
5 ಜೂನ್ 26,ಕಲ್ಯಾಣ(ಪ):”ಪ್ರತಿಯೊಬ್ಬ ಮನುಷ್ಯನಿಗೆ ತನ್ನ ಸಾಮಾಜಿಕ ಜ್ಞಾನದೊಂದಿಗೆ ಭಗವಂತನ ಜ್ಞಾನವೂ ಅಷ್ಟೇ ಮುಖ್ಯ. ಸಮಸ್ತ ಜಗದ ನಿರ್ಮಾತ ಭಗವಂತನ ಹೊರತು ತನ್ನದೇನೂ ಇಲ್ಲ. ಭಗವಧ್ಗೀತೆಯಲ್ಲಿ ಉದ್ಘೋಷಿಸಿದ ಕರ್ಮಯೋಗ, ಜ್ಞಾನ ಯೋಗ ಹಾಗೂ ಭಕ್ತಿ ಯೋಗ ಮನುಷ್ಯನ ಆತ್ಮೋನ್ನತಿಯ ಸರಳ ಮಾರ್ಗಗಳು” ಎಂದು ತಿಳಿಸುವ ‘ಭಕ್ತ ಸುದಾಮ’ ನ ಹರಿಕಥಾ ಕಾರ್ಯಕ್ರಮವನ್ನು 27 ಜೂನ್ 26 ರಂದು ಸಂಜೆ ಕಲ್ಯಾಣ(ಪ)ದ ಬ್ರಾಹ್ಮಣ ಸೊಸೈಟಿ ಸಭಾಗೃಹದಲ್ಲಿ ವಿದುಷಿ ಪ್ರತಿಮಾ ಕೋಡೂರು ರವರು ವಿದ್ವತ್ಪೂರ್ಣ ವಾಗಿ ಸಭಿಕರ ಮನಮುಟ್ಟುವಂತೆ ನಡೆಸಿಕೊಟ್ಟರು.

ಸಂಘದ ಪೂರ್ವ ಅಧ್ಯಕ್ಷ ದಿ. ಶ್ರೀ ಟಿ. ಎಸ್. ಉಪಾಧ್ಯಾಯರ ಸ್ಮರಣಾರ್ಥ ಅವರ ಧರ್ಮ ಪತ್ನಿ ಪುಷ್ಪ ಉಪಾಧ್ಯಾಯರು ಪ್ರಾಯೋಜಿಸಿದ ಈ ಕಾರ್ಯಕ್ರಮ ಸಂಘದ ಗಣ್ಯರಿಂದ ದೀಪ ಪ್ರಜ್ವಲನೆಯೊಂದಿಗೆ ಪ್ರಾರಂಭವಾಯಿತು.

ಸಂಘದ ಪೂರ್ವ ಅಧ್ಯಕ್ಷೆ ದರ್ಶನಾ ಸೋನ್ಕರ್ ಕೀರ್ತನಕಾರರನ್ನು ಪರಿಚಯಿಸಿ, ಗಣ್ಯರು ಅವರನ್ನು ಶಾಲು ಸ್ಮರಣಿಕೆಯೊಂದಿಗೆ ಸತ್ಕರಿಸಿದರು. ಸುಮಾರು ಎರಡು ತಾಸುಗಳ ಕಾಲ ನಡೆದ ಈ ಹರಿಕಥಾ ಕಾರ್ಯಕ್ರಮ ಸಭಿಕರನ್ನು ಭಗವಂತನ ಸ್ಮರಣೆಯಲ್ಲಿ ತಲ್ಲೀನಗೊಳಿಸಿತು. ಸಂಗೀತಮಯ, ಭಕ್ತಿಮಯವಾದ ಈ ಕಾರ್ಯಕ್ರಮದಲ್ಲಿ ಶ್ರೀ ಮಾನಸ ಬಂಗೇರರವರು ಸಮರ್ಪಕವಾಗಿ ತಬಲಾದೊಂದಿಗೆ ಸಹಕರಿಸಿದರು. ಸಂಘದ ಮಹಿಳಾಧ್ಯಕ್ಷೆ ಶ್ರೀಮತಿ ವೀಣಾ ಕಾಮತ್ ರವರ ವಂದನಾರ್ಪಣೆ ಹಾಗೂ ರುಚಿಕರ ಪ್ರೀತಿ ಭೋಜನದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.




