
ಇಂದಿನ ಪೀಳಿಗೆಗೆ ಮಾನಸಿಕ ಚಟುವಟಿಕೆಯೊಂದಿಗೆ ದೈಹಿಕ ವ್ಯಾಯಾಮವೂ ಅನಿವಾರ್ಯ – ಗಣೇಶ್ ಕಾಂಚನ್
ಮುಂಬಯಿ: ಎಪ್ರಿಲ್ 12 ತಿಂಗಳಾಯ ಮೂಲಸ್ಥಾನ ಸಭಾ, ಮುಂಬಯಿ ಶಾಖೆಯ ಮಹಿಳಾ ವಿಭಾಗದ ವತಿಯಿಂದ ‘ಮಹಿಳಾ ದಿನಾಚರಣೆ’ ಮತ್ತು ‘ಸಾಧಕಿಯರಿಗೆ ಸನ್ಮಾನ’ ಕಾರ್ಯಕ್ರಮವು ಇತ್ತೀಚೆಗೆ ಅಂಧೇರಿ ಪಶ್ಚಿಮದ ಮೊಗವೀರ ವ್ಯವಸ್ಥಾಪಕ ಮಂಡಳಿಯ ಕಿರು ಸಭಾಗೃಹದಲ್ಲಿ ಅತ್ಯಂತ ವೈಭವದಿಂದ ಜರುಗಿತು.

ಮಹಿಳಾ ವಿಭಾಗದ ಅಧ್ಯಕ್ಷೆ ಶ್ರೀಮತಿ ಜಯಂತಿ ಉತ್ತಮ್ ಸಾಲ್ಯಾನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭಕ್ಕೆ ಮೊಗವೀರ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷ ಶ್ರೀ ಗಣೇಶ್ ಕಾಂಚನ್ ಗೌರವ ಅತಿಥಿಯಾಗಿ ಹಾಗೂ ಭರತನಾಟ್ಯ ಕಲಾವಿದೆ ಶ್ರೀಮತಿ ಸರಿತಾ ಬಾಲ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.

ವೇದಿಕೆಯಲ್ಲಿ ತಿಂಗಳಾಯ ಮೂಲಸ್ಥಾನ ಸಭಾದ ಅಧ್ಯಕ್ಷ ಶ್ರೀ ಯಗ್ನೇಶ್ ಅಮೀನ್, ಕಾರ್ಯದರ್ಶಿ ಶ್ರೀ ನಾರಾಯಣ ತಿಂಗಳಾಯ, ಕೋಶಾಧಿಕಾರಿ ಶ್ರೀ ಹರೀಶ್ ಗುರಿಕಾರ, ಮಹಿಳಾ ವಿಭಾಗದ ಅಧ್ಯಕ್ಷೆ ಶ್ರೀಮತಿ ಜಯಂತಿ ಸಾಲ್ಯಾನ್, ಕಾರ್ಯದರ್ಶಿ ಸುಪ್ರಿತಾ ಮಾಧವ ಕರ್ಕೇರ ಹಾಗೂ ಕೋಶಾಧಿಕಾರಿ ಹೇಮಾವತಿ ಸುಕುಮಾರ್ ತಿಂಗಳಾಯ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ ವಿದುಷಿ ಶ್ರೀಮತಿ ಶ್ರೀಪ್ರಜ್ಞಾ ಮಯೂರ ಕಾಂಚನ್ ಹಾಗೂ ಶ್ರೀಮತಿ ಸುಷ್ಮಾ ಸಂತೋಷ್ ಪುತ್ರನ್ ಅವರಿಗೆ ಮಹಿಳಾ ಸಾಧಕಿ-2026 ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಲ್ಲದೆ, ತಿಂಗಳಾಯ ಮೂಲಸ್ಥಾನ ಪ್ರಧಾನ ಸಭಾ-ಕದಿಕೆಯ ಉಪಾಧ್ಯಕ್ಷರಾದ ಶ್ರೀ ನಾರಾಯಣ ಕಲ್ಯಾಣ್ ಪುರ್ ದಂಪತಿಗಳನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಮಹಿಳಾ ವಿಭಾಗದ ಆರು ಯುವ ಪ್ರತಿಭೆಗಳಿಗೆ ‘ಸ್ಟಾರ್ ಎಕ್ಸೆಲೆನ್ಸ್ ಅವಾರ್ಡ್-2026’ನೀಡಿ ಪ್ರೋತ್ಸಾಹಿಸಲಾಯಿತು.

