
ನವಿ ಮುಂಬಯಿ: ತುಳು ಕನ್ನಡ ವೆಲ್ಫೇರ್ ಅಸೋಸಿಯೇಷನ್ ಕಾಮೋಠೆ ಇದರ ‘ಆಟಿಡೊಂಜಿ ದಿನ’ ಕಾರ್ಯಕ್ರಮವು 01/08/2026 ರಂದು ಸಂಜೆ ಸರೋವರ್ ಎನ್ ಎಕ್ಸ್ ಬ್ಯಾಂಕ್ವೆಟ್ ಹಾಲ್ನಲ್ಲಿ ಸಂಸ್ಥೆಯ ಗೌರವಾಧ್ಯಕ್ಷರಾದ ಎಸ್. ಡಿ. ಕೋಟ್ಯಾನ್ ಅವರ ಮಾರ್ಗದರ್ಶನದಲ್ಲಿ, ಸಂಸ್ಥೆಯ ಅಧ್ಯಕ್ಷರಾದ ಸುಜಿತ್ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ವಿಜೃಂಭಣೆಯಿಂದ ಜರುಗಿತು.
ಸಂಸ್ಥೆಯ ಪುಟಾಣಿ ಮಕ್ಕಳು ಹಾಗೂ ಮಹಿಳೆಯರಿಂದ ವಿವಿಧ ಜಾನಪದ ನೃತ್ಯ, ಜಾನಪದ ಗೀತೆ ಹಾಗೆಯೇ ಆಟಿ ಕಳೆಂಜ, ಕಂಬಳದ ಕೋಣ, ಅಂಕದ ಹುಂಜ ಇನ್ನಿತರ ಕಾರ್ಯಕ್ರಮಗಳು ನಡೆದವು. ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ತುಳುನಾಡಿನ ಸಂಸ್ಕೃತಿಯನ್ನು ಸಾರುವ ವಿವಿಧ ರೀತಿಯ ಅಡುಗೆ ಮಾಡಿದ ಮಹಿಳೆಯರಿಗೆ ಮತ್ತು ನೃತ್ಯ ಮಾಡಿದ ಮಕ್ಕಳಿಗೆ ಸಮಾಧಾನಕರ ಬಹುಮಾನವನ್ನು ನೀಡಿ ಗೌರವಿಸಲಾಯಿತು. ನೆರವು ಫೌಂಡೇಶನ್ ಪರವಾಗಿ ಪುಸ್ತಕ ವಿತರಣೆ ನಡೆಯಿತು.



ಶಾಸಕರಾದ ಪ್ರಶಾಂತ್ ಜಿ. ಠಾಕೂರ್ ಅವರು ಮಾತನಾಡುತ್ತಾ, ತುಳುನಾಡಿನ ಸಂಸ್ಕೃತಿ ಮತ್ತು ದೈವಭಕ್ತಿಯನ್ನು ಹಾಡಿ ಹೊಗಳಿದರು. ಹಾಗೂ ಇಂತಹ ಕಾರ್ಯಕ್ರಮಗಳಲ್ಲಿ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲರೂ ಭಾಗವಹಿಸಬೇಕು, ನಮ್ಮ ಸಂಸ್ಕೃತಿಯನ್ನು ಉಳಿಸಬೇಕು, ಬೆಳೆಸಬೇಕು ಎಂದು ತಿಳಿಸಿದರು.
ಪನ್ವೇಲ್ ನಗರಸೇವಕರಾದ ಸಂತೋಷ್ ಜಿ. ಶೆಟ್ಟಿ ಅವರು ಮಾತನಾಡುತ್ತಾ, ತುಳು ಕನ್ನಡ ಸಂಸ್ಥೆಯು ಈ ಪರಿಸರದಲ್ಲಿ ಉತ್ತಮ ಕಾರ್ಯಗಳನ್ನು ನಡೆಸುತ್ತಿದೆ. ಸಂಸ್ಥೆಯ ಅಧ್ಯಕ್ಷರಾದ ಸುಜಿತ್ ಪೂಜಾರಿ ಅವರನ್ನು ಬಿಜೆಪಿ ಪಕ್ಷದ ದಕ್ಷಿಣ ಭಾರತೀಯ ಸೆಲ್ನ ರಾಯಗಡ ಜಿಲ್ಲೆಯ ಅಧ್ಯಕ್ಷರನ್ನಾಗಿ ಮಾಡಿದ್ದೇವೆ. ನೀವೆಲ್ಲ ಸುಜಿತ್ ಪೂಜಾರಿ ಅವರೊಂದಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು. “ನನ್ನ ಹಾಗೂ ತುಳು ಕನ್ನಡ ಸಂಸ್ಥೆಯದ್ದು ಅವಿನಾಭಾವ ಸಂಬಂಧ, ನಾನು ತುಳು ಕನ್ನಡ ಸಂಸ್ಥೆಯೊಂದಿಗೆ ಯಾವಾಗಲೂ ಜೊತೆಗಿರುತ್ತೇನೆ” ಎಂದು ತಿಳಿಸಿದರು.



