32 C
Mumbai
March 7, 2026
Mumbai News Kannada
ಮುಂಬಯಿ

ಬಂಟರ ಸಂಘ ಮುಂಬಯಿ ಮೀರಾ -ಭಾಯಂದರ್ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗ ಆಯೋಜಿಸಿದ ಆರೋಗ್ಯ ಉಪನ್ಯಾಸ.





ಅಂದುಕೊಂಡಿರುವ ಗುರಿಯನ್ನು ಬದಲಿಸಬೇಡಿ. ಸಾಧಿಸುತ್ತಿರುವ ಕ್ರಮವನ್ನು ಬದಲಿಸಿ .

ಚಿತ್ರ ವರದಿ ದಿನೇಶ್ ಕುಲಾಲ್ 

ಮುಂಬಯಿ 26. ; ಧ್ಯೇಯವಿಲ್ಲದ ಜೀವನ ನಿಂತ ನೀರಿನಂತಿರುತ್ತದೆ. ನಿಂತ ನೀರು ಇರುವಷ್ಟು ಜಾಗವನ್ನೇ ತುಂಬಿ, ತುಳುಕಿ, ಬತ್ತಿ ಹೋಗುತ್ತದೆ. ಅದರಿಂದಾಗಿ ಬದುಕು ಹರಿಯುವ ನೀರಾಗಬೇಕು, ಹರಿದು ಸಾಗರವನ್ನು ಸೇರಿದಾಗಲೇ ಆ ನೀರಿಗೆ ಸಾರ್ಥಕತೆ. ಕೆಲವೊಮ್ಮೆ ಸಾಧನೆಯ ಹಾದಿಯಲ್ಲಿ ತೊಂದರೆಗಳುಂಟಾದಾಗ, ಅಂದುಕೊಂಡಿರುವ ಗುರಿಯನ್ನು ಬದಲಿಸಬೇಡಿ.ಬದಲಿಗೆ ಸಾಧಿಸುತ್ತಿರುವ ಕ್ರಮವನ್ನು ಬದಲಿಸಿ ಎಂದು ಬಂಟರ ಸಂಘ ಮುಂಬಯಿ ಸಂಸ್ಥೆಯ ಗೌರವ ಪ್ರಧಾನ ಕಾರ್ಯದರ್ಶಿ ಡಾ. ಆರ್.ಕೆ. ಶೆಟ್ಟಿ ತಿಳಿಸಿದರು.

ಬಂಟರ ಸಂಘ ಮುಂಬಯಿ ಮೀರಾ -ಭಾಯಂದರ್ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗ ಆಯೋಜಿಸಿದ ಆರೋಗ್ಯ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಮನುಷ್ಯನಲ್ಲಿ ಎಷ್ಟೋ ಹಣವಿದ್ದರೂ, ಆರೋಗ್ಯ ಸಮಸ್ಯೆ ಉಲ್ಬಣಿಸಿದರೆ, ಇದ್ದ ಹಣ ಎಲ್ಲಿಂದ ಎಲ್ಲಿಗೆ ಹೋಗುತ್ತದೆ ಎಂಬುದು ತಿಳಿಯುವುದಿಲ್ಲ. ಇಂದಿನ ದಿನಗಳಲ್ಲಿ ಸಣ್ಣ ಪ್ರಮಾಣದ ಕಾಯಿಲೆಗಳಿಗೂ ಲಕ್ಷ ಲಕ್ಷ ರೂಪಾಯಿ ವೆಚ್ಚವಾಗುತ್ತದೆ. ಹಾಗಾಗಿ ನಾವು ಜಾಗೃತರಾಗಿರಬೇಕು. ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಲು ಇಂತಹ ಜನ ಜಾಗೃತಿ ಕಾರ್ಯಕ್ರಮಗಳು ಬಹಳ ಅಗತ್ಯ . ಮೀರಾ – ಭಾಯಂದರ್ ಪ್ರಾದೇಶಿಕ ಸಮಿತಿಯ ಪ್ರತಿಯೊಂದು ಕಾರ್ಯಕ್ರಮ ಗಮನಿಸುತ್ತಾ ಬಂದಿದ್ದೇನೆ , ಬಹಳ‌ ಆರ್ಥ ಪೂರ್ಣವಾಗಿ ಜರಗುತ್ತದೆ. ಅವರು ತಮ್ಮ ಮಾತನ್ನು ಮುಂದುವರಿಸುತ್ತಾ ಕೇಂದ್ರ ಹಾಗೂ ರಾಜ್ಯ ಸರ್ಕಾರ  ಐದು ಲಕ್ಷ  ರೂಪಾಯಿ ಆರೋಗ್ಯ ವಿಮೆ ನೀಡುತ್ತಿದೆ. ಆದರೆ ಇದು ಬಹಳ ಜನರಿಗೆ ತಿಳಿದಿಲ್ಲ . ಕೇವಲ ಆಧಾರ್ ಕಾರ್ಡ್ ನಿಂದ ಇದರ ಪ್ರಯೋಜನ ಪಡೆಯ ಬಹುದು. ಇದರ ಬಗ್ಗೆ ಮಾಹಿತಿ ನೀಡುವ ಕಾರ್ಯ ಆಗಬೇಕು. ಬಂಟರ ಸಂಘ, ಬಂಟರ ಶ್ರೇಯೋಭಿವೃದ್ಧಿಗೆ ಬದ್ಧವಾಗಿ ಶ್ರಮಿಸುತ್ತಿದೆ. ಅಶಕ್ತ ಬಂಟ ಸಮಾಜದ ಬಂಧುಗಳಿಗೆ ಸಹಕಾರವಾಗಲಿ ಎಂದು  “ಸಂಜೀವಿನಿ” ಎಂಬ ಯೋಜನೆಯನ್ನು ನಾನು ಮೀರಾ – ಭಾಯಂದರ್ ಪ್ರಾದೇಶಿಕ ಸಮಿತಿಯಲ್ಲಿ ಮೊದಲು ಚಾಲನೆ ನೀಡಿದ್ದು , ಇಂದು ಅದು ಮುಂಬಯಿ ಬಂಟರಿಗೆ ಸಹಕಾರವಾಗಿದೆ  ಎಂದರು.