ಮುಖ್ಯ ಅತಿಥಿಯಾಗಿ ಮಾತನಾಡಿದ ಶ್ರೀ ಗಣೇಶ್ ಕಾಂಚನ್ ಅವರು
“ಇಂದಿನ ಮೊಬೈಲ್ ಯುಗದಲ್ಲಿ ಯುವಜನತೆ ಡಿಜಿಟಲ್ ಲೋಕದಲ್ಲಿ ಕಲಿಯುವುದು ಸಾಕಷ್ಟಿದೆ, ಆದರೆ ಅದರೊಂದಿಗೆ ದೈಹಿಕ ಚಟುವಟಿಕೆಗಳು ಅತೀ ಮುಖ್ಯ. ನಮ್ಮ ಸಮಾಜದ ಹೆಮ್ಮೆಯ ಸಂಸ್ಥೆ ಮೊಗವೀರ ವ್ಯವಸ್ಥಾಪಕ ಮಂಡಳಿಯು ಸದಸ್ಯರಿಗೆ ಉತ್ತಮ ವೈದ್ಯಕೀಯ ಸೌಲಭ್ಯವನ್ನು ಒದಗಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ.
ಕ್ಯಾನ್ಸರ್ ನಂತಹ ಮಾರಣಾಂತಿಕ ರೋಗಗಳು ಹೆಚ್ಚುತ್ತಿರುವ ಈ ಕಾಲದಲ್ಲಿ ಮೊಗವೀರ ವ್ಯವಸ್ಥಾಪಕ ಮಂಡಳಿಯು ಸದಸ್ಯರಿಗೆ ಪೆಟ್ ಸ್ಕ್ಯಾನ್, ಸಿಟಿ ಸ್ಕ್ಯಾನ್ ನಂತಹ ದುಬಾರಿ ಪರೀಕ್ಷೆಗಳಿಗೆ ವಿಶೇಷ ರಿಯಾಯಿತಿ ಸೌಲಭ್ಯ ನೀಡುತ್ತಿದೆ. ಸಮುದಾಯದ ಬಾಂಧವರು ಇದರ ಸದುಪಯೋಗ ಪಡೆಯಬೇಕು,” ಎಂದು ಕರೆ ನೀಡಿದರು. ಅವರು ಮುಂದುವರಿಯುತ್ತಾ
ತಿಂಗಳಾಯ ಮೂಲಸ್ಥಾನ, ಮುಂಬಯಿ ಶಾಖೆಯ ಮಹಿಳಾ ವಿಭಾಗದ ಅಧ್ಯಕ್ಷೆ ಶ್ರೀಮತಿ ಜಯಂತಿ ಉತ್ತಮ್ ಸಾಲ್ಯಾನ್ ಹಾಗೂ ಕಾರ್ಯದರ್ಶಿ ಸುಪ್ರಿತಾ ಮಾಧವ ಕರ್ಕೇರ ಅವರ ಸಮರ್ಥ ಮುಂದಾಳತ್ವದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನಮೆಚ್ಚುಗೆ ಪಡೆಯುತ್ತಾ ಬಂದಿರುವುದು ಮೊಗವೀರ ಮಹಿಳೆಯರು ಹೆಮ್ಮೆ ಪಡಬೇಕಾದ ವಿಷಯ. ನೆರೆದಿರುವ ಸರ್ವ ಮಹಿಳೆಯರಿಗೆ ಮಹಿಳಾ ದಿನಾಚರಣೆಯ ಶುಭಾಶಯಗಳು ಎಂದು ನುಡಿದರು.

ಮತ್ತೊಬ್ಬ ಅತಿಥಿ ಶ್ರೀಮತಿ ಸರಿತಾ ಬಾಲ ಅವರು ಭರತನಾಟ್ಯದಿಂದ ದೊರೆಯುವ ದೈಹಿಕ ಲಾಭಗಳ ಬಗ್ಗೆ ವಿವರಿಸಿದರೆ, ಯೋಗ ಶಿಕ್ಷಕಿ ಶ್ರೀಮತಿ ಕವಿತಾಅವರು ಮಾನಸಿಕ ಸಮತೋಲನ ಕಾಯ್ದುಕೊಳ್ಳುವಲ್ಲಿ ಯೋಗದ ಪಾತ್ರವನ್ನು ಮನವರಿಕೆ ಮಾಡಿಕೊಟ್ಟರು.
ಇದೇ ಸಂದರ್ಭದಲ್ಲಿ ಮುಂಬಯಿ ಶಾಖೆಯ ಗೌ.ಪ್ರ. ಕಾರ್ಯದರ್ಶಿ ಶ್ರೀ ನಾರಾಯಣ ತಿಂಗಳಾಯ ಅವರು ಮುಂಬಯಿ ಶಾಖೆಯ ಚಟುವಟಿಕೆಗಳ ಬಗ್ಗೆ ತಿಳಿಸಿದರು. ಸನ್ಮಾನ ಸ್ವೀಕರಿಸಿದ ಶ್ರೀ ನಾರಾಯಣ ಕಲ್ಯಾಣ್ ಪುರ್ ಸನ್ಮಾನಕ್ಕೆ ಕೃತಜ್ಞತೆ ಸೂಚಿಸಿದರು.

ಕಾರ್ಯಕ್ರಮವು ಶ್ರೀಮತಿ ಯಾದವಿ ಮಾಧವ ಕರ್ಕೇರ, ಶ್ರೀಮತಿ ಸುಮತಿ ಐತಪ್ಪ ತಿಂಗಳಾಯ ಹಾಗೂ ಶ್ರೀಮತಿ ಜ್ಯೋತಿ ಧನರಾಜ್ ಹೆಜಮಾಡಿ ಅವರ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಮಹಿಳಾ ವಿಭಾಗದ ಅಧ್ಯಕ್ಷೆ ಜಯಂತಿ ಉತ್ತಮ್ ಸಾಲ್ಯಾನ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಭೆಯ ಆಕರ್ಷಣೆಯಾಗಿ ನಡೆದ ಭರತನಾಟ್ಯ ಹಾಗೂ ಸಂಗೀತ ಕಾರ್ಯಕ್ರಮಗಳು ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿದವು. ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದ ತಿಂಗಳಾಯ ಮೂಲಸ್ಥಾನದ ಬಾಂಧವರು ಕಾರ್ಯಕ್ರಮದ ಯಶಸ್ಸಿಗೆ ಕಾರಣೀಭೂತರಾದರು.. ಸುಪ್ರಿತಾ ಕರ್ಕೇರ ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು.
ಸಭೆಯ ಕೊನೆಯಲ್ಲಿ ಪ್ರೀತಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು.





