ಡೊಂಬಿವಲಿ: ಸಿರಿನಾಡ ವೆಲ್ಫೇರ್ ಅಸೋಸಿಯೇಷನ್ನ ಶೈಕ್ಷಣಿಕ ಕಾರ್ಯಕ್ರಮದ ಅಂಗವಾಗಿ ಇದೇ ಬರುವ ಜುಲೈ 12ರಂದು ಸಂಜೆ 4 ಗಂಟೆಗೆ ಡೊಂಬಿವಲಿ ಪಶ್ಚಿಮದ ಠಾಕೂರ್ವಾಡಿ ಪರಿಸರದ ‘ವೈಭವ ಮಂಗಳ ಕಾರ್ಯಾಲಯ’ದಲ್ಲಿ ಉಚಿತ ಪುಸ್ತಕ ವಿತರಣೆ, ಪ್ರತಿಭಾ ಪುರಸ್ಕಾರ, ಕನ್ನಡ ಕಲಿಕಾ ತರಗತಿಯ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಣೆ, ಕಲಿಕಾ ತರಗತಿಯ ಶಿಕ್ಷಕಿಯರಿಗೆ ಗೌರವಾರ್ಪಣೆ ಹಾಗೂ ಕಲಿಕಾ ವಿದ್ಯಾರ್ಥಿಗಳಿಂದ ಶಿಕ್ಷಕಿಯರಿಗೆ ಗುರುವಂದನೆ ಕಾರ್ಯಕ್ರಮಗಳು ಜರಗಲಿವೆ.
ಈ ಶೈಕ್ಷಣಿಕ ಕಾರ್ಯಕ್ರಮದ ಅಂಗವಾಗಿ ಸಭಾ ಕಾರ್ಯಕ್ರಮವೂ ನಡೆಯಲಿದ್ದು, ಇದರ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಆರ್. ಕೆ. ಸುವರ್ಣ ಅವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಮಾಜ ಸೇವಕ ಶ್ರೀ ಕೃಷ್ಣ ಪಾಟೀಲ್ ಹಾಗೂ ಪರಿಸರದ ನಗರಸೇವಕಿ ಶ್ರೀಮತಿ ರಷಿಕಾ ಕೃಷ್ಣ ಪಾಟೀಲ್ ಅವರು ಆಗಮಿಸಲಿದ್ದಾರೆ. ವೇದಿಕೆಯಲ್ಲಿ ಸಲಹೆಗಾರರಾದ ಇಂದ್ರಾಳಿ ದಿವಾಕರ ಶೆಟ್ಟಿ, ರಾಜೀವ ಭಂಡಾರಿ ಮತ್ತು ವಸಂತ ಸುವರ್ಣ ಅವರು ಉಪಸ್ಥಿತರಿರಲಿದ್ದಾರೆ.
ಸಂಘದ ರಜತ ಮಹೋತ್ಸವದ ಸರಣಿ ಕಾರ್ಯಕ್ರಮದ ಭಾಗವಾಗಿರುವ ಈ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಉಚಿತ ಪುಸ್ತಕವನ್ನು ಪಡೆಯಲು ಹೆಸರು ನೋಂದಾಯಿಸಿರುವ ಮಕ್ಕಳು, ಪ್ರತಿಭಾ ಪುರಸ್ಕಾರವನ್ನು ಪಡೆಯಲಿರುವ ವಿದ್ಯಾರ್ಥಿಗಳು, ಪಾಲಕರು, ಕನ್ನಡ ಕಲಿಕಾ ತರಗತಿಯ ವಿದ್ಯಾರ್ಥಿಗಳು ಹಾಗೂ ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಮಹಿಳಾ ವಿಭಾಗ, ಯುವ ವಿಭಾಗ ಮತ್ತು ಸಂಘದ ಸರ್ವ ಸದಸ್ಯರು ಉಪಸ್ಥಿತರಿರಬೇಕಾಗಿ ಸಂಘದ ಉಪಾಧ್ಯಕ್ಷ ಅಶೋಕ ಅಮೀನ್, ಗೌರವ ಪ್ರಧಾನ ಕಾರ್ಯದರ್ಶಿ ಅಜೆಕಾರು ಜಯ ಶೆಟ್ಟಿ, ಕೋಶಾಧಿಕಾರಿ ಸದಾಶಿವ ಸಾಲಿಯಾನ್, ಜೊತೆ ಕಾರ್ಯದರ್ಶಿ ಶೋಭಾ ಟಿ. ಪೂಜಾರಿ, ಜೊತೆ ಕೋಶಾಧಿಕಾರಿ ಕೆ. ಕೆ. ಸಾಲಿಯಾನ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಉದಯ ಜೆ. ಶೆಟ್ಟಿ ಹಾಗೂ ಯುವ ವಿಭಾಗದ ಕಾರ್ಯಾಧ್ಯಕ್ಷ ಸಚಿನ್ ಕೋಟ್ಯಾನ್ ಅವರು ವಿನಂತಿಸಿದ್ದಾರೆ.