ಗೌರವ ಅತಿಥಿಗಳಾಗಿ ಭಾಗವಹಿಸಿದ್ದ ಭಾಯಂದರ್ ಪೂರ್ವದ ಸಾಯಿಬಾಬಾ  ಹಾಸ್ಪಿಟಲ್ ಸಿಎಂಡಿ ಡಾ. ಎನ್. ಎ. ಹೆಗ್ಡೆ ಮಾತನಾಡಿ ಮೀರಾ – ಭಾಯಂದರ್ ಪ್ರಾದೇಶಿಕ ಸಮಿತಿ ಆರೋಗ್ಯ ದೃಷ್ಟಿಯಲ್ಲಿ ಉತ್ತಮ ಕಾರ್ಯಕ್ರಮ ಹಮ್ಮಿಕೊಂಡಿರುವುದು ಅಭಿನಂದನೀಯ. ಸಕ್ಕರೆ ಕಾಯಿಲೆ, ಕ್ಯಾನ್ಸರ್ ಕಾಯಿಲೆಗಳು ಬಂದ ನಂತರ ಚಿಕಿತ್ಸೆ ಮಾಡುವುದಕ್ಕಿಂತ, ಅದಕ್ಕಿಂತ ಮುಂಚಿತವಾಗಿ ಮುಂಜಾಗೃತ ಕಾರ್ಯ ಕೈಗೊಳ್ಳುವುದು ಬಹಳ ಮುಖ್ಯ. ಬಂಟರ ಸಂಘದ ಮೀರಾ -ಭಾಯಂದರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಗುತ್ತಿನಾರ್ ರವೀಂದ್ರ ಶೆಟ್ಟಿ ಹಾಗೂ ಗಿರೀಶ್ ಶೆಟ್ಟಿ ತೆಳ್ಳಾರು ಸಮರ್ಥ ನಾಯಕರು. ನಮ್ಮ ಪ್ರಾದೇಶಿಕ ಸಮಿತಿಯ ಆಧಾರ ಸ್ತಂಭಗಳು. ಮುಂದಿನ ದಿನಗಳಲ್ಲಿ ನಮ್ಮ ಸಮಿತಿ ಸಮಾಜ ಸೇವೆಯಲ್ಲಿ ನಂಬರ್‌ ಒನ್‌ ಆಗುವುದರಲ್ಲಿ ಸಂಶಯವಿಲ್ಲ. ಪುರುಷರು ಸಂಪಾದನೆ ಮಾಡಿದರೆ ಕುಟುಂಬ ಮುನ್ನಡೆಸಲು ಸಾಧ್ಯ. ಹಾಗಾಗಿ ಕೇವಲ ಮಹಿಳೆಯರಿಗೆ ಮಾತ್ರವಲ್ಲದೆ ಪುರುಷರಿಗೂ ಆರೋಗ್ಯ ಶಿಬಿರ ಮಾಡಬೇಕು . ಕೇವಲ ಸಂಪಾದನೆ ಮಾಡಿದರೆ ಸಾಲದು. ಸಮಾಜ ಸೇವೆ ಜೊತೆಗೆ ಆರೋಗ್ಯದ ಕಡೆಗೆ ಗಮನ ಹರಿಸ ಬೇಕು  ಎಂದರು .

