
ಚಿತ್ರ ವರದಿ: ರವಿ. ಬಿ. ಅಂಚನ್ ಪಡುಬಿದ್ರಿ
ಕಲ್ಯಾಣ್, ಸೆಪ್ಟೆಂಬರ್ 28: ಕಲ್ಯಾಣ್ ಪರಿಸರದ ಕೀರ್ತಿ ಶಿಖರವಾದ, ಪರಮ ಪಾವನ ಶ್ರೀ ನಿತ್ಯಾನಂದ ಮಿತ್ರ ಭಜನಾ ಮಂಡಳಿಯ ಸಂಚಾಲಕತ್ವದಲ್ಲಿರುವ ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನ, ಬಿರ್ಲಾ ಗೇಟ್, ಶಹಾಡ್ ಈ ಬಾರಿ ಶರನ್ನವರಾತ್ರಿಯನ್ನು ಅಭೂತಪೂರ್ವ ಭಕ್ತಿ ಮತ್ತು ವೈಭವದಿಂದ ಆಚರಿಸುತ್ತಿದೆ. ನವರಾತ್ರಿಯ ಪ್ರತಿ ದಿನವೂ ದೇವಿಯು ಅಲಂಕಾರಗಳಿಂದ ಕಂಗೊಳಿಸುತ್ತಿದ್ದು, ಭಕ್ತವೃಂದದ ಮನಸ್ಸಿಗೆ ಶಾಂತಿ, ಸಮೃದ್ಧಿ ಹಾಗೂ ದಿವ್ಯಾನುಭೂತಿಯನ್ನು ದಯಪಾಲಿಸುತ್ತಿದ್ದಾಳೆ.
ಕ್ಷೇತ್ರದ ತಂತ್ರಿಗಳಾದ ಶಂಕರನಾರಾಯಣ ತಂತ್ರಿಗಳು ಮತ್ತು ಶ್ರೀಕಾಂತ್ ತಂತ್ರಿಗಳ ಪೌರೋಹಿತ್ಯದಲ್ಲಿ ಮೂಕಾಂಬಿಕೆಯ ಸನ್ನಿಧಿಯಲ್ಲಿ ವಿವಿಧ ವೈದಿಕ ಪೂಜೆಗಳು ಶಾಸ್ತ್ರೋಕ್ತವಾಗಿ ನೆರವೇರುತ್ತಿವೆ. ಗಂಧ, ಪುಷ್ಪ, ನೈವೇದ್ಯಗಳ ಸಮರ್ಪಣೆಯೊಂದಿಗೆ ದೇವಿಗೆ ನಿತ್ಯ ವಿಶೇಷ ಪೂಜೆಗಳು ಮತ್ತು ಮಹಾ ಮಂಗಳಾರತಿಗಳು ಜರುಗುತ್ತಿದ್ದು, ಭಕ್ತಿಯ ಸುವಾಸನೆ ಆಲಯದಲ್ಲೆಲ್ಲಾ ಹರಡಿದೆ.

ಮಂಡಳಿಯ ಧೀಮಂತ ಅಧ್ಯಕ್ಷರಾದ ರಾಜೇಶ್ ಶೆಟ್ಟಿ ಮತ್ತು ಕಾರ್ಯಾಧ್ಯಕ್ಷರಾದ ಚಂದ್ರಕಾಂತ ಶೆಟ್ಟಿಯವರ ನಾಯಕತ್ವದಲ್ಲಿ, ಕಾರ್ಯಾಕಾರಿ ಸಮಿತಿ, ಮಹಿಳಾ ಹಾಗೂ ಯುವ ವಿಭಾಗದ ಸದಸ್ಯರು ಮತ್ತು ಟ್ರಸ್ಟಿಗಳ ಸಮಸ್ತ ಉಪಸ್ಥಿತಿಯಲ್ಲಿ ದೀಪ ಪ್ರಜ್ವಲಿಸುವ ಮೂಲಕ ನವರಾತ್ರಿ ಭಜನಾ ಮಹೋತ್ಸವಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಲಾಯಿತು.
ತದನಂತರ, ಮಹಾನಗರದ ಪ್ರತಿಷ್ಠಿತ ಭಜನಾ ತಂಡಗಳ ಸುಮಧುರ ಗಾಯನದಿಂದ ದೇವಿಯ ಆಲಯವು ಭಕ್ತಿ ಸಾಗರವಾಗಿ ಮಾರ್ಪಟ್ಟಿದೆ. “ಭಜನೆ’ಯೆಂಬ ಮಾಧುರ್ಯದ ಅಲೆಯಲ್ಲಿ ಭಕ್ತರು ಮಿಂದೆದ್ದರು. ಸಂಜೆ ಕಲೆಯ ನೃತ್ಯಾಭಿನಯದಿಂದ ದೇವಿಗೆ ಅರ್ಪಣೆ ಮಾಡುವ ಉದ್ದೇಶದಿಂದ ವಿವಿಧ ತಂಡಗಳಿಂದ ಕಣ್ಮನ ಸೆಳೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ನೃತ್ಯ ಪ್ರದರ್ಶನಗಳು ಜರುಗಿದವು.

