.

ಮುಂಬಾಯಿ ಮಹಾನಗರದಲ್ಲಿ ನೆಲೆಸಿರುವ ಕಾಪು ಮೊಗವೀರ ಮಹಿಳಾ ಮಂಡಳಿ ಇವರ ಆಟಿದ ಒಂಜಿ ಕೂಟ ಹಾಗೂ ಅಭಿನಂದನಾ ಕಾರ್ಯಕ್ರಮವನ್ನು 19.07.2026 ರ ರವಿವಾರದಂದು ಅಂಧೇರಿ ಪಶ್ಚಿಮದ ಮೊಗವೀರ ಭವನದಲ್ಲಿ ಜರಗಿಸಲಾಯಿತು.
ಕಾರ್ಯಕ್ರಮವು ಮಹಿಳಾ ಮಂಡಳಿಯ ಕಾರ್ಯದರ್ಶಿ ಹೇಮಾ ಕೋಟ್ಯಾನ್ ರವರು ಮಹಿಳಾ ಮಂಡಳಿಯ ಅಧ್ಯಕ್ಷರಾದ ತುಳಸಿ ಸದಾನಂದ್ ಹಾಗೂ ಪದಾಧಿಕಾರಿಗಳಾದ ತಾರಾ ಮೆಂಡನ್, ರೋಹಿಣಿ ಕರುಣಾಕರ್, ಪ್ರತಿಮಾ ಭಾಸ್ಕರ್, ಭಾಮಿನಿ ಮೆಂಡನ್, ಪ್ರಫುಲ್ಲ ಸದಾನಂದ್, ಧನಲಕ್ಷ್ಮೀ ಸಾಲ್ಯಾನ್ ಹಾಗೂ ಶೋಭಾ ಮೆಂಡನ್ ರವರನ್ನು ಆತ್ಮೀಯವಾಗಿ ವೇದಿಕೆಗೆ ಸ್ವಾಗತಿಸಿದರು.
ತಾರಾ ಮೆಂಡನ್, ಯಶೋಧ ಕಾಂಚನ್, ಶ್ರೀಮತಿ ಶಾರದಾ ಕಾಂಚನ್, ಅವಂತಿ ಪುತ್ರನ್ ಹಾಗೂ ಕಿರಣಾ ಪ್ರಭಾ ರವರು ದೀಪ ಬೆಳಗಿಸಿದರು. ಹೇಮಾ ಕೋಟ್ಯಾನ್, ಉಷಾ ಕರ್ಕೇರ, ಸಾವಿತ್ರಿ ಬಂಗೇರ, ಸುಹಾಸಿನಿ ಸುವರ್ಣ, ಶ್ರೀಮತಿ ಸುಜಾತ ಕಾಂಚನ್ ರವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ನಂತರ ಪ್ರತಿಮಾ ಭಾಸ್ಕರ್ ನೆರೆದ ಸದಸ್ಯರನ್ನು ಆತ್ಮೀಯವಾಗಿ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸುತ್ತಾ ಮುಂದುವರಿಸಿದರು.