ಬಾಂಬೆ ಬಂಟ್ಸ್ ಅಸೋಸಿಯೇಷನ್ನ ಮಾಜಿ ಅಧ್ಯಕ್ಷರಾದ ಶ್ಯಾಮ್ ಎನ್. ಶೆಟ್ಟಿ ಅವರು ಮಾತನಾಡುತ್ತಾ, ನವಿ ಮುಂಬೈ ಪರಿಸರದಲ್ಲಿ ತುಳು ಕನ್ನಡ ಸಂಸ್ಥೆಯ ಸಾಧನೆ ಮೆಚ್ಚುವಂಥದ್ದು. ಸಂಸ್ಥೆಯು ತುಳು ಕನ್ನಡಿಗರನ್ನು ಒಗ್ಗಟ್ಟುಗೊಳಿಸಿ ಅವರ ಕಷ್ಟಗಳಿಗೆ ಸ್ಪಂದಿಸುತ್ತಿದೆ ಎಂದರು.
ಬಿಲ್ಲವರ ಅಸೋಸಿಯೇಷನ್ ಮುಂಬೈ ಅಧ್ಯಕ್ಷರಾದ ಹರೀಶ್ ಜಿ. ಅಮೀನ್ ಅವರು ಮಾತನಾಡಿ, ತುಳು ಕನ್ನಡ ಸಂಸ್ಥೆಯ ಕೆಲಸವನ್ನು ಶ್ಲಾಘಿಸುತ್ತಾ ಎಲ್ಲರಿಗೂ ಆಟಿ ಅಮಾವಾಸ್ಯೆಯ ಶುಭಾಶಯ ಕೋರಿದರು.
ಡಾಕ್ಟರ್ ಸಂತೋಷ್ ನಾಯಕ್ ಇವರು ಮಾತನಾಡುತ್ತಾ, ತಮ್ಮ ಆಸ್ಪತ್ರೆಯಲ್ಲಿ ಉಚಿತ ಸಲಹೆ ಹಾಗೂ ಕೆಲವು ಚಿಕಿತ್ಸೆಗಳನ್ನು ತುಳು ಕನ್ನಡ ಸಂಸ್ಥೆಯ ಬಾಂಧವರಿಗೆ ನೀಡುವುದಾಗಿ ತಿಳಿಸಿದರು.
ವೇದಿಕೆಯಲ್ಲಿ ವಿದ್ಯಾದಾಯಿನಿ ಸಭಾದ ಅಧ್ಯಕ್ಷರಾದ ಪುರುಷೋತ್ತಮ ಕೋಟ್ಯಾನ್, ಮುಂಬೈ ಬಿಲ್ಲವ ಅಸೋಸಿಯೇಷನ್ ನವಿ ಮುಂಬೈ ಸ್ಥಳೀಯ ಕಚೇರಿಯ ಕಾರ್ಯಾಧ್ಯಕ್ಷರಾದ ವಿ. ಕೆ. ಪೂಜಾರಿ, ಉದ್ಯಮಿ ನವೀನ್ ಶೆಟ್ಟಿ ಕಾಮೋಠೆ, ಬಿಲ್ಲವರ ಅಸೋಸಿಯೇಷನ್ ನವಿ ಮುಂಬೈ ಸ್ಥಳೀಯ ಕಚೇರಿಯ ಉಪ ಕಾರ್ಯಾಧ್ಯಕ್ಷರಾದ ರಂಜನ್ ಉಪ್ಪಿನ್, ಸಂಸ್ಥೆಯ ಉಪಾಧ್ಯಕ್ಷರಾದ ಕರುಣಾಕರ್ ಸಾಮಾನಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆಯಾದ ವಸಂತಿ ಹೆಗ್ಡೆ, ಬಿಲ್ಲವರ ಅಸೋಸಿಯೇಷನ್ನ ನವೀನ್ ಪಡುಬಿದ್ರಿ ಮುಂಬೈ ಮತ್ತಿತರರು ಉಪಸ್ಥಿತರಿದ್ದರು.
ಡಾಕ್ಟರ್ ಸಂತೋಷ್ ನಾಯಕ್ ದಂಪತಿಗೆ ವೇದಿಕೆಯಲ್ಲಿ ಶಾಲು ಹೊದಿಸಿ, ಶ್ರೀಫಲ ನೀಡಿ ಗೌರವಿಸಲಾಯಿತು. ಕಾರ್ಯಕ್ರಮವನ್ನು ಹರೀಶ್ ಕೋಟ್ಯಾನ್, ಚಿನ್ಮಯ್ ಸಾಲಿಯಾನ್ ಮತ್ತು ತೇಜಸ್ವಿನಿ ಸುಜಿತ್ ಪೂಜಾರಿ ನಿರೂಪಿಸಿದರು.
ಪಾಲ್ಗೊಂಡಿದ್ದ ಎಲ್ಲರೂ ರುಚಿಕರವಾದ ಪ್ರೀತಿಭೋಜನವನ್ನು ಸವಿಯುತ್ತಾ ಸಂಭ್ರಮಿಸಿದರು.




