉಪಾಧ್ಯಕ್ಷರಾದ ಡಿ.ಐ. ಮೂಲ್ಯ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷರಾದ ಸುಚಿತ ಬಂಜನ್, ಸ್ಥಳೀಯ ಸಮಿತಿಯ ಉಪ ಕಾರ್ಯಾಧ್ಯಕ್ಷರಾದ ಕೃಪೇಶ್ ಕುಲಾಲ್ ಹಾಗೂ ಇತರ ಗಣ್ಯರ ಉಪಸ್ಥಿತಿಯಲ್ಲಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಉಷಾ ಆರ್. ಮೂಲ್ಯ ಮತ್ತು ರೇಖಾ ಮೂಲ್ಯ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಕಾರ್ಯಾಧ್ಯಕ್ಷರಾದ ಸದಾನಂದ್ ಕುಲಾಲ್ ಮತ್ತು ಕಾರ್ಯಾಧ್ಯಕ್ಷೆ ಬೇಬಿ ವಿ. ಬಂಗೇರ ಅವರಿಗೆ ಆಮಂತ್ರಣ ಪತ್ರಿಕೆ ನೀಡುವ ಮೂಲಕ ವಿತರಣಾ ಪ್ರಕ್ರಿಯೆಯನ್ನು ಆರಂಭಿಸಲಾಯಿತು.

​ಸಂಘದ ಅಧ್ಯಕ್ಷರಾದ ರಘು ಮೂಲ್ಯ ಅವರು ಮಾತನಾಡಿ, ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅದನ್ನು ಯಶಸ್ವಿಗೊಳಿಸಬೇಕು ಎಂದು ವಿನಂತಿಸಿದರು. “ನಮ್ಮ ಸಮಾಜ ಒಮ್ಮತದಿಂದ, ಒಗ್ಗಟ್ಟಾಗಿ, ನಮ್ಮ ಭವನದ ಲೋಕಾರ್ಪಣೆಯ ದಿನದಂದು ನಾವೆಲ್ಲ ಮಂಗಳಾದೇವಿ ದೇವಸ್ಥಾನದ ಸಮೀಪವಿರುವ ಕುಲಾಲ ಭವನದಲ್ಲಿ ಸೇರಿ, ಅಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಸಾಕ್ಷಿಯಾಗಬೇಕು” ಎಂದು ಮನವಿ ಮಾಡಿದರು.

​ಗೌರವಾಧ್ಯಕ್ಷರಾದ ದೇವದಾಸ್ ಕುಲಾಲ್ ಅವರು ಪ್ರಸ್ತಾವಿಕ ಭಾಷಣದಲ್ಲಿ, “ನಾವು ಆರ್ಥಿಕವಾಗಿ ಅತ್ಯಂತ ದುಸ್ಥಿತಿಯಲ್ಲಿದ್ದರೂ, ರಾಜಕೀಯವಾಗಿ ಹಿನ್ನಡೆಯನ್ನು ಅನುಭವಿಸಿರುವ ಸಮಾಜದ ಮೂಲ ಅಗತ್ಯತೆಗಳನ್ನು ದಕ್ಕಿಸಿ, ನಮ್ಮ ಕುಲಾಲ ಬಾಂಧವರಿಗೆ ಪ್ರತಿಯೊಂದು ರಂಗದಲ್ಲೂ ಸಮಾಜದ ಒಟ್ಟಿಗೆ ಇರಲು ಅನುವು ಮಾಡಿಕೊಡಬೇಕು. ಮಣ್ಣಿನ ಮಡಿಕೆಯಂತಿರುವ ನಮ್ಮ ಬದುಕು ಮತ್ತು ಅದರ ರಕ್ಷಣೆಯೇ ಇಂದು ಬಹು ದೊಡ್ಡ ಸವಾಲಾಗಿದೆ. ಇದಕ್ಕಾಗಿಯೇ ನಮ್ಮ ಕುಲಾಲ ಭವನ ನಿರ್ಮಾಣಗೊಂಡಿದೆ. ನಾವೆಲ್ಲ ಒಗ್ಗೂಡಿ ಅಲ್ಲಿಗೆ ಬಂದು ಶಕ್ತಿ ತುಂಬಬೇಕು” ಎಂದು ನುಡಿದರು.