ಈ ದಿವ್ಯ ಕಾರ್ಯಕ್ರಮದ ಯಶಸ್ಸಿಗಾಗಿ ಮಂಡಳಿಯ ಸಂಚಾಲಕರಾದ ಕರುಣಾಕರ ಶೆಟ್ಟಿಯವರ ನೇತೃತ್ವದಲ್ಲಿ, ಉಪಾಧ್ಯಕ್ಷ ಯುವರಾಜ ಕೆ. ಪೂಜಾರಿ, ಕಾರ್ಯದರ್ಶಿ ಜಗದೀಶ್ ಶೆಟ್ಟಿ ಬೆಳಂಜೆ, ಕೋಶಾಧಿಕಾರಿ ಸಂತೋಷ್ ಎಚ್. ಶೆಟ್ಟಿ, ಜತೆ ಕಾರ್ಯದರ್ಶಿಗಳಾದ ಗಣೇಶ್ ಶೆಟ್ಟಿ ನಂದ್ರೊಲಿ, ಪ್ರೇಮ್ ಕುಮಾರ್ ರೈ, ಜತೆ ಕೋಶಾಧಿಕಾರಿಗಳಾದ ಸದಾನಂದ ಸಾಲ್ಯಾನ್, ವಸಂತ ಶೆಟ್ಟಿ ಹಾಗೂ ಸಮಸ್ತ ಕಾರ್ಯಕಾರಿ ಸಮಿತಿ ಸದಸ್ಯರು, ಟ್ರಸ್ಟಿಗಳು ಮತ್ತು ಉಪಸಮಿತಿಯ ಸದಸ್ಯರು ಅಹರ್ನಿಶಿ ಶ್ರಮಿಸುತ್ತಿದ್ದಾರೆ.

ವಿಶೇಷವಾಗಿ, ಮಹಿಳಾ ವಿಭಾಗದ ಶಕ್ತಿ ಕೇಂದ್ರವಾದ ಕಾರ್ಯಾಧ್ಯಕ್ಷೆ ಜ್ಯೋತಿ ಎಸ್. ಶೆಟ್ಟಿ, ಉಪ ಕಾರ್ಯಾಧ್ಯಕ್ಷೆ ಗೀತಾ ಸಿ.ಪೂಜಾರಿ, ಸಲಹೆಗಾರರಾದ ಪ್ರವೀಣಾ ಪಿ. ಶೆಟ್ಟಿ, ಶೋಭಾ ಎ.ಶೆಟ್ಟಿ, ಕಾರ್ಯದರ್ಶಿ ಉಮಾ ಎಸ್. ಸಾಲ್ಯಾನ್, ಕೋಶಾಧಿಕಾರಿ ಸುಜಾತ ಎಸ್. ಶೆಟ್ಟಿ, ಜತೆ ಕಾರ್ಯದರ್ಶಿಗಳಾದ ವೇದಾವತಿ ಅರ್. ಶೆಟ್ಟಿಗಾರ್, ಭಾಗ್ಯಶ್ರೀ ಡಿ ಪದ್ಮಶಾಲಿ ಮತ್ತು ಜತೆ ಕೋಶಾಧಿಕಾರಿಗಳಾದ ಜಾನಕಿ ಅರ್.ಪೂಜಾರಿ, ಪುಷ್ಪ ವಿ. ಶೆಟ್ಟಿಯವರ ಹಾಗೂ ಸದಸ್ಯರ ಸೇವೆಯು ಶ್ಲಾಘನೀಯವಾಗಿದೆ. ಯುವ ವಿಭಾಗದ ಕಾರ್ಯಾಧ್ಯಕ್ಷ ದೀಪಕ್ ಬಂಗೇರ ಮತ್ತು ಅವರ ತಂಡದ ಕ್ರಿಯಾಶೀಲತೆಯು ಎಲ್ಲರಿಗೂ ಮಾದರಿಯಾಗಿದೆ.




