
ಮುಂಬಯಿ: ಕುಲಾಲ ಸಂಘ ಮುಂಬಯಿ ಇದರ ಊರು-ಪರಊರಿನ ದಾನಿಗಳ ನೆರವಿನೊಂದಿಗೆ ಸುಮಾರು 15 ಕೋಟಿ ರೂಪಾಯಿಗೂ ಅಧಿಕ ಮೊತ್ತದಲ್ಲಿ ನಿರ್ಮಾಣಗೊಂಡಿರುವ “ಮಂಗಳೂರು ಮಂಗಳಾದೇವಿ” ಸಮೀಪದ ಕುಲಾಲ ಭವನ ಮಂಗಳೂರು ಇದರ ನಿರ್ಮಾಣವು ಈಗಾಗಲೇ ಸಂಪೂರ್ಣಗೊಂಡಿದೆ. ಇದರ ಉದ್ಘಾಟನಾ ಸಮಾರಂಭವು ಈ ವರ್ಷ ನವೆಂಬರ್ 23 ರವಿವಾರದಂದು ಅದ್ದೂರಿಯಾಗಿ ನಡೆಯಲಿದೆ.
ಈ ಉದ್ಘಾಟನಾ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಅಕ್ಟೋಬರ್ 5 ರಂದು ಅಪರಾಹ್ನ 3 ಗಂಟೆಗೆ ಸಾಂತಾಕ್ರೂಸ್ ಪೂರ್ವದ ಪ್ರಭಾತ್ ಕಾಲೋನಿಯ ಪೇಜಾವರ ಮಠದಲ್ಲಿ ಜರುಗಲಿದೆ. ಈ ಸಮಾರಂಭವು ಕುಲಾಲ ಸಂಘ ಮುಂಬಯಿ ಅಧ್ಯಕ್ಷರಾದ ರಘು ಮೂಲ್ಯ ಪಾದಬೆಟ್ಟು ಇವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಆಮಂತ್ರಣ ಪತ್ರಿಕೆಯನ್ನು