July 12, 2026
Mumbai News Kannada
ತುಳುನಾಡು

ಮುಲ್ಕಿ ಡಾ.ಹರಿಶ್ಚಂದ್ರ ಪಿ.ಸಾಲ್ಯಾನ್ ಅವರ 24ನೇ ಕೃತಿ ‘ತುಳುನಾಡಿನ ಆಟಿ ತಿಂಗಳು’ ಬಿಡುಗಡೆ







ಯುವ ಪೀಳಿಗೆಗೆ ನಮ್ಮ ಸಂಸ್ಕೃತಿ, ಆಚರಣೆ, ಸಂಪ್ರದಾಯಗಳ ಅರಿವು ಮೂಡಿಸುವ ಮತ್ತಷ್ಟು ಸಮಾಜಮುಖಿ ಕೃತಿಗಳು ಸಾಲ್ಯಾನ್ ರವರಿಂದ ಮೂಡಿ ಬರಲಿ-ಚಂದ್ರಶೇಖರ್ ಪಾಲೆತ್ತಾಡಿ

ಚಿತ್ರ ವರದಿ: ಉಮೇಶ್ ಕೆ. ಅಂಚನ್

ಹಿಂದಿನ ಕಾಲದಲ್ಲಿ ‘ಆಟಿ’ (ಆಷಾಢ) ತಿಂಗಳೆಂದರೆ ಅದು ಕೇವಲ ಹಬ್ಬದ ದಿನಗಳಾಗಿರಲಿಲ್ಲ, ಬದಲಿಗೆ ಕಷ್ಟ-ಕಾರ್ಪಣ್ಯಗಳ, ಸಾಂಕ್ರಾಮಿಕ ರೋಗಗಳ ಹಾಗೂ ವಿಪರೀತ ಮಳೆಯ ದಿನಗಳಾಗಿದ್ದವು. ಕೃಷಿ ಕೆಲಸಗಳನ್ನು ಮುಂಚಿತವಾಗಿಯೇ ಮುಗಿಸಿ, ಮಳೆಯ ದಿನಗಳಲ್ಲಿ ಮನೆಯೊಳಗೆ ಆಹಾರದ ಕೊರತೆಯ ನಡುವೆಯೂ ಪ್ರಕೃತಿಯಲ್ಲಿ ಸಿಗುವ ಗಿಡಮೂಲಿಕೆಗಳು, ಸೊಪ್ಪುಗಳನ್ನು ಬಳಸಿ ಆರೋಗ್ಯ ಕಾಪಾಡಿಕೊಳ್ಳುವ ಅನಿವಾರ್ಯತೆ ಅಂದಿನ ಜನರಿಗಿತ್ತು. ​ಆದರೆ ಇಂದು ಕಾಲ ಬದಲಾಗಿದೆ. ಅಂದಿನ ಆಟಿ ತಿಂಗಳ ಕಷ್ಟದ ದಿನಗಳು ಈಗ ಕೇವಲ ಒಂದು ದಿನದ ‘ಆಟಿದ ಕೂಟ’ ಅಥವಾ ವೈಭವೀಕರಣದ ಆಚರಣೆಯಾಗಿ ಮಾರ್ಪಟ್ಟಿದೆ. ಇಂತಹ ಸಂದರ್ಭದಲ್ಲಿ, ಸಾಲ್ಯಾನ್ ರವರು ಆಟಿ ತಿಂಗಳ ನಿಜವಾದ ಹಿನ್ನೆಲೆ, ಅಂದಿನ ಜನರ ಬದುಕು ಮತ್ತು ಅದರ ಹಿಂದಿರುವ ಆಚರಣೆಗಳ ನೈಜ ಅರ್ಥವನ್ನು ಸಾಮಾನ್ಯ ಜನರಿಗೂ ಅರ್ಥವಾಗುವಂತೆ ಸರಳವಾಗಿ ಕೃತಿಯ ರೂಪದಲ್ಲಿ ತಂದಿರುವುದು ಶ್ಲಾಘನೀಯ. ಇಂದಿನ ಪೀಳಿಗೆಗೆ ಇತಿಹಾಸ ಮತ್ತು ಸಂಸ್ಕೃತಿಯ ನಿಜವಾದ ಅರಿವು ಮೂಡಿಸುವ ಇಂತಹ ಸಮಾಜಮುಖಿ ಕೃತಿಗಳು ಸಾಲ್ಯಾನ್ ಅವರಿಂದ ಮುಂದೆಯೂ ಮೂಡಿಬರಲಿ ಎಂದು ‘ಕರ್ನಾಟಕ ಮಲ್ಲ’ ದಿನಪತ್ರಿಕೆಯ ಸಂಪಾದಕ ಚಂದ್ರಶೇಖರ ಪಾಲೆತ್ತಾಡಿಯವರು ಹೇಳಿದರು.ಅವರು ಜು.10ರಂದು ವಿದ್ಯಾದಾಯಿನಿ ಸಭಾ ಮುಂಬಯಿ ಮತ್ತು ಕೆನರಾ ವಿದ್ಯಾದಾಯಿನಿ ರಾತ್ರಿ ಶಾಲಾ ವತಿಯಿಂದ ಫೋರ್ಟ್ ಮೋದಿ ಸ್ಟ್ರೀಟ್ ಮನಪಾ(ವಿದ್ಯಾದಾಯಿನಿ)ಶಾಲಾ ಸಭಾಗೃಹದಲ್ಲಿ ಆಯೋಜಿಸಿದ್ದ ಮುಲ್ಕಿ ಹರಿಶ್ಚಂದ್ರ ಪಿ.ಸಾಲ್ಯಾನ್ ಅವರ ‘ತುಳುನಾಡಿನ ಆಟಿ ತಿಂಗಳು,’ ಕೃತಿಯ ಬಿಡುಗಡೆ ಸಮಾರಂಭದಲ್ಲಿ ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದರು.
ಕೆನರಾ ವಿದ್ಯಾಧಾಯಿನಿ ರಾತ್ರಿ ಶಾಲೆಯ ಮುಖ್ಯೋಪಾಧ್ಯಾಯರಾದ ಪ್ರಕಾಶ್ಚಂದ್ರ ಬಂಗೇರ ಅವರು ಕೃತಿಯನ್ನು ಪರಿಚಯಿಸಿದರು.
ಈ ಸಂದರ್ಭದಲ್ಲಿ ಲೇಖಕ ಡಾ. ಹರಿಶ್ಚಂದ್ರ ಪಿ. ಸಾಲ್ಯಾನ್ ದಂಪತಿಗಳನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಸಾಲ್ಯಾನ್ ಅವರು, ಮುಂಬಯಿ ಮಹಾನಗರದಲ್ಲಿ ದೊರೆತ ಈ ಪ್ರೀತಿಯ ಗೌರವ ಅತ್ಯಂತ ಸಂತಸ ತಂದಿದೆ. ಇದು ಇನ್ನೂ ಹೊಸ ಕೃತಿಗಳನ್ನು ಹೊರತರಲು ನನಗೆ ಹೆಚ್ಚಿನ ಶಕ್ತಿಯನ್ನು ನೀಡಿದೆ,” ಎಂದು ಕೃತಜ್ಞತೆ ಸಲ್ಲಿಸಿದರು.