ಇನ್ನೋರ್ವ ಅತಿಥಿ ಬಂಟರ ಸಂಘ ಆರೋಗ್ಯ ಸಮಿತಿಯ ಕಾರ್ಯಾಧ್ಯಕ್ಷ ಡಾ. ಸ್ವರೂಪ್ ಹೆಗ್ಡೆ ಮಾತನಾಡಿ ಈ ಪ್ರಾದೇಶಿಕ ಸಮಿತಿಗೆ ಮೂರನೇ ಬಾರಿ ಬೇಟಿ ನೀಡುತ್ತಿದ್ದೇನೆ . ಸಂಘದ ಪ್ರತಿಯೊಂದು ಕೆಲಸ ದಲ್ಲಿ ಬಹಳ ಸಕ್ರಿಯವಾಗಿ ಭಾಗವಹಿಸುವ ಸಮಿತಿ.ಈ ಹಿಂದೆ ರಕ್ತದಾನ ಶಿಬಿರ ಆಯೋಜಿಸಿ ದಾಖಲೆ ನಿರ್ಮಿಸಿದ್ದೀರಿ, ನಿಮ್ಮಿಂದ ಇನ್ನಷ್ಟು ಸಮಾಜಮುಖಿ ಕಾರ್ಯಗಳು ನಿರಂತರವಾಗಿ ನೆರವೇರುತ್ತಿರಲಿ ಎಂದು ಶುಭ ಹಾರೈಸಿದರು.

ಅತಿಥಿಯಾಗಿ ಬಂಟರ ಸಂಘ ಮುಂಬಯಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ  ಚಿತ್ರಾ ಶೆಟ್ಟಿಯವರು ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.

ಆರೋಗ್ಯದ ಬಗ್ಗೆ ವಿಶೇಷ ಉಪನ್ಯಾಸವನ್ನು ನೀಡಲು ಆಗಮಿಸಿದ ಡಾ. ಪ್ರಾರ್ಥಸ್ವಿನಿ ಶೆಟ್ಟಿ ಮಾತನಾಡಿ ಮಹಿಳೆಯರು ತಮ್ಮ ಕೆಲಸದ ಮೇಲೆ ಮಾತ್ರವಲ್ಲದೆ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಬೇಕು, ಇಂದಿನ ದಿನಗಳಲ್ಲಿ ಹೆಚ್ಚುತ್ತಿರುವ ಕ್ಯಾನ್ಸರ್ ರೋಗ ತಡೆಗಟ್ಟುವ ಬಗ್ಗೆ ಮುಂಜಾಗೃತ  ಮಾಹಿತಿ ನೀಡಿದರು. 

ಮೀರಾ ರೋಡ್ ದೀಪಕ್ ಆಸ್ಪತ್ರೆಯ ಎಂ. ಡಿ. ಚರ್ಮರೋಗ ತಜ್ಞೆ ಡಾ. ರೀಯಾ ಶೆಟ್ಟಿ ಮಾತನಾಡಿ ಚರ್ಮ ರೋಗದ ಗುಣ ಲಕ್ಷಣಗಳು, ಅದರಿಂದ ಆಗುವ ಪರಿಣಾಮಗಳು , ಕಡಿಮೆ ಗುಣಮಟ್ಟದ ಔಷಧೀಯ ಬಗ್ಗೆ ಮಾಹಿತಿ ನೀಡಿದರು ಹಾಗೂ ಯಾವುದೋ ಜಾಹೀರಾತು ನೋಡಿ ಮರುಳಾಗಿ ದೇಹಕ್ಕೆ ಬಳಸುವ ಮೊದಲು ಸೂಕ್ತ ವೈದ್ಯಕೀಯ ಸಲಹೆಯನ್ನು ಪಡೆದು ಕೊಳ್ಳುವುದು ಮುಖ್ಯ ಎಂದರು.

