
ಮುಂಬಯಿ: ರಾಜ್ಯ ಪ್ರಶಸ್ತಿ ಪುರಸ್ಕೃತ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ‘ಕಲಾಕುಂಭ ಕಲಾವಿದೆರ್ ಕುಳಾಯಿ ಮಂಗಳೂರು’ ಬಳಗ ಇದೀಗ ನಾಟಕ ಕ್ಷೇತ್ರದಲ್ಲಿ ಹೊಸ ಭಾಷ್ಯ ಬರೆದಿದೆ. ದೈವಾರಾಧನೆಗೆ ಯಾವುದೇ ರೀತಿಯಲ್ಲಿ ಚ್ಯುತಿ ಬಾರದಂತೆ ಅಣಿ, ಆರಾದನೆ, ಸಿರಿ-ನೇಮ ಇಲ್ಲದೆ, ‘ಪರಮಾತ್ಮ ಪಂಜುರ್ಲಿ’ಯ ಹುಟ್ಟು, ಬೆಳವಣಿಗೆ ಹಾಗೂ ಕಾರ್ಣಿಕ ಮೆರೆದ ಕಥಾಹಂದರ ಹೊಂದಿರುವ, ಮೋಡಿ ಮಾಡುವ ರಂಗವಿನ್ಯಾಸ (ಸೆಟ್ಟಿಂಗ್ಸ್), ಅದ್ಭುತ ಅಭಿನಯ, ದೃಶ್ಯ ಸಂಯೋಜನೆ ಮತ್ತು ಡಿಜಿಟಲ್ ಲೈಟಿಂಗ್ ಎಫೆಕ್ಟ್ನೊಂದಿಗೆ ಮೂಡಿಬಂದಿರುವ ಬಹುಜನರ ಬೇಡಿಕೆಯ ‘ಪರಮಾತ್ಮ ಪಂಜುರ್ಲಿ’ ತುಳು ನಾಟಕವು ಮೊತ್ತಮೊದಲ ಬಾರಿಗೆ ಮುಂಬಯಿ ಮಹಾನಗರದಲ್ಲಿ ಇಂದಿನಿಂದ ಐದು ದಿನಗಳ ಕಾಲ ನಗರದ ವಿವಿಧ ಉಪನಗರಗಳಲ್ಲಿ ಪ್ರದರ್ಶನಗೊಳ್ಳಲಿದೆ.
ಮಂಗಳೂರಿನ ಯುವ ಸಂಘಟಕ, ಮುಂಬಯಿ ಕುಲಾಲ ಸಂಘದ ಗೌರವಾಧ್ಯಕ್ಷ ದೇವದಾಸ್ ಕುಲಾಲ್ ಹಾಗೂ ಅವರ ಸಹೋದರ ನಾಗೇಶ್ ಕುಲಾಲ್ ಅವರ ಸಾರಥ್ಯದಲ್ಲಿ ಈ ತಂಡವು ಆ. 26 ರಿಂದ ಆ. 30 ರವರೆಗೆ ಒಟ್ಟು ಐದು ಪ್ರದರ್ಶನಗಳನ್ನು ನೀಡಲಿದೆ.

