ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಮನೆಮಾತಾಗಿರುವ ಡೊಂಬಿವಲಿ ಪಶ್ಚಿಮದ ಸಾಮಾಜಿಕ ಸಂಸ್ಥೆ ‘ಸಿರಿನಾಡ ವೆಲ್ಫೇರ್ ಅಸೋಸಿಯೇಷನ್’ ಪ್ರಸ್ತುತ ವರ್ಷ ರಜತ ಮಹೋತ್ಸವದ ಸಂಭ್ರಮದಲ್ಲಿದೆ.
ಮಿನಿ ತುಳುನಾಡೆಂದೇ ಪ್ರಸಿದ್ಧಿ ಪಡೆದಿರುವ ಡೊಂಬಿವಲಿ ನಗರದ ತುಳು-ಕನ್ನಡಿಗರ ಹಲವಾರು ಸಂಘ-ಸಂಸ್ಥೆಗಳಲ್ಲಿ ಸಿರಿನಾಡ ವೆಲ್ಫೇರ್ ಅಸೋಸಿಯೇಷನ್ ಮುಂಚೂಣಿಯಲ್ಲಿದೆ. ನಾಡ ಬಾಂಧವರು ದೈವಾಧೀನರಾದಾಗ ಅವರ ಅಂತ್ಯಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಕುಟುಂಬಸ್ಥರಿಗೆ ಸಾಂತ್ವನ ನೀಡುವ ಮೂಲಕ ಸಂಘವು ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ಡೊಂಬಿವಿಲಿ ಪಶ್ಚಿಮ ಪ್ರದೇಶವು ಅತ್ಯಂತ ವಿಶಾಲ ಹಾಗೂ ಜನನಿಬಿಡ ಪ್ರದೇಶವಾಗಿದ್ದರೂ, ಇಲ್ಲಿ ಅಂತ್ಯಕ್ರಿಯೆ ನಡೆಸಲು ಸೂಕ್ತ ಸ್ಮಶಾನ ಭೂಮಿ ಇಲ್ಲ. ಇದರಿಂದಾಗಿ ಮೃತದೇಹಗಳನ್ನು ಅಂತ್ಯಕ್ರಿಯೆಗಾಗಿ ಡೊಂಬಿವಲಿ ಪೂರ್ವದ ಶಿವಮಂದಿರದ ಬಳಿ ಇರುವ ಶವಾಗಾರಕ್ಕೇ ಕೊಂಡೊಯ್ಯಬೇಕಾದ ಅನಿವಾರ್ಯತೆ ಇದೆ. ಈ ಗಂಭೀರ ಪರಿಸ್ಥಿತಿಯನ್ನು ಮನಗಂಡು, ಸಾರ್ವಜನಿಕ ಹಿತದೃಷ್ಟಿಯಿಂದ ಡೊಂಬಿವಲಿ ಪಶ್ಚಿಮದಲ್ಲಿ ಸುಸಜ್ಜಿತ ರುದ್ರಭೂಮಿಯನ್ನು ನಿರ್ಮಿಸಬೇಕೆಂದು ಆಗ್ರಹಿಸಿ ಸ್ಥಳೀಯ ನಗರಸೇವಕಿ ಶ್ರೀಮತಿ ಋಷಿಕಾ ಕೃಷ್ಣ ಪಾಟೀಲ್ ಹಾಗೂ ಸಮಾಜ ಸೇವಕ ಶ್ರೀ ಕೃಷ್ಣ ಪಾಟೀಲ್ ಅವರಿಗೆ ಸಿರಿನಾಡ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಿರಿನಾಡ ವೆಲ್ಫೇರ್ ಅಸೋಸಿಯೇಷನ್ನ ಅಧ್ಯಕ್ಷ ಆರ್. ಕೆ. ಸುವರ್ಣ, ಉಪಾಧ್ಯಕ್ಷ ಅಶೋಕ್ ಅಮೀನ್, ಗೌರವ ಪ್ರಧಾನ ಕಾರ್ಯದರ್ಶಿ ಅಜೆಕಾರು ಜಯ ಶೆಟ್ಟಿ, ಜೊತೆ ಕಾರ್ಯದರ್ಶಿ ಶೋಭಾ ಟಿ. ಪೂಜಾರಿ, ಜೊತೆ ಕೋಶಾಧಿಕಾರಿ ಕೆ. ಕೆ. ಸಾಲಿಯಾನ್ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.