​ಕಾರ್ಯಕ್ರಮದ ಸಮಗ್ರ ಮಾಹಿತಿಯನ್ನು ದಿನೇಶ್ ಕುಲಾಲ್ ಅವರು ನೀಡಿದರು ಮತ್ತು ಸಮಾಜ ಬಾಂಧವರು ಸಮಯವನ್ನು ಮಾಡಿಕೊಂಡು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಕೋರಿದರು.

​ಸಂಘದ ಉಪಾಧ್ಯಕ್ಷರಾದ ಡಿ.ಐ. ಮೂಲ್ಯ ಅವರು ಮಾತನಾಡಿ, “ಸಂಘದ ಈ ಭವನವು ದಾನಿಗಳ ಮತ್ತು ನಮ್ಮೆಲ್ಲರ ಸಹಕಾರದಿಂದ ರೂಪುಗೊಂಡಿದ್ದು, ಮುಂದೆ ಸಮಾಜದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ಆರೋಗ್ಯದ ಹಿತಾಸಕ್ತಿಗಾಗಿ ಸಹಕಾರಿಯಾಗಲಿದೆ. ಆದ್ದರಿಂದ ಪ್ರತಿಯೊಬ್ಬರೂ ಇದರಲ್ಲಿ ಸಮಾನವಾಗಿ ಪಾಲುಗೊಳ್ಳಬೇಕು” ಎಂದು ತಿಳಿಸಿದರು.

​ಮಹಿಳಾ ಕಾರ್ಯಾಧ್ಯಕ್ಷೆ ಸುಚಿತ ಬಂಜನ್, ಜೊತೆ ಕಾರ್ಯದರ್ಶಿ ಲಕ್ಷ್ಮಣ್ ಸಿ. ಮೂಲ್ಯ ಹಾಗೂ ಮೀರಾ ರೋಡ್ ವಿರಾರ್ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷರಾದ ಶಂಕರ್ ವೈ. ಮೂಲ್ಯ ಅವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

​ಭವನಕ್ಕೆ ಸಹಕರಿಸಿದ ದಾನಿಗಳನ್ನು ಈ ಸಂದರ್ಭದಲ್ಲಿ ವಿಶೇಷವಾಗಿ ಸನ್ಮಾನಿಸಲಾಯಿತು.

​ಮಹಿಳಾ ವಿಭಾಗದ ಸ್ಥಳೀಯ ಸಮಿತಿಯ ಉಪ ಕಾರ್ಯಾಧ್ಯಕ್ಷೆ ಶೋಭಾ ಎನ್. ಬಂಗೇರ ಅವರು ಬರೆದು ನಿರ್ದೇಶಿಸಿದ “ನಮ್ಮ ಊರುಗು ಪೋಪಿನ ಗಮ್ಮತ್” ಎಂಬ ಕಿರು ನಾಟಕ ಹಾಗೂ ಭವ್ಯ ಮತ್ತು ಉಷಾ ಮೂಲ್ಯರ ನೇತೃತ್ವದಲ್ಲಿ ನಡೆದ “ಊರುದ ಭವನದ ಪೊರ್ಲು ತೂಕ” ಎಂಬ ಸಂಗೀತದ ಗ್ರೂಪ್ ಡ್ಯಾನ್ಸ್ ಜನ ಮೆಚ್ಚುಗೆ ಗಳಿಸಿತು.

ಸಾನ್ವಿ ಬಂಗೇರ ಅವರು ಪೂಜಾ ನೃತ್ಯವನ್ನು ಪ್ರದರ್ಶಿಸಿದರು. ಯುವ ವಿಭಾಗದ ದೀಕ್ಷಾ ಮೂಲ್ಯ ಅವರ ನೃತ್ಯ ಸಂಯೋಜನೆಯಲ್ಲಿ ಯುಕ್ತಿ ಕುಲಾಲ್, ನವೀಸ್ತಾ ಮೂಲ್ಯ ಮತ್ತು ಸಾನ್ವಿ ಬಂಗೇರ ಅವರಿಂದ ಗ್ರೂಪ್ ಡ್ಯಾನ್ಸ್ ಪ್ರದರ್ಶನಗೊಂಡಿತು.

