
ಲಂಡನ್: ಕ್ರಿಕೆಟ್ ಅಭಿಮಾನಿಗಳನ್ನು ಅಕ್ಷರಶಃ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ಓವಲ್ ಟೆಸ್ಟ್ ಪಂದ್ಯದಲ್ಲಿ ಕೊನೆಗೂ ಟೀಂ ಇಂಡಿಯಾ ಆರು ರನ್ ರೋಚಕ ಜಯ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಈ ಗೆಲುವಿನೊಂದಿಗೆ 5 ಪಂದ್ಯಗಳ ಸರಣಿಯಲ್ಲಿ 2-2ರ ಸಮಬಲದೊಂದಿಗೆ ತನ್ನ ಅಭಿಯಾನ ಮುಗಿಸಿದೆ. 5 ವಿಕೆಟ್ ಕಬಳಿಸಿದ ವೇಗಿ ಮೊಹಮ್ಮದ್ ಸಿರಾಜ್ ಟೀಂ ಇಂಡಿಯಾ ಗೆಲುವಿನ ರೂವಾರಿ ಎನಿಸಿದರು.
ಗೆಲ್ಲಲು 374 ರನ್ಗಳ ಕಠಿಣ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡವು ನಾಲ್ಕನೇ ದಿನದಾಟದಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 339 ರನ್ ಕಲೆಹಾಕಿತ್ತು. ಕೊನೆಯ ದಿನದಾಟದಲ್ಲಿ ಇಂಗ್ಲೆಂಡ್ ಗೆಲ್ಲಲು ಕೇವಲ 35 ರನ್ ಅಗತ್ಯವಿತ್ತು. ವಿಕೆಟ್ ಕೀಪರ್ ಬ್ಯಾಟರ್ ಜೇಮೀ ಸ್ಮಿತ್ ಹಾಗೂ ಜೇಮಿ ಓವರ್ಟನ್ ಕ್ರೀಸ್ನಲ್ಲಿದ್ದರು. ಐದನೇ ದಿನದಾಟದ ಮೊದಲ ಓವರ್ನ ಮೊದಲೆರಡು ಎಸೆತದಲ್ಲೇ ಬೌಂಡರಿ ಬಾರಿಸುವ ಮೂಲಕ ಉತ್ತಮ ಆರಂಭ ಒದಗಿಸಿಕೊಟ್ಟರು. ಆದರೆ ಮರು ಓವರ್ನಲ್ಲೇ ವೇಗಿ ಮೊಹಮ್ಮದ್ ಸಿರಾಜ್, ಜೇಮೀ ಸ್ಮಿತ್(2) ಅವರನ್ನು ಬಲಿ ಪಡೆಯುವ ಮೂಲಕ ಇಂಗ್ಲೆಂಡ್ಗೆ ಶಾಕ್ ನೀಡಿದರು. ಇದಾದ ಕೆಲ ಹೊತ್ತಿನಲ್ಲೇ ಅಮೂಲ್ಯ 9 ರನ್ ಬಾರಿಸಿದ್ದ ಜೇಮಿ ಓವರ್ಟನ್ ಅವರನ್ನು ಬಲಿಪಡೆಯುವ ಮೂಲಕ ಆತಿಥೇಯರಿಗೆ ಡಬಲ್ ಶಾಕ್ ನೀಡಿದರು.
ಇಂಗ್ಲೆಂಡ್ ಗೆಲ್ಲಲು ಕೇವಲ 18 ರನ್ ಬೇಕಿದ್ದಾಗ ವೇಗಿ ಪ್ರಸಿದ್ದ್ ಕೃಷ್ಣ ಜೋಶ್ ಟಂಗ್ ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಭಾರತದ ಪಾಳಯದಲ್ಲಿ ಗೆಲುವಿನ ಆಸೆ ಮೂಡಿಸಿದರು. ಇನ್ನು ಗಸ್ ಅಟ್ಕಿನ್ಸನ್ 17 ರನ್ ಗಳಿಸಿ ಸಿರಾಜ್ಗೆ ಕೊನೆಯವರಾಗಿ ಪೆವಿಲಿಯನ್ ಗೆ ಮರಳಿದರು.
ಲೀಡ್ಸ್ ನಲ್ಲಿ ನಡೆದ ಪ್ರಥಮ ಟೆಸ್ಟ್ ಪಂದ್ಯವನ್ನು ಇಂಗ್ಲೆಂಡ್ ತಂಡ ಐದು ವಿಕೆಟ್ ಗಳಿಂದ ಜಯಿಸಿತ್ತು. ಬರ್ಮಿಂಗ್ ಹ್ಯಾ0 ನಲ್ಲಿ ನಡೆದ ಎರಡನೇ ಪಂದ್ಯವನ್ನು ಭಾರತ 331 ರನ್ನುಗಳ ಅಗಾಧ ಅಂತರದಿಂದ ತನ್ನದಾಗಿಸಿಕೊಳ್ಳುವ ಮೂಲಕ ಸರಣಿಯಲ್ಲಿ ಸಮಬಲ ಸಾಧಿಸಿತ್ತು. ಮೂರನೇ ಟೆಸ್ಟ್ನಲ್ಲಿ ಇಂಗ್ಲೆಂಡ್ ತಂಡ 21 ರನ್ ಗಳ ರೋಚಕ ಜಯ ಸಾಧಿಸಿತ್ತು . ಓಲ್ಡ್ ಟ್ರಾಫರ್ಡ್ ನಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯ ಡ್ರಾ ಆಗಿತ್ತು.
ಕ್ರಿಕೆಟ್ ಪ್ರೇಮಿಗಳನ್ನು ತುದಿಗಾಲಿ ನಿಲ್ಲಿಸಿದ ಓವಲ್ ಟೆಸ್ಟ್ ಪಂದ್ಯವನ್ನು ಆರು ರನ್ನುಗಳಿಂದ ಗೆಲ್ಲುವ ಮೂಲಕ ಭಾರತ ಸರಣಿಯನ್ನು 2-2 ಸಮಗೊಳಿಸುವಲ್ಲಿ ಯಶಸ್ವಿಯಾಗಿದೆ.ಈ ಮೂಲಕ ಪ್ರತಿಷ್ಠಿತ ಅಂಡರ್ಸನ್-
ತೆಂಡೂಲ್ಕರ್ ಟ್ರೋಪಿಯನ್ನು ತನ್ನ ಬಳಿ ಉಳಿಸಿಕೊಂಡಿದೆ.




