
ಭಜನಾ ಸೇವೆಯ ಮೂಲಕ ಮಹಿಳೆಯರ ಒಗ್ಗಟ್ಟು: ಶ್ರೀಮತಿ ಆಚಾರ್ಯ
ಮುಂಬಯಿ: ಮಲಾಡ್ ಪೂರ್ವದ ತುಳು ಕನ್ನಡಿಗರು ಸ್ಥಾಪಿಸಿರುವ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಇದರ ಮಹಿಳಾ ವಿಭಾಗದ ಭಜನಾ ಮಂಡಳಿಯ ವರ್ಷಾಚರಣೆಯು ಮಲಾಡ್ ಪೂರ್ವದ ಪುಷ್ಪ ಪಾರ್ಕ್ನಲ್ಲಿರುವ ಉತ್ಕರ್ಷ ವಿದ್ಯಾಮಂದಿರದಲ್ಲಿ ಮಾ. 22ರಂದು ನೆರವೇರಿತು.

ಸಮಿತಿಯ ಅಧ್ಯಕ್ಷರಾದ ನ್ಯಾಯವಾದಿ ಜಗನ್ನಾಥ್ ಎನ್. ಶೆಟ್ಟಿ ಪಣಿಯೂರು ಇವರ ಮಾರ್ಗದರ್ಶನದಲ್ಲಿ ವರ್ಷಪೂರ್ತಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬರುತ್ತಿರುವ ಪೂಜಾ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಕುಮರೇಶ್ ಆಚಾರ್ಯ ಅವರ ನೇತೃತ್ವದಲ್ಲಿ ಭಜನಾ ಮಂಡಳಿಯು ನಗರದ ವಿವಿಧ ಉಪನಗರಗಳ ಮಂದಿರಗಳಲ್ಲಿ ಹಾಗೂ ಮನೆಗಳಲ್ಲಿ ಭಜನೆಗಳನ್ನು ನಡೆಸುತ್ತಾ ಬರುತ್ತಿದೆ.

ಮಾರ್ಚ್ 22ರಂದು ನಡೆದ ಭಜನಾ ವರ್ಷಾಚರಣೆಯ ಸಂದರ್ಭದಲ್ಲಿ ಭಜನೆ, ಮಂಗಳಾರತಿ ಹಾಗೂ ಪ್ರಸಾದ ವಿತರಣೆ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಕುಮರೇಶ್ ಆಚಾರ್ಯ ಅವರು, “ಸಮಿತಿಯ ಭಜನಾ ಮಂಡಳಿಯಲ್ಲಿ ಮಹಿಳೆಯರು ಗುರುಗಳಾದ ಶ್ರೀಧರ್ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಭಜನಾ ಅಭ್ಯಾಸ ಮಾಡುತ್ತಿದ್ದಾರೆ. ವಾರಕ್ಕೊಮ್ಮೆ ಒಟ್ಟಾಗಿ ಭಜನೆ ಮಾಡುತ್ತಾ ನಮ್ಮ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳುತ್ತೇವೆ. ಭಜನಾ ಸೇವೆಯ ಮೂಲಕ ಮಹಿಳೆಯರ ಒಗ್ಗಟ್ಟು ಬಲಿಷ್ಠಗೊಂಡಿದೆ” ಎಂದರು.

ಈ ಸಮಾರಂಭದಲ್ಲಿ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಕಾರ್ಯಕಾರಿ ಸಮಿತಿಯ ಸಂಚಾಲಕರಾದ ದಿನೇಶ್ ಕುಲಾಲ್, ಉಪಾಧ್ಯಕ್ಷ ವಿ. ಕುಮರೇಶ್ ಆಚಾರ್ಯ, ಕಾರ್ಯದರ್ಶಿ ಸನತ್ ಪೂಜಾರಿ ಕೆಲ್ಲಪುತ್ತಿಗೆ, ಕೋಶಾಧಿಕಾರಿ ಸುರೇಂದ್ರ ಆಚಾರ್ಯ, ಜೊತೆ ಕಾರ್ಯದರ್ಶಿ ಲಕ್ಷ್ಮಣ್ ರಾವ್ ಹಾಗೂ ರಘುರಾಮ ನಾಯಕ್, ಶಶಿಧರ್ ಹೆಗ್ಡೆ, ಜಯ ಪೂಜಾರಿ ಉಪಸ್ಥಿತರಿದ್ದರು.

ಮಹಿಳಾ ವಿಭಾಗದ ಕಾರ್ಯದರ್ಶಿ ಶೀಲಾ ಮಹಾಬಲ ಪೂಜಾರಿ, ಕೋಶಾಧಿಕಾರಿ ನಳಿನಿ ಪಿ. ಕರ್ಕೇರ, ಉಪಕಾರ್ಯಾಧ್ಯಕ್ಷೆಯರಾದ ಗೀತಾ ಜೆ. ಮೆಂಡನ್, ಸಂಧ್ಯಾ ಎಸ್. ಪ್ರಭು, ಜೊತೆ ಕೋಶಾಧಿಕಾರಿ ಶೋಭಾ ಎಲ್. ರಾವ್, ವಿದ್ಯಾ ನಾಯಕ್, ಜೊತೆ ಕಾರ್ಯದರ್ಶಿಯರಾದ ವಿದ್ಯಾ ಆಚಾರ್ಯ ಮತ್ತು ಭಾರತಿ ಆಚಾರ್ಯ ಉಪಸ್ಥಿತರಿದ್ದರು. ಅಲ್ಲದೆ ಯುವ ವಿಭಾಗದ ಕಾರ್ಯಾಧ್ಯಕ್ಷ ಸುದೀಪ್ ಪೂಜಾರಿ, ಸಂಚಾಲಕರಾದ ಡಾ. ಶಶಿನ್ ಆಚಾರ್ಯ ಮತ್ತಿತರರು ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ಭಜನಾ ಗುರುಗಳಾದ ಶ್ರೀಧರ್ ಶೆಟ್ಟಿ ಮೀರಾ ರೋಡ್ ಮತ್ತು ತಬಲ ವಾದಕರಾದ ಸುರೇಂದ್ರ ಆಚಾರ್ಯ ಅವರನ್ನು ಮಹಿಳಾ ವಿಭಾಗದ ಸದಸ್ಯೆಯರೆಲ್ಲರೂ ಸೇರಿ ಗೌರವಿಸಿದರು.
ಸನತ್ ಪೂಜಾರಿ ಕೆಲ್ಲಪುತ್ತಿಗೆ ಪ್ರಾರ್ಥಿಸಿದರು. ಶೀಲಾ ಮಹಾಬಲ ಪೂಜಾರಿ ಧನ್ಯವಾದ ಅರ್ಪಿಸಿದರು.