ಈ ಸಂದರ್ಭದಲ್ಲಿ ಡಾ. ಸಾಕ್ಷಾತ್ ಶೆಟ್ಟಿ , ಹೋಟೆಲ್ ಬಾಲಾಜಿ ಇಂಟರ್ನ್ಯಾಷನಲ್ ಮಾಲಿಕ ಸುಂದರ್ ಶೆಟ್ಟಿ, ಬಂಟ್ಸ್ ಪೊರಂ ಮೀರಾ ಭಾಯಂದರ್ ಅಧ್ಯಕ್ಷ ಉದಯ್ ಶೆಟ್ಟಿ ಮಲ್ಲಾ ರಬೀಡು , ಮಾತೃಭೂಮಿ ಕೋ. ಆಪ್. ಕ್ರೆಡಿಟ್ ಸೊಸೈಟಿ ಕಾರ್ಯದರ್ಶಿ ಕಿಶೋರ್ ಕುಮಾರ್ ಕುತ್ಯಾರು , ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಧ್ಯಕ್ಷ ಸಂಪತ್ತ್ ಶೆಟ್ಟಿ ಪಂಜದ ಗುತ್ತು , ರವೀಂದ್ರ ಶೆಟ್ಟಿ ದೇರಳಕಟ್ಟೆ,  ರಾಜಕೀಯ ನೇತಾರ ಸಚ್ಚಿದಾನಂದ ಶೆಟ್ಟಿ , ಭುವಜಿ ಶ್ರೀಧರ ಶೆಟ್ಟಿ , ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಸುಗುಣ ಶೆಟ್ಟಿ , ಮಹಿಳಾ ವಿಭಾಗದ ಸಮನ್ವಯಕಿ ಅಮಿತಾ ಕೆ. ಶೆಟ್ಟಿ ,  ಬಂಟ್ಸ್ ಪೋರಂ ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಶುಖವಾಣಿ ಶೆಟ್ಟಿ , ಬಂಟ್ಸ್ ಪೋರಂ ಮಹಿಳಾ ವಿಭಾಗದ ಮಾಜಿ  ಕಾರ್ಯಧ್ಯಕ್ಷೆ ಸುಮತಿ ಶೆಟ್ಟಿಯವರನ್ನು ವಿಶೇಷವಾಗಿ ಸತ್ಕರಿಸಲಾಯಿತು.

ವೇದಿಕೆಯಲ್ಲಿ ಬಂಟರ ಸಂಘ ಮೀರಾ – ಭಾಯಂದರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಗುತ್ತಿನಾರ್ ರವೀಂದ್ರ ಶೆಟ್ಟಿ , ಸಂಚಾಲಕ ಶಿವ ಪ್ರಸಾದ್ ಶೆಟ್ಟಿ ಮಾಣಿಗುತ್ತು , ಕಾರ್ಯದರ್ಶಿ ಬಾಬಾ ಪ್ರಸಾದ್ ಅರಸ‌ ಕುತ್ಯಾರು , ಮಹಿಳಾ ವಿಭಾಗದ ಕಾರ್ಯದಕ್ಷೆ ವಸಂತಿ ಎಸ್. ಶೆಟ್ಟಿ , ಕಾರ್ಯದರ್ಶಿ ಸುಮಂಗಳ ಕಣಂಜಾರು, ಕೋಶಾಧಿಕಾರಿ ವಂದನಾ ಶೆಟ್ಟಿ , ಜೊತೆ ಕಾರ್ಯದರ್ಶಿ ಶಿಲ್ಪ ಶೆಟ್ಟಿ , ಜೊತೆ ಕೋಶಾಧಿಕಾರಿ ಅಶ್ವಿನಿ ಶೆಟ್ಟಿ , ಯುವ ವಿಭಾಗದ ಕಾರ್ಯಧ್ಯಕ್ಷ ವರ್ಷಭ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

ಶೋಭ ರಮೇಶ್ ಶೆಟ್ಟಿಯವರ ಪ್ರಾರ್ಥನೆಯೊಂದಿಗೆ ವೇದಿಕೆಯ ಮೇಲಿದ್ದ ಗಣ್ಯರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ವಸಂತಿ ಶೆಟ್ಟಿ ಸ್ವಾಗತಿಸಿದರು. ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಗುತ್ತಿನಾರ್ ರವೀಂದ್ರ ಶೆಟ್ಟಿ ಪ್ರಾಸ್ತಾವಿಕ ನುಡಿಗಳನ್ನಾ ಡಿದರು . ಕಾರ್ಯಕ್ರಮವನ್ನು ಸಮಿತಿಯ ಕಾರ್ಯದರ್ಶಿ ಬಾಬಾ ಪ್ರಸಾದ್ ಅರಸ ಕುತ್ಯಾರು ನಿರ್ವಹಿಸಿದರು . ಮಹಿಳಾ ವಿಭಾಗದ ಕಾರ್ಯದರ್ಶಿ ಸುಮಂಗಳ ಕಣಂಜಾರು ವಂದಿಸಿದರು.

