
ಶಿಮಂತೂರು: ವಿಜ್ಞಾನದ ಅಧ್ಯಯನ ಕೇವಲ ಪಠ್ಯಪುಸ್ತಕಗಳಿಗೆ ಸೀಮಿತವಾಗದೆ, ವಿದ್ಯಾರ್ಥಿಗಳು ಸ್ವತಃ ಪ್ರಯೋಗಗಳನ್ನು ಕೈಗೊಳ್ಳುವ ಮೂಲಕ ಜ್ಞಾನಾರ್ಜನೆ ಮಾಡಬೇಕು ಎಂದು ಶ್ರೀ ಮಹಾಮಾಯಿ ದೇವಸ್ಥಾನ, ಶ್ರೀ ಕೊರ್ದಬು ದೈವಸ್ಥಾನ ಎಳತ್ತೂರು ಪಡ್ಲಾಕ್ಯರಿನ ಆಡಳಿತ ಮಂಡಳಿಯ ಅಧ್ಯಕ್ಷ ಸುರೇಶ್ ಶೆಟ್ಟಿ ನಾಡಿಯಾಳು ಗುತ್ತು ಅವರು ಹೇಳಿದರು.
ಇದೇ ವೇಳೆ, ಕ್ರೀಡಾ ಸಾಮಗ್ರಿಗಳ ವಿತರಣೆಯು ವಿದ್ಯಾರ್ಥಿಗಳ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ಪೂರಕವಾಗಿದೆ ಎಂದು ಅವರು ತಿಳಿಸಿದರು. ಎಳತ್ತೂರಿನ ನಾಡಿಯಾಳು ಗುತ್ತಿನ ದಿವಂಗತ ರತಿ ಶೆಟ್ಟಿ ಅವರ 25ನೇ ವರ್ಷದ ಸಂಸ್ಮರಣೆ ಅಂಗವಾಗಿ, ಶಿಮಂತೂರಿನ ಶ್ರೀ ಶಾರದಾ ಸೆಂಟ್ರಲ್ ಸ್ಕೂಲ್ಗೆ ವಿಜ್ಞಾನ ಪ್ರಯೋಗಾಲಯದ ಪರಿಕರಗಳು ಹಾಗೂ ಕ್ರೀಡಾ ಸಾಮಗ್ರಿಗಳ ವಿತರಣಾ ಸಮಾರಂಭದಲ್ಲಿ ಮುಖ್ಯ ದಾನಿಗಳಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಶಾರದಾ ಸೊಸೈಟಿಯ ಕೋಶಾಧಿಕಾರಿ ಕೆ. ಭುವನಾಭಿರಾಮ ಉಡುಪ ಮಾತನಾಡಿ, ಕ್ರೀಡೆಗಳು ತಂಡಭಾವನೆ, ಶಿಸ್ತು ಮತ್ತು ಆರೋಗ್ಯವನ್ನು ಬಲಪಡಿಸುತ್ತವೆ. ವಿಜ್ಞಾನ ಪರಿಕರಗಳ ಬಳಕೆಯಿಂದ ಅಧ್ಯಯನವು ಹೆಚ್ಚು ಆಕರ್ಷಕ ಮತ್ತು ಅನುಭವಾತ್ಮಕವಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ, ದಾನಿಗಳಾದ ಮುಂಬೈನ ಉದ್ಯಮಿ ಮತ್ತು ಶಾಲೆಯ ಹಿರಿಯ ವಿದ್ಯಾರ್ಥಿ ಶಶಿಧರ ಶೆಟ್ಟಿ ನಾಡಿಯಾಳು ಗುತ್ತು, ಅವರ ಪತ್ನಿ ಹೇಮಲತಾ ಶಶಿಧರ ಶೆಟ್ಟಿ ಹಾಗೂ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷೆ ಸುಮನ ಉಪಸ್ಥಿತರಿದ್ದರು. ಸಮಾರಂಭದ ಅಂಗವಾಗಿ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನೂ ಮಾಡಲಾಗಿತ್ತು.
ಶಾಲಾ ಸಂಚಾಲಕರಾದ ದೇವಪ್ರಸಾದ್ ಪುನರೂರು ಅವರು ಸ್ವಾಗತ ಭಾಷಣ ಮಾಡಿದರು. ಶಾಲೆಯ ಪ್ರಾಂಶುಪಾಲರಾದ ಜಿತೇಂದ್ರ ವಿ. ರಾವ್ ವಂದನಾರ್ಪಣೆ ಮಾಡಿದರು. ಸಹ ಶಿಕ್ಷಕಿ ನಿಶ್ಮಿತಾ ಕಾರ್ಯಕ್ರಮ ನಿರೂಪಿಸಿದರು.