​ಅಮೂಲ್ಯ ತ್ರೈಮಾಸಿಕ ಪತ್ರಿಕೆಯ ಸಂಪಾದಕ ಆನಂದ್ ಬಿ. ಮೂಲ್ಯ, ಜ್ಯೋತಿ ಕೋ-ಆಫ್ ಕ್ರೆಡಿಟ್ ಸೊಸೈಟಿಯ ಕಾರ್ಯದರ್ಶಿ ಶೇಖರ್ ಮೂಲ್ಯ, ಬಿ.ಜಿ. ಅಂಚನ್, ಕಟ್ಟಡ ನಿರ್ಮಾಣ ಸಮಿತಿಯ ಕಾರ್ಯದರ್ಶಿ ಉಮೇಶ್ ಬಂಗೇರ, ಸ್ಥಳೀಯ ಸಮಿತಿಯ ಕೋಶಾಧಿಕಾರಿ ಸಿ.ಎ. ಅಕ್ಷತ್ ಮೂಲ್ಯ, ಕ್ರೀಡೆ ಮತ್ತು ಸಾಂಸ್ಕೃತಿಕ ಸಂಚಾಲಕ ಪ್ರಸಾದ್ ಮೂಲ್ಯ, ಜೊತೆ ಕಾರ್ಯದರ್ಶಿ ಆನಂದ್ ಆರ್. ಮೂಲ್ಯ, ಜೊತೆ ಕೋಶಾಧಿಕಾರಿ ಜನಾರ್ಧನ ಕುಲಾಲ್, ಹಾಗೂ ಮಹಿಳಾ ವಿಭಾಗದ ಪ್ರೇಮ ಮೂಲ್ಯ, ಆಶಾ ಮೂಲ್ಯ ಮತ್ತು ಸಂಚಲ ಮೂಲ್ಯ ಅವರು ಕಾರ್ಯಕ್ರಮಕ್ಕೆ ಸಹಕರಿಸಿದರು.

​ಕಾರ್ಯಕ್ರಮವನ್ನು ಕಾರ್ಯದರ್ಶಿ ಎಲ್.ಆರ್. ಮೂಲ್ಯ ಮತ್ತು ಉಪಾಧ್ಯಕ್ಷರಾದ ಕೃಪೇಶ್ ಕುಲಾಲ್ ಅವರು ನಿರೂಪಿಸಿದರು. ಅಶ್ವಿತ್ ಹೋಟೆಲ್‌ನ ಮಾಲಕರಾದ ಸಂಜೀವ ಶೆಟ್ಟಿಯವರು ಹೋಟೆಲ್ ಸಭಾಗೃಹ ಮತ್ತು ಚಾ-ತಿಂಡಿ ನೀಡಿ ಸಹಕಾರ ನೀಡಿದರು.

​ಕೋಶಾಧಿಕಾರಿ ಜಯ ಅಂಚನ್ ಅವರು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ವಂದನಾರ್ಪಣೆಯನ್ನು ಮಾಡಿದರು.



Related posts

ಮಲಾಡ್: ಪ್ರಜ್ವಲ್ ಎಸ್. ನಾಯಕ್‌ಗೆ ಶೇ. 89 ಅಂಕ

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ ಭಾವೀಶ್ ಮನೋಹರ್ ಶೆಟ್ಟಿ ಗೆ ಶೇ 90.60 ಅಂಕ.

Mumbai News Desk

ಹಿಂದೂ ಜೂನಿಯರ್ ಕಾಲೇಜು ಶಿರ್ವ ಹಳೆ ವಿದ್ಯಾರ್ಥಿ ಸಂಘದ ಮುಂಬಯಿ ಸಮಿತಿಯ  ಕುಟುಂಬೋತ್ಸವ ಹಾಗೂ ದಶಮಾನೋತ್ಸವದ  ವಿಜಯೋತ್ಸವ

Mumbai News Desk

ಬಂಟ್ಸ್ ಫೋರಮ್ ಮೀರಾ ಭಾಯಂದರ್ ವತಿಯಿಂದ ‘ಆಟಿಡೊಂಜಿ ದಿನ’ ಆಚರಣೆ.

Mumbai News Desk

ಕುರ್ಲಾ ಬಂಟರ ಭವನದಲ್ಲಿ ಗುರು ಪೂರ್ಣಿಮೆ ಆಚರಣೆ, 

Mumbai News Desk

ದಹಿಸರ್‌ನಲ್ಲಿ 19ನೇ ವರ್ಷದ ಅಯ್ಯಪ್ಪ ಸ್ವಾಮಿ ಮಹಾಪೂಜೆ ಸಂಭ್ರಮ

Mumbai News Desk