ಕಾಪು ಗ್ರಾಮದ ಹಿರಿಯ ಮಹಿಳಾ ಸದಸ್ಯೆಯರನ್ನು ಅವರ ಹಿರಿತನ ಹಾಗೂ ಸಮಾಜಕ್ಕೆ ಸಲ್ಲಿಸಿದ ಸೇವೆಯನ್ನು ಗೌರವಿಸಿ ಸನ್ಮಾನಿಸಲಾಯಿತು. ಶಶಿ ಸಾಲ್ಯಾನ್ ಮತ್ತು ಶಾರದಾ ಕಾಂಚನ್ ಅವರ ಬಾಲ್ಯ, ಶಿಕ್ಷಣ, ಕುಟುಂಬ, ಉದ್ಯೋಗ ಹಾಗೂ ಸಮಾಜಸೇವೆಯ ಪರಿಚಯವನ್ನು ಮಹಿಳಾ ಮಂಡಳಿಯ ಸದಸ್ಯೆಯರು ಹೃದಯಸ್ಪರ್ಶಿಯಾಗಿ ಮಾಡಿಕೊಟ್ಟರು. ಬಳಿಕ ಫಲ, ಪುಷ್ಪ ಹಾಗೂ ಕಿರು ಕಾಣಿಕೆ ನೀಡಿ ಪ್ರೀತಿ ಮತ್ತು ಗೌರವದಿಂದ ಅವರನ್ನು ಅಭಿನಂದಿಸಲಾಯಿತು.
ಪ್ರತಿಮಾ ಭಾಸ್ಕರ್ ರವರ ನೇತೃತ್ವದಲ್ಲಿ ಲಕ್ಕಿ ಡಿಪ್ ಡ್ರಾ ಕಾರ್ಯಕ್ರಮವು ತುಂಬಾ ಅಚ್ಚುಕಟ್ಟಾಗಿ ಮೂಡಿಬಂತು. ಅದರಲ್ಲಿ ಭಾಗವಹಿಸಿದ ಪ್ರತಿಯೊಬ್ಬ ಸದಸ್ಯರನ್ನು ತುಂಬಾ ಪ್ರೀತಿಯಿಂದ ಹಾಗೂ ಅಭಿಮಾನದಿಂದ ವೇದಿಕೆಗೆ ಆಹ್ವಾನಿಸಿ ಗೌರವದಿಂದ ಕಿರು ಕಾಣಿಕೆ ನೀಡಿ ಸನ್ಮಾನಿಸಲಾಯಿತು. ಹಾಗೆಯೇ ವಿಜೇತರಿಗೆ ಅವರ ಬಹುಮಾನವನ್ನು ನೀಡಿ ಹಾರೈಸಲಾಯಿತು.
ಪ್ರತಿಯೊಂದು ಸನ್ಮಾನದ ಮಧ್ಯೆ ಮನೋರಂಜನೆಯು ಸಾಗಿದಂತೆ, ಮಹಿಳಾ ಮಂಡಳಿಯ ವಿವಿಧ ಕಲಾವಿದರು ತುಂಬಾ ಮಧುರವಾಗಿ ಹಾಡಿ ಸಭೆಯಲ್ಲಿನ ಸಭಿಕರನ್ನು ರಂಜಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಮಕ್ಕಳು ಮತ್ತು ಮಹಿಳೆಯರಿಂದ ನೃತ್ಯ ವೈವಿಧ್ಯ ಪ್ರದರ್ಶನಗೊಂಡಿತು. ವಿಶೇಷವಾಗಿ ‘ಆಟಿ ಕಳಂಜ’ ನೃತ್ಯವು ಎಲ್ಲರ ಗಮನ ಸೆಳೆಯಿತು. ಮಹಿಳಾ ಮಂಡಳಿಯ ಸದಸ್ಯರು ಬಿಡಿಸಿದ್ದ ರಂಗೋಲಿ ಎಲ್ಲರ ಮನಸೂರೆಗೊಂಡಿತ್ತು.
ರತ್ನಾಕರ ಕರ್ಕೇರರವರ ವತಿಯಿಂದ ಅವರ ಪ್ರೀತಿಯ ತಾಯಿಯ ಸವಿ ನೆನಪಿನಲ್ಲಿ ನಾಲ್ಕು ಪ್ರತಿಭಾವಂತ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡಿ, ಕಾಪುವಿನ ಅವರ ಮನೆತನದ ಹಿರಿಯರ ಪರಿಚಯದೊಂದಿಗೆ ಅವರನ್ನು ಪ್ರೀತಿಯಿಂದ ಸನ್ಮಾನಿಸಲಾಯಿತು.
ತುಳಸಿ ಸದಾನಂದ್ ಮಾತನಾಡಿ, “ಆಟಿದ ಕೂಟ, ಪ್ರತಿಭಾ ಪುರಸ್ಕಾರ ಇವುಗಳು ಬರೀ ಒಂದು ಕಾರ್ಯಕ್ರಮವಲ್ಲ; ನಮ್ಮೆಲ್ಲರನ್ನು ಒಗ್ಗೂಡಿಸಿ, ಪರಸ್ಪರ ಪ್ರೀತಿ, ಸ್ನೇಹ ಮತ್ತು ಸಂಸ್ಕೃತಿಯನ್ನು ಬೆಸೆಯುವ ಒಂದು ಸುಂದರವಾದ ಕೌಟುಂಬಿಕ ಸಂಭ್ರಮಗಳಾಗಿವೆ” ಎಂದರು. ಇವತ್ತು ಇಲ್ಲಿ 60 ಮಂದಿ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಂಡಳಿಯ ಒಗ್ಗಟ್ಟು, ಘನತೆ ಹಾಗೂ ಗೌರವವನ್ನು ಹೆಚ್ಚಿಸಿದ್ದೀರಿ ಎಂದು ಹೇಳಿ ಧನ್ಯವಾದಗಳನ್ನು ಅರ್ಪಿಸಿದರು.

ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ತನು, ಮನ, ಧನದಿಂದ ಸಹಕಾರ ನೀಡಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕಾರ್ಯಕ್ರಮದ ಅಂದ-ಚೆಂದವನ್ನು ಹೆಚ್ಚಿಸಿದ ಮಹಿಳಾ ಮಂಡಳಿಯ ಎಲ್ಲಾ ಸದಸ್ಯರಿಗೂ ತುಳಸಿ ಸದಾನಂದ್ ಕೃತಜ್ಞತೆಯೊಂದಿಗೆ ಧನ್ಯವಾದಗಳನ್ನು ಅರ್ಪಿಸಿದರು. ಈ ಸಮಾರಂಭವು ಶ್ರೀಮತಿ ತುಳಸಿ ಸದಾನಂದ್ ರವರ ನಾಯಕತ್ವದಲ್ಲಿ, ಶ್ರೀಮತಿ ಪ್ರಫುಲ್ಲ ರವರ ಸಹಾಯಕತ್ವದಲ್ಲಿ ಹಾಗೂ ಪ್ರತಿಮಾ ಭಾಸ್ಕರ್ ರವರ ನಿರೂಪಣೆಯೊಂದಿಗೆ, ಮಹಿಳಾ ಮಂಡಳಿಯ ಎಲ್ಲಾ ಸದಸ್ಯರ ಸಹಕಾರದೊಂದಿಗೆ ಅತ್ಯಂತ ಸುವ್ಯವಸ್ಥಿತವಾಗಿ ಮೂಡಿಬಂದಿದೆ.
ಕೊನೆಯಲ್ಲಿ ತುಳಸಿ ಸದಾನಂದ್ ರವರ ಪ್ರಾಯೋಜಕತ್ವದಲ್ಲಿ ಆಟಿಯ ವಿವಿಧ ವ್ಯಂಜನಗಳೊಡನೆ ರುಚಿಕರವಾದ ಭೋಜನದ ವ್ಯವಸ್ಥೆ ಮಾಡಲಾಗಿತ್ತು.
ಸದಸ್ಯತ್ವ ಅಥವಾ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
- ಇ-ಮೇಲ್: kapumogaveera@gmail.com
- ಶ್ರೀಮತಿ ತುಳಸಿ ಸದಾನಂದ್: 9870050366
- ಶ್ರೀಮತಿ ಪ್ರತಿಮಾ ಭಾಸ್ಕರ್: 9821667870