ಪ್ರದರ್ಶನಗಳ ವಿವರ:
- ಆ. 26, ಬುಧವಾರ (ಸಂಜೆ 5:00): ಬಂಟ್ಸ್ ಸೆಂಟರ್, ಜೂಹಿನಗರ ರೈಲ್ವೆ ನಿಲ್ದಾಣದ ಸಮೀಪ, ಜೂಹಿನಗರ, ನವಿಮುಂಬಯಿ. ಬಾಂಬೆ ಬಂಟ್ಸ್ ಅಸೋಸಿಯೇಷನ್ನ ಸಂಪೂರ್ಣ ಸಹಕಾರದೊಂದಿಗೆ ನಡೆಯಲಿದ್ದು, ಅಸೋಸಿಯೇಷನ್ ಅಧ್ಯಕ್ಷರಾದ ನ್ಯಾಯವಾದಿ ಡಿ. ಕೆ. ಶೆಟ್ಟಿಯವರು ಮುಂಬಯಿ ಪ್ರವಾಸವನ್ನು ಉದ್ಘಾಟಿಸಲಿದ್ದಾರೆ. ಹಲವು ಗಣ್ಯರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
- ಆ. 27, ಗುರುವಾರ (ಸಂಜೆ 6:00): ಆದ್ಯ ಕ್ರಾಂತಿವೀರ ವಾಸುದೇವ ಬಲವಂತ ಫಡ್ಕೆ ಸಭಾಂಗಣ, ಹಳೆ ಪನ್ವೇಲ್, ನವಿಮುಂಬಯಿ. ಪನ್ವೇಲ್ ಪರಿಸರದ ನಗರ ಸೇವಕ ಸಂತೋಷ್ ಜಿ. ಶೆಟ್ಟಿ ಮತ್ತು ಶ್ವೇತಾ ಸಂತೋಷ್ ಶೆಟ್ಟಿ ಅವರ ಸಂಪೂರ್ಣ ಸಹಕಾರದಲ್ಲಿ ನಡೆಯಲಿದೆ.
- ಆ. 28, ಶುಕ್ರವಾರ (ಸಂಜೆ 6:00): ಹೋಟೆಲ್ ಗ್ಯಾಲಕ್ಸಿ ಸಭಾಂಗಣ, ನಾಲಾಸೋಪಾರ (ಪಶ್ಚಿಮ). ಬಂಟರ ಸಂಘ ಮುಂಬಯಿ ಇದರ ಜತೆ ಕೋಶಾಧಿಕಾರಿ ಶಶಿಧರ್ ಶೆಟ್ಟಿ ಇನ್ನಂಜೆ ಮತ್ತು ಶಶಿಕಲಾ ಶಶಿಧರ್ ಶೆಟ್ಟಿ ಅವರ ಸಹಕಾರದಲ್ಲಿ ಆಯೋಜಿಸಲಾಗಿದೆ.
- ಆ. 29, ಶನಿವಾರ (ಸಂಜೆ 6:00): ಸೈಂಟ್ ಲಾರೆನ್ಸ್ ಬ್ಯಾಂಕ್ವೆಟ್ ಹಾಲ್, ಮುಲುಂಡ್ ಚೆಕ್ನಾಕಾ ಸಮೀಪ, ಠಾಣೆ (ಪಶ್ಚಿಮ). ಅಶೋಕ್ ಮೂಲ್ಯ ಠಾಣೆ, ಮುಂಬಯಿ ಕುಲಾಲ ಸಂಘದ ಗೌರವಾಧ್ಯಕ್ಷ ದೇವದಾಸ್ ಕುಲಾಲ್ ಡೊಂಬಿವಲಿ ಮತ್ತು ಉದ್ಯಮಿ ಜಗದೀಶ್ ಆರ್. ಬಂಜನ್ ಅಂಬರ್ನಾಥ್ ಇವರ ಪ್ರಾಯೋಜಕತ್ವದಲ್ಲಿ ನಡೆಯಲಿದೆ.
- ಆ. 30, ರವಿವಾರ (ಸಂಜೆ 6:00): ಬಂಟರ ಭವನ, ಕುರ್ಲಾ (ಪೂರ್ವ). ಸಂಜೀವ ಎನ್. ಬಂಗೇರ ಸಾಯನ್ ಮತ್ತು ಪ್ರವೀಣ್ ಕುಲಾಲ್ ಸಾಯನ್ ಇವರ ಪ್ರಾಯೋಜಕತ್ವದಲ್ಲಿ ಸಂಪನ್ನಗೊಳ್ಳಲಿದೆ.
ನಾಟಕಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಸಂಘಟಕರು ವಿನಂತಿಸಿದ್ದಾರೆ.




