
ಮುಂಬೈ, ಆ.19 – ಬಂಟರ ಸಂಘ ಮುಂಬೈ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯ ಆಶ್ರಯದಲ್ಲಿ, ತುಳುನಾಡಿನ ಪರಂಪರೆ ಹಾಗೂ ಸಂಸ್ಕೃತಿಯನ್ನು ಬೆಳಗಿಸುವ ಉದ್ದೇಶದಿಂದ, “ಕೃಷ್ಣ ರಾಜಿ ಪ್ರಸಂಗೊ – ಅಂಕೊದ ಬೂಲ್ಯ” ಎಂಬ ತುಳು ಯಕ್ಷಗಾನ ತಾಳಮದ್ದಳೆ ಪ್ರದರ್ಶನ ಭವ್ಯವಾಗಿ ನಡೆಯಿತು.
ಕಾಂದಿವಲಿ ಪಶ್ಚಿಮದ ಮಹಾವೀರ ನಗರದಲ್ಲಿರುವ ಕಮಲಾ ವಿಹಾರ್ ಸ್ಪೋರ್ಟ್ಸ್ ಕ್ಲಬ್ ಸಭಾಂಗಣದಲ್ಲಿ ನಡೆದ ಈ ಸಂಭ್ರಮದ ಕಲೆತುಂಬಿದ ಕಾರ್ಯಕ್ರಮದಲ್ಲಿ, ಅಜೆಕಾರು ಕಲಾಭಿಮಾನಿ ಬಳಗದ ಕಲಾವಿದರು ತಮ್ಮ ಶ್ರೇಷ್ಠ ಕಲಾ ಪ್ರದರ್ಶನದಿಂದ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದರು. ಪ್ರಸಂಗದ ತಾಳಮದ್ದಳೆ “ಕೃಷ್ಣ ಸಂಧಾನ – ಧುರ ವೀಳ್ಯ” ಜನಮನ ಸೆಳೆಯಿತು.
ಕಾರ್ಯಕ್ರಮದ ಉದ್ಘಾಟನೆ ದೀಪ ಪ್ರಜ್ವಲನೆಯೊಂದಿಗೆ ಬಂಟರ ಸಂಘ ಮುಂಬೈ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿ ಅವರಿಂದ ನೆರವೇರಿತು. ಅವರು ಮಾತನಾಡುತ್ತಾ, “ಯಕ್ಷಗಾನ ನಮ್ಮ ತುಳುನಾಡಿನ ಆತ್ಮ. ಈ ಕಲೆ ನಗರಗಳಲ್ಲಿ ಪ್ರಚಲಿತವಾಗಿರುವುದು ಸಂತೋಷದ ಸಂಗತಿ. ಮುಂಬೈಯಂತಹ ಮಹಾನಗರದಲ್ಲೂ ಯುವ ಸಮುದಾಯ ಈ ಕಲೆಗೆ ತಲೆಬಾಗುತ್ತಿರುವುದು ಗಮನಾರ್ಹ ಸಂಗತಿ,” ಎಂದರು.
ಅವರು ಮುಂದುವರೆದು, “ಯಕ್ಷಗಾನದ ಮೂಲಕ ಪುರಾಣ, ಸಂಸ್ಕೃತಿ ಹಾಗೂ ನೈತಿಕ ಮೌಲ್ಯಗಳನ್ನು ನಾವರ್ಥಮಾಡಿಕೊಳ್ಳುತ್ತೇವೆ. ಅಜೆಕಾರು ಕಲಾಭಿಮಾನಿ ಬಳಗದ ಶ್ರಮದಿಂದ ಇಂದಿನ ತಾಳಮದ್ದಳೆ ಪ್ರದರ್ಶನ ಯಶಸ್ವಿಯಾಗಿದೆ. ಮುಂಬೈಯಲ್ಲಿ ಈಗ ಯಕ್ಷಗಾನ ಕಲಾವಿದರ ಬೆಳವಣಿಗೆ ಗಮನಾರ್ಹವಾಗಿದ್ದು, ಇಂಥ ಕಲಾ ಕಾರ್ಯಕ್ರಮಗಳು ನಿರಂತರ ನಡೆಯಬೇಕು,” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬಂಟರ ಸಂಘದ ಜೋಗೇಶ್ವರಿ-ದಹಿಸರ್ ಸಮಿತಿಯ ಕಾರ್ಯಾಧ್ಯಕ್ಷ ಪ್ರೇಮನಾಥ ಶೆಟ್ಟಿ ಕೊಂಡಾಡಿ ಅವರು ಸಮಾರಂಭದ ಸ್ವಾಗತವನ್ನು ಸಲ್ಲಿಸಿದರು. ಅವರು ಮಾತನಾಡುತ್ತಾ, “ಕಲೆ ಉಳಿದಾಗ ಮಾತ್ರ ನಮ್ಮ ಸಂಸ್ಕೃತಿ ಉಳಿಯಲು ಸಾಧ್ಯ. ನಮ್ಮ ಸಮಿತಿಯು ಈ ದಿಶೆಯಲ್ಲಿ ನಿರಂತರವಾಗಿ ಶ್ರಮಿಸುತ್ತಿದೆ,” ಎಂದು ಹೇಳಿದರು.