ಅತಿಥಿ ಪೋರ್ಟ್ ಬೋರಾಬಜಾರ್ ಶ್ರೀ ಭುವನೇಶ್ವರಿ ಸೇವಾ ಸಮಿತಿಯ ಪ್ರಧಾನ ಅರ್ಚಕರು ​ರಾಜೇಶ್ ಭಟ್ ಕೃತಿಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ, ಸಾಲ್ಯಾನ್ ಅವರಿಂದ ಇಂತಹ ಇನ್ನೂ ಅನೇಕ ಉತ್ತಮ ಕೃತಿಗಳು ರಚನೆಯಾಗಲಿ. ಅದಕ್ಕೆ ಮಾತೆ ಭುವನೇಶ್ವರಿಯ ಅನುಗ್ರಹ ಸದಾ ಇರಲಿ ಎಂದು ಶುಭ ಹಾರೈಸಿದರು.
ಬಿಲ್ಲವರ ಅಸೋಸಿಯೇಷನ್ ಮುಲುಂಡ್ ಸ್ಥಳೀಯ ಕಚೇರಿಯ ಕಾರ್ಯಾಧ್ಯಕ್ಷ ಶಂಕರ್ ಎಸ್. ಅಮೀನ್ ಮಾತನಾಡಿ ಕೃತಿ ರಚನೆ ಮತ್ತು ಅದಕ್ಕೆ ಬೇಕಾದ ಮಾಹಿತಿ ಸಂಗ್ರಹಿಸುವುದು ಅಷ್ಟು ಸುಲಭದ ಕೆಲಸವಲ್ಲ. ಸಾಲ್ಯಾನ್ ಅವರು ತಮ್ಮ ಇಳಿ ವಯಸ್ಸಿನಲ್ಲೂ ಅಲ್ಪ ಅವಧಿಯಲ್ಲಿ 24ನೇ ಕೃತಿಯನ್ನು ಲೋಕಾರ್ಪಣೆ ಮಾಡಿರುವುದು ಹೆಮ್ಮೆಯ ವಿಷಯ. ಇವರ ಕೃತಿಗಳು ಇಂದಿನ ಹಾಗೂ ಮುಂದಿನ ಯುವಜನಾಂಗಕ್ಕೆ ದಾರಿದೀಪವಾಗಬಲ್ಲವು ಎಂದರು.


