ಮುಂಬೈ.ಜುಲೈ 18.ಕಳೆದ ಜೂನ್ ತಿಂಗಳಲ್ಲಿ ಮುಂಬೈ ವಿಶ್ವವಿದ್ಯಾಲಯ ನಡೆಸಿದ ಕನ್ನಡ ಎಂ. ಎ ಅಂತಿಮ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಕನ್ನಡ ವಿಭಾಗದ ವಿದ್ಯಾರ್ಥಿ ಶ್ಯಾಮಲಾ ನಿತಿನ್ ಉಚ್ಚಿಲ್ ಅವರು ಸರ್ವಾಧಿಕ ಅಂಕಗಳನ್ನು ಗಳಿಸಿ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ ಎಂಬುದಾಗಿ ಮುಂಬೈ ವಿಶ್ವವಿದ್ಯಾಲಯದ ಪ್ರಕಟಣೆ ತಿಳಿಸಿದೆ.
ನೂತನ ಪಠ್ಯ ಕ್ರಮದಂತೆ ಶ್ಯಾಮಲಾ ನಿತಿನ್ ಉಚ್ಚಿಲ್ ವಿಭಾಗದ ಮುಖ್ಯಸ್ಥರಾದ ಪ್ರೊ. ಜಿ. ಎನ್ .ಉಪಾಧ್ಯ ಅವರ ಮಾರ್ಗದರ್ಶನದಲ್ಲಿ “ಶಿಕ್ಷಣ ರಂಗದಲ್ಲಿ ಮುಂಬೈ ಕನ್ನಡಿಗರ ಪಾರುಪತ್ಯ”ಎಂಬ ಸಂಪ್ರಬಂಧವನ್ನು ರಚಿಸಿ, ಮುಂಬೈ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ್ದಾರೆ. ಅವರು ಖ್ಯಾತ ಸಾಹಿತಿ ವ್ಯಾಸರಾಯ ಬಲ್ಲಾಳ ಪ್ರತಿಷ್ಠಾನದಿಂದ ಕೊಡ ಮಾಡುವ “ವ್ಯಾಸರಾಯ ಬಲ್ಲಾಳ ಶ್ರೇಷ್ಠ ವಿದ್ಯಾರ್ಥಿ” ಪುರಸ್ಕಾರವನ್ನು ಸಹ ಪಡೆದಿದ್ದಾರೆ.
ಶ್ಯಾಮಲಾ ಉಚ್ಚಿಲ್ ಮೂಲತಃ ಕಾಸರಗೋಡು ಜಿಲ್ಲೆಯ ಐಲ ಗ್ರಾಮದವರು. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಬಿ .ಎ ಪದವಿ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಬಿ. ಎಡ್ ಪದವಿಯನ್ನು ಗಳಿಸಿ, ಪ್ರಸ್ತುತ ಚೆಂಬೂರು ಕರ್ನಾಟಕ ಸಂಘ ಸಂಚಾಲಿತ ಚೆಂಬೂರು ಕರ್ನಾಟಕ ಶಾಲೆಯಲ್ಲಿ ಕಳೆದ 22 ವರ್ಷಗಳಿಂದ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಂಟರ ಸಂಘ ಸಂಚಾಲಿತ ಕರ್ನಾಟಕ ಫ್ರೀ ನೈಟ್ ಹೈಸ್ಕೂಲ್ ನಲ್ಲಿ ಶಿಕ್ಷಕಿಯಾಗಿ 14 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಇವರು ದಿI ಚಂದ್ರಶೇಖರ ಕಾಸರಗೋಡು ಮತ್ತು ಸರಸ್ವತಿ ಐಲ್ ಅವರ ಪುತ್ರಿ ಹಾಗೂ ನಿತಿನ್ ಉಚ್ಚಿಲ್ ಅವರ ಧರ್ಮಪತ್ನಿ.





