
ಮುಂಬಯಿ : ಮಹಾನಗರದ ಹೆಸರಾಂತ ಛಾಯಾಚಿತ್ರಕಾರ ಭಾಸ್ಕರ್ ಮೂಲ್ಯ (ನಲಾಸೋಪಾರ) ಹಾಗೂ ದಿ. ಇಂದಿರಾ ಬಿ. ಮೂಲ್ಯ ಅವರ ಸುಪುತ್ರಿ ಕೀರ್ತಿಶ್ರೀ ಭಾಸ್ಕರ್ ಮೂಲ್ಯ ಅವರ ಶ್ರೀ ಕಟೀಲೇಶ್ವರಿ ನಾಟ್ಯ ಕಲಾ ಮಂದಿರದ ದ್ವಿತೀಯ ವಾರ್ಷಿಕೋತ್ಸವವು ಜುಲೈ 5ರಂದು ಮೀರಾರೋಡ್ ಪೂರ್ವದ ಮಹಾಜನ್ ವಾಡಿಯಲ್ಲಿರುವ ಭಾರತ ರತ್ನ ಗಾನಸಾಮ್ರಾಜ್ಞಿ ಲತಾ ಮಂಗೇಶ್ಕರ್ ನಾಟ್ಯ ಗೃಹ ಸಭಾಂಗಣದಲ್ಲಿ ಭಕ್ತಿಭಾವ ಹಾಗೂ ಸಾಂಸ್ಕೃತಿಕ ವೈಭವದೊಂದಿಗೆ ನೆರವೇರಿತು.

ಕಾರ್ಯಕ್ರಮದಲ್ಲಿ ಮೀರಾ-ಬಾಯಂಧರ್ನ ಸೈಂಟ್ ಅಗ್ನೆಸ್ ಇಂಗ್ಲಿಷ್ ಶಿಕ್ಷಣ ಸಂಸ್ಥೆಯ ಪ್ರಮುಖರಾದ ಡಾ. ಅರುಣೋದಯ ರೈ, ಶ್ರೀಮತಿ ವಸಂತಿ ಶಿವ ಶೆಟ್ಟಿ, ಶ್ರೀ ಸಾಯಿನಾಥ ಎ. ಶೆಟ್ಟಿ ಮುಂಡ್ಕೂರು ಹಾಗೂ ಯಕ್ಷಗುರು ನಾಗೇಶ್ ಕುಮಾರ್ ಪೊಳಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಾತನಡಿದ ಗಣ್ಯರು ಗುರು ಸ್ಮಿತಾ ನಾಯರ್ ಅವರ ಪ್ರತಿಭಾವಂತ ಶಿಷ್ಯೆ ಕೀರ್ತಿಶ್ರೀ ಭಾಸ್ಕರ್ ಮೂಲ್ಯ ಅವರ ಕಲಾಪ್ರತಿಭೆ ಹಾಗೂ ಸಮಾಜಮುಖಿ ಚಿಂತನೆಗಳನ್ನು ಶ್ಲಾಘಿಸಿದರು ಹಾಗೂ ಅವರ ಕಲಾ ಸಂಸ್ಥೆ ಶ್ರೀ ಕಟೀಲೇಶ್ವರಿ ನಾಟ್ಯ ಕಲಾ ಮಂದಿರದ ಮುಂದಿನ ಎಲ್ಲಾ ಚಟುವಟಿಕೆಗಳು ಯಶಸ್ವಿಯಾಗಿ ನೆರವೇರಲಿ ಎಂದು ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ಶ್ರೀ ಕಟೀಲೇಶ್ವರಿ ನಾಟ್ಯ ಕಲಾ ಮಂದಿರದ ವಿದ್ಯಾರ್ಥಿಗಳು ಭರತನಾಟ್ಯ, ಜಾನಪದ ಹಾಗೂ ಅರೆ-ಶಾಸ್ತ್ರೀಯ (ಸೆಮಿ-ಕ್ಲಾಸಿಕಲ್) ನೃತ್ಯಗಳ ಮನಮೋಹಕ ಪ್ರದರ್ಶನ ನೀಡಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು. ಭಾರತೀಯ ಸಂಸ್ಕೃತಿ, ಲಯ, ನೃತ್ಯ ಸೌಂದರ್ಯ ಮತ್ತು ಕಲಾ ಪರಂಪರೆಯನ್ನು ಅನಾವರಣಗೊಳಿಸಿದ ವೈವಿಧ್ಯಮಯ ನೃತ್ಯ ರೂಪಗಳು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದವು.
ಕಾರ್ಯಕ್ರಮದ ಸಮಾರೋಪದಲ್ಲಿ ಸಂಸ್ಥೆಯ ವತಿಯಿಂದ ಆಗಮಿಸಿದ ಮುಖ್ಯ ಅತಿಥಿಗಳು, ಪೋಷಕರು ಹಾಗೂ ಕಲಾಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಲಾಯಿತು.
- ವರದಿ : ಈಶ್ವರ ಎಂ. ಐಲ್