———–

ಮಹಿಳೆಯರಿಗೆ ಆತ್ಮಶೈರ್ಯ ಮತ್ತು ಆರೋಗ್ಯದ ಬಗ್ಗೆ ಗಮನಹರಿಸುವ ಕಾರ್ಯ ಅಭಿನಂದನೆಯ:ಗಿರೀಶ್ ಶೆಟ್ಟಿ ತೆಳ್ಳಾರ್

ಮುಖ್ಯ ಅತಿಥಿಯಾಗಿ ಆಗಮಿಸಿದ ಬಂಟರ ಸಂಘದ ಜೊತೆ ಕಾರ್ಯದರ್ಶಿ ಗಿರೀಶ್ ಶೆಟ್ಟಿ ತೆಳ್ಳಾರ್ ಮಾತನಾಡುತ್ತಾ ಮೀರಾ – ಭಾಯಂದರ್ ಪರಿಸರದಲ್ಲಿ ಮಧ್ಯಮ ವರ್ಗಗಿಂತ ಕೆಳ ವರ್ಗದ ಜನರ ಸಂಖ್ಯೆ ಕೂಡ ತುಂಬಾ ಇದೆ. ಆದರೂ ಬಂಟರ ಸಂಘದ ಪ್ರತಿಯೊಂದು ಕಾರ್ಯಕ್ರಮ ಬಹಳ ಅಚ್ಚುಕಟ್ಟಾಗಿ ಮಾಡುತ್ತೇವೆ . ಈ ಯಶಸ್ವಿಗೆ ಮಾಜಿ ಕಾರ್ಯಧ್ಯಕ್ಷರ ಸಹಕಾರ , ಮಾರ್ಗದರ್ಶನ  ಅಪಾರವಾಗಿದೆ. ಡಾ. ಎನ್. ಎ. ಹೆಗ್ಡೆಯವರು ತಮ್ಮ ಕೆಲಸದ ಎಷ್ಟೇ ಒತ್ತಡ ಇದ್ದರೂ , ಬಂಟರ ಸಂಘದ ಪ್ರತಿಯೊಂದು ಕಾರ್ಯಕ್ರಮಕ್ಕೆ ವಿಶೇಷ ಸಹಾಯ ನೀಡುತ್ತಾ ಬಂದಿದ್ದಾರೆ. ಸಹಾಯಕ್ಕೆ ಅರ್ಜಿ ಸಲ್ಲಿಸಿದ ಎಲ್ಲಾ ಬಂಟರಿಗೆ ಆರ್ಥಿಕ ಧನ ಸಹಾಯ ಬಂಟರ ಸಂಘ ನೀಡುತ್ತಾ ಬಂದಿದೆ. ನಾನೇ ನಾಯಕ ಎಂದರೆ ಆಗದು, ನಾಯಕರು ಸಕಾರಾತ್ಮಕವಾಗಿ ಯೋಚಿಸಬೇಕು ಮತ್ತು   ಸಮಿತಿಗೆ ಸ್ಫೂರ್ತಿ ನೀಡಲು ಯಾವುದೇ ಪ್ರಸ್ತುತ ಮತ್ತು ಭವಿಷ್ಯದ ಸವಾಲನ್ನು ಎದುರಿಸಿ ನಿಲ್ಲಬೇಕು . ನಾಯಕನಿಗೆ ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವಿರಬೇಕು.  ನಾಯಕನು ನಿರ್ಧಾರ ತೆಗೆದುಕೊಳ್ಳುವ ಮೊದಲು ದೀರ್ಘ ಮತ್ತು ಕಠಿಣವಾಗಿ ಯೋಚಿಸಬೇಕು. ಆದರೆ ಒಮ್ಮೆನಿರ್ಧಾರ ತೆಗೆದುಕೊಂಡ ನಂತರ ಅದಕ್ಕೆ ಬದ್ಧನಾಗಿರಬೇಕು, ಮಹಿಳಾ ವಿಭಾಗ ಪರಿಸರದ ಮಹಿಳೆಯರಿಗೆ ಆತ್ಮಶೈರ್ಯ ಮತ್ತು ಆರೋಗ್ಯದ ಬಗ್ಗೆ ಗಮನಹರಿಸುವ ಕಾರ್ಯವನ್ನು ಮಾಡುತ್ತಿರುವುದು ಅಭಿನಂದನೀಯ

ಎಂದರು.