ಅತಿಥಿಗಳಾದ ತುಳು ಸೇವಾ ಸಮಾಜ ಮೀರಾಭಾಯಂದರ್ ಇದರ ಸಂಚಾಲಕ ಹಾಗೂ ವಿಶ್ವ ತುಳು ಫೌಂಡೇಶನ್ ಇದರ ಉಪಾಧ್ಯಕ್ಷ ಜಯಪ್ರಕಾಶ್ ಪೂಜಾರಿ ಹಾಗೂ ಫೋರ್ಟ್ ಶ್ರೀ ಭುವನೇಶ್ವರಿ ಪೂಜಾ ಸಮಿತಿಯ ಅಧ್ಯಕ್ಷ ಡಾ.ಪ್ರಕಾಶ್ ಮೂಡಬಿದ್ರಿಯವರು ಸಂದರ್ಭೋಚಿತವಾಗಿ ಮಾತನಾಡಿ ಸಾಲ್ಯಾನರ ಕೃತಿ ಸೇವೆಗೆ ಶುಭಕೋರಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅತಿಥಿಗಳನ್ನು, ಗಣ್ಯರನ್ನು ಸತ್ಕರಿಸಲಾಯಿತು. ಆರಂಭದಲ್ಲಿ ಸದಾನಂದ ಪೂಜಾರಿಯವರ ಗಣಪತಿ ಸ್ತುತಿಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ವಿದ್ಯಾದಾಯಿನಿ ಸಭಾದ ಜೊತೆ ಕಾರ್ಯದರ್ಶಿ ಶರತ್ ಪೂಜಾರಿ ಸ್ವಾಗತಿಸಿದರು. ಮಾಜಿ ಕಾರ್ಯದರ್ಶಿ ಚಿತ್ರಾಪು ಕೆ.ಎಮ್.ಕೋಟ್ಯಾನ್ ವಂದಿಸಿದರು. ಉಮೇಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.
ವಿದ್ಯಾದಾಯಿನಿ ಸಭಾದ ಗೌರವಾಧ್ಯಕ್ಷ ಜೆ.ಎಮ್.ಕೋಟ್ಯಾನ್, ಉಪಾಧ್ಯಕ್ಷ ಆರ್.ಕೆ.ಕೋಟ್ಯಾನ್, ಕೋಶಾಧಿಕಾರಿ ಗೋಪಾಲ್ ಪೂಜಾರಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಸಂತಿ ಆರ್.ಕೋಟ್ಯಾನ್, ಸೇವಾದಳದ ಜಿಒಸಿ ಸುರೇಶ್ ಪೂಜಾರಿ, ಭಜನಾ ಸಮಿತಿಯ ಕಾರ್ಯಾಧ್ಯಕ್ಷ ಅಶೋಕ್ ಪೂಜಾರಿ , ಕಾರ್ಯಕಾರಿ ಸಮಿತಿಯ ಸದಸ್ಯರಾದ ಜಿ.ಸಿ.ಸಾಲ್ಯಾನ್, ಜೆ .ಜೆ.ಕೋಟ್ಯಾನ್, ಪ್ರಭಾಕರ ಬಂಗೇರ , ಶಿಕ್ಷಕಿ ಚಿತ್ರಲೇಖಾ ಮಾಲಿ ಮೊದಲಾದವರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ್ದರು.