ವಿಶಿಷ್ಟ ಅತಿಥಿಗಳ ಆಗಮನ: ವೇದಿಕೆಯಲ್ಲಿ ಉಪ ಕಾರ್ಯಾಧ್ಯಕ್ಷ ಗಂಗಾಧರ ಎ. ಶೆಟ್ಟಿ, ಕಾರ್ಯದರ್ಶಿ ರಮೇಶ್ ಎಂ. ಶೆಟ್ಟಿ, ಕೋಶಾಧಿಕಾರಿ ಅವಿನಾಶ್ ಎಂ. ಶೆಟ್ಟಿ, ಜೊತ ಕಾರ್ಯದರ್ಶಿ ಜಯ ಶೆಟ್ಟಿ, ಜೊತ ಕೋಶಾಧಿಕಾರಿ ರಮೇಶ್ ಹೆಚ್. ಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷೆ ಸುನಿತಾ ಎನ್. ಹೆಗ್ಡೆ, ಹಾಗೂ ಪ್ರಮುಖ ಸಲಹೆಗಾರರಾದ ಮುಂಡಪ್ಪ ಎಸ್. ಪಯ್ಯಡೆ, ರವೀಂದ್ರ ಎಸ್. ಶೆಟ್ಟಿ, ಎರ್ಮಾಳು ಹರೀಶ್ ಶೆಟ್ಟಿ ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಲಾವಿದರ ಶ್ರೇಷ್ಠ ಪ್ರದರ್ಶನ:
ಭಾಗವತಿಕೆ: ದೇವಿಪ್ರಸಾದ್ ಆಳ್ವ (ತಲಪಾಡಿ)
ಚೆಂಡೆ: ಸುಬ್ರಹ್ಮಣ್ಯ ಭಟ್ (ದೇಲಂತಮಜಲು)
ಮದ್ದಲೆ: ಪ್ರಶಾಂತ್ ಶೆಟ್ಟಿ (ವಗೆನಾಡು)
ವೇಷಧಾರಿಗಳು: ಡಾ. ಎಂ. ಪ್ರಭಾಕರ ಜೋಶಿ, ಜಯ ಪ್ರಕಾಶ್ ಶೆಟ್ಟಿ (ಪೆರ್ಮುದೆ), ಭಾಸ್ಕರ ರೈ (ಕುಕ್ಕುವಳ್ಳಿ), ಸದಾಶಿವ ಆಳ್ವ (ತಲಪಾಡಿ), ದಿನೇಶ್ ಶೆಟ್ಟಿ (ಕಾವಳ ಕಟ್ಟೆ)
ಸ್ಮರಣೀಯ ಸಂಭ್ರಮ: ಮಧ್ಯಂತರದಲ್ಲಿ ಕಲಾವಿದರಿಗೆ ಸನ್ಮಾನ ಸಮಾರಂಭವನ್ನೂ ನಡೆಸಲಾಗಿದ್ದು, ಪ್ರಾದೇಶಿಕ ಸಮಿತಿಯು ಅವರ ಕಲಾ ಸೇವೆಯನ್ನು ಮೆಚ್ಚುಗೆಯಿಂದ ಸ್ಮರಿಸಿತು. ನಿರೂಪಣೆ ಹೊಣೆ ಹೊತ್ತವರು ರಘುನಾಥ್ ಎನ್. ಶೆಟ್ಟಿ ಯವರು.
ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಮುಂಬೈಯಲ್ಲಿ ತುಳು ನಾಡಿನ ಪರಂಪರೆ, ಭಾಷೆ ಮತ್ತು ಕಲೆ ಗಟ್ಟಿಯಾಗಿ ಬೆಳೆದು ಬರುತ್ತಿರುವುದು ಗಮನಾರ್ಹ. ಬಂಟರ ಸಂಘ ಮತ್ತು ಅದರ ಪ್ರಾದೇಶಿಕ ಸಮಿತಿಯ ಶ್ರಮ, ಈ ಕಲೆಗಳಿಗೆ ಹೊಸ ಉಸಿರನ್ನು ತುಂಬುವಲ್ಲಿ ಪೂರಕವಾಗಿದೆ.