—————-

ಮಹಿಳೆಯರ ಆರೋಗ್ಯ ಸಮತೋಲನಕ್ಕೆ ಸಮಾಜ ಸೇವೆ ಅಗತ್ಯ :

ಗುತ್ತಿನಾರ್ ರವೀಂದ್ರ ಶೆಟ್ಟಿ ಕೊಟ್ರಪಾಡಿ ಗುತ್ತು 

ಪ್ರಾದೇಶಿಕ ಸಮಿತಿಯ ಕಾರ್ಯ ಧ್ಯಕ್ಷ ಗುತ್ತಿನಾರ್ ರವೀಂದ್ರ ಶೆಟ್ಟಿ ಕೊಟ್ರಪಾಡಿ ಗುತ್ತು ಮಾತನಾಡುತ್ತಾ ಈ ಪರಿಸರದ ಸಮಾಜ ಬಾಂಧವರು ಪ್ರಾದೇಶಿಕ ಸಮಿತಿಯ ಎಲ್ಲಾ ಕಾರ್ಯಗಳಿಗೆ ಸ್ಪಂದಿಸುತ್ತ ಸಮಾಜ ಸೇವೆಯಲ್ಲಿ ಆಸಕ್ತಿ ಹೊಂದಿದ್ದಾರೆ. ಸಮಾಜ ಸೇವೆ ಮಾಡಿದಾಗ ಮನಸ್ಸಿನಲ್ಲಿ ನೆಮ್ಮದಿ ಯಾಗುತ್ತದೆ ಆದ್ದರಿಂದ ಆರೋಗ್ಯ ಕೂಡ ಸಮತೋಲನವಾಗುತ್ತದೆ. ಸಂಘದ ಕರ್ತವ್ಯದ ಸೇವೆಯನ್ನು ಒಗ್ಗಟ್ಟಾಗಿ ನಿರ್ವಹಿಸಿದಾಗ ನಮ್ಮ ಕೆಲಸ ಕಾರ್ಯಗಳು ಯಶಸ್ವಿ ಆಗುತ್ತದೆ ಎಂದು ನುಡಿದರು.

B. Dinesh Kulal

Mob.: 9821868674



Related posts

ಶಿವಸೇನಾದಕ್ಷಿಣ ಭಾರತ ಘಟಕದಿಂದ ಮಾಹಿತಿ ಶಿಬಿರ.

Mumbai News Desk

ಸಾಕಿನಾಕ ಚಿಣ್ಣರಬಿಂಬ ಶಿಬಿರದ ಆಶ್ರಯದಲ್ಲಿ ವನ ಮಹೋತ್ಸವ ಆಚರಣೆ

Mumbai News Desk

ವರ್ಲಿ  ಶ್ರೀ ಸಿದ್ಧೇಶ್ವರ ಅನ್ನದಾತ ಅಪ್ಪಾಜಿ ಬೀಡು ಪೌಂಡೇಶನ್ ನಲ್ಲಿ ಭಕ್ತಿ ಸಂಭ್ರಮದ ಮಹಾ ಶಿವರಾತ್ರಿ ಆಚರಣೆ

Mumbai News Desk

ಶ್ರೀ ಕಟೀಲ್ ಯಕ್ಷಕಲಾ ವೇದಿಕೆ ಚಾರಿಟೇಬಲ್ ಟ್ರಸ್ಟ್ 5ನೇ ವಾರ್ಷಿಕೋತ್ಸವ

Mumbai News Desk

ಗೋರೆಗಾಂವ್ ಶ್ರೀ ಶಾಂತಾ ದುರ್ಗಾದೇವಿ ದೇವಸ್ಥಾನ -ಬ್ರಹ್ಮ ಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ .

Mumbai News Desk

ಶ್ರೀ ಗುರು ಸದ್ಗುರು ಅಯ್ಯಪ್ಪ ಭಕ್ತವೃಂದ ಟ್ರಸ್ಟ್ ಮಲಾಡ್28ನೇ ವರ್ಷದ ಅಯ್ಯಪ್ಪ ಮಹಾಪೂಜೆ ಸಂಪನ್ನ

Mumbai News Desk