ನಮ್ಮ ಸಂಸ್ಥೆಯ ಮೂಲಕ ಕೃತಿ ಬಿಡುಗಡೆಯಾಗಿರುವುದು ಹೆಮ್ಮೆಯ ಸಂಗತಿ: ಪುರುಷೋತ್ತಮ ಎಸ್. ಕೋಟ್ಯಾನ್.

ದಶಮಾನೋತ್ಸವ ಸಮಾರಂಭಕ್ಕೆ ಅಣಿಯಾಗಿರುವ ‘ ಹೊಸ ಅಂಗಣ’ ಮಾಸಪತ್ರಿಕೆ ಇದರ ಸಂಪಾದಕ ಮುಲ್ಕಿ ಡಾ. ಹರಿಶ್ಚಂದ್ರ ಪಿ. ಸಾಲ್ಯಾನ್ ಅವರ 24ನೇ ಕೃತಿಯಾದ ‘ತುಳುನಾಡಿನ ಆಟಿ ತಿಂಗಳು’ ಕೃತಿಯು ನಮ್ಮ ಸಂಸ್ಥೆಯ ಮೂಲಕ ಬಿಡುಗಡೆಗೊಂಡಿರುವುದು ನಮಗೆ ಅಪಾರ ಸಂತಸ ತಂದಿದೆ. ಸಾಲ್ಯಾನ್ ಅವರ ಸಾಹಿತ್ಯಿಕ ಕಾರ್ಯಕ್ಕೆ ನಿರಂತರ ಬೆನ್ನೆಲುಬಾಗಿ ನಿಂತಿರುವ ಅವರ ಧರ್ಮಪತ್ನಿ ವಿಜಯಾ ಸಾಲ್ಯಾನ್ ರವರನ್ನು ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ. ಇವರಿಂದ ಸಮಾಜಕ್ಕೆ ಉಪಯುಕ್ತವಾದ ಇನ್ನಷ್ಟು ಕೃತಿಗಳು ಹೊರಬರಲಿ ಎಂದು ಕಾರ್ಯಕ್ರಮದ ಅಧ್ಯಕ್ಷ ಸ್ಥಾನದಿಂದ ವಿದ್ಯಾಧಾಯಿನಿ ಸಭಾದ ಅಧ್ಯಕ್ಷರಾದ ಪುರುಷೋತ್ತಮ ಎಸ್. ಕೋಟ್ಯಾನ್ ನುಡಿದರು.



Related posts

ನಮ್ಮ ಕಾಪು ನ್ಯೂಸ್ ಆಡಳಿತ ನಿರ್ದೇಶಕ ವಿಕ್ಕಿ ಮಡುಂಬು : ಉಡುಪಿ ಬೊಬ್ಬರ್ಯ ದೈವಸ್ಥಾನದಲ್ಲಿ ಸನ್ಮಾನ

Mumbai News Desk

ಮೂಳೂರು : ಸಂಜೀವಿ ಸುಂದರ ವಿದ್ಯಾನಿಧಿ ಟ್ರಸ್ಟ್ ಉದ್ಘಾಟನೆ, ವಿದ್ಯಾನಿಧಿ ವಿತರಣೆ

Mumbai News Desk

ಶ್ರೀ ಬಪ್ಪನಾಡು ಸೌಹರ್ದ ಸಹಕಾರಿ ಸಂಘ(ನಿ)ಇದರ ವಾರ್ಷಿಕ ಮಹಾಸಭೆಯಲ್ಲಿ ಹರಿಶ್ಚಂದ್ರ ಪಿ. ಸಾಲಿಯಾನ್‌ರವರಿಗೆ ಸನ್ಮಾನ

Mumbai News Desk

ಯುವವಾಹಿನಿ ಮೂಲ್ಕಿ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ

Mumbai News Desk

ಉಡುಪಿ : ಸರ್ವಜ್ಞ ಪೀಠಾರೋಹಣ ಮಾಡಿದ ಶೀರೂರು ಶ್ರೀ

Mumbai News Desk

ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ನ ನೂತನ ಅಧ್ಯಕ್ಷರಾಗಿ ಪ್ರಭೋದ್ ಚಂದ್ರ ಹೆಜಮಾಡಿ ಆಯ್ಕೆ

Mumbai News Desk