
ಮಕ್ಕಳು ಶಿಕ್ಷಣದಿಂದ ವಂಚಿತರಾಗದಿರಲು ಎಲ್ಲರೂ ಕೈಜೋಡಿಸೋಣ” – ಹರೀಶ್ ಮೈಂದನ್
ಮುಂಬಯಿ, ಬೊರಿವಲಿ ಪರಿಸರದ ತುಳು-ಕನ್ನಡಿಗರು ತಮ್ಮ ಮಾತೃಭಾಷೆ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದರ ಜೊತೆಗೆ ಸಮಾಜಮುಖಿ ಸೇವಾ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಂಡಿರುವ ತುಳು ಸಂಘ ಬೊರಿವಲಿ, ಕಳೆದ ಹಲವು ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಸೇವೆ ಸಲ್ಲಿಸುತ್ತಿದೆ.
ಈ ಹಿನ್ನೆಲೆಯಲ್ಲಿ ಜುಲೈ 17ರಂದು ಬೊರಿವಲಿ ಪಶ್ಚಿಮದ ಸೋಡಾವಾಲ ಲೇನ್ನ ಮಹಾನಗರ ಪಾಲಿಕೆ ಶಾಲೆಯ ಕನ್ನಡ ಮಾಧ್ಯಮ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ಸುಮಾರು 200 ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ನೋಟು ಪುಸ್ತಕ, ಪೆನ್, ಚಾಕೊಲೇಟ್ ಹಾಗೂ ಬಿಸ್ಕಟ್ಗಳನ್ನು ವಿತರಿಸಲಾಯಿತು. ಶಾಲೆಯ ಮುಖ್ಯೋಪಾಧ್ಯಾಯ ಪ್ರಕಾಶ್ ಕದಮ್ ಅವರ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯ ಶಾಲಾ ಪರಿಕರಗಳನ್ನು ಹಸ್ತಾಂತರಿಸಲಾಯಿತು.




ಈ ಸಂದರ್ಭದಲ್ಲಿ ಮಾತನಾಡಿದ ತುಳು ಸಂಘ ಬೊರಿವಲಿಯ ಅಧ್ಯಕ್ಷ ಹರೀಶ್ ಮೈಂದನ್, “ಇಂದು ಮುಂಬಯಿಯಲ್ಲಿ ಉನ್ನತ ಸ್ಥಾನಕ್ಕೇರಿರುವ ಅನೇಕರು ಜೀವನದಲ್ಲಿ ಸಂಕಷ್ಟಗಳನ್ನು ಎದುರಿಸಿ ಕಠಿಣ ಪರಿಶ್ರಮದಿಂದ ಯಶಸ್ಸು ಸಾಧಿಸಿದ್ದಾರೆ. ಮಹಾನಗರ ಪಾಲಿಕೆ ಶಾಲೆಯಲ್ಲಿ ಕಲಿಯುತ್ತಿರುವ ನೀವೂ ಉತ್ತಮ ಶಿಕ್ಷಣ ಪಡೆದು ಜೀವನದಲ್ಲಿ ಉನ್ನತ ಮಟ್ಟ ತಲುಪುವ ಸಾಮರ್ಥ್ಯ ಹೊಂದಿದ್ದೀರಿ. ಯಾವುದೇ ಮಗು ಶಿಕ್ಷಣದಿಂದ ವಂಚಿತರಾಗದಿರಲು ತುಳು ಸಂಘ ಬೊರಿವಲಿ ಸಾಧ್ಯವಾದ ಪ್ರಯತ್ನ ಮಾಡುತ್ತದೆ,” ಎಂದು ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಸಂದೇಶ ನೀಡಿದರು.
ಶಾಲಾ ಪರಿಕರಗಳ ವಿತರಣೆಗೆ ಪ್ರಾಯೋಜಕರಾಗಿ ಸಹಕರಿಸಿದ ತುಳು ಸಂಘದ ಸ್ಥಾಪಕ ಅಧ್ಯಕ್ಷ ವಾಸು ಪುತ್ರನ್, ಬಾಲಕೃಷ್ಣ ರೈ, ಸವಿತಾ ಸಿ. ಶೆಟ್ಟಿ ಹಾಗೂ ತಿಲೋತ್ತಮ ವೈದ್ಯ ಅವರಿಗೆ ಹರೀಶ್ ಮೈಂದನ್ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ರಜಿತ್ ಸುವರ್ಣ, ಪ್ರಧಾನ ಕಾರ್ಯದರ್ಶಿ ಕೃಷ್ಣರಾಜ್ ಸುವರ್ಣ, ಕೋಶಾಧಿಕಾರಿ ದಿವಾಕರ್ ಕರ್ಕೇರ, ಜೊತೆ ಕೋಶಾಧಿಕಾರಿ ಟಿ.ವಿ. ಪೂಜಾರಿ, ನ್ಯಾಯವಾದಿ ರಾಘವ ಎಂ., ಮಹಿಳಾ ಕಾರ್ಯದರ್ಶಿ ವಿಜಯಲಕ್ಷ್ಮಿ ದೇವಾಡಿಗ, ಲಕ್ಷ್ಮಿ ದೇವಾಡಿಗ ಹಾಗೂ ಸಂಘದ ಇತರ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ನ್ಯಾ. ರಾಘವ ಎಂ. ಅವರು ನಿರೂಪಿಸಿ ಮಕ್ಕಳ ಮುಂದಿನ ವಿದ್ಯಾಭ್ಯಾಸಕ್ಕೆ ಸೂಕ್ತ ಮಾರ್ಗದರ್ಶನ ನೀಡಿದರು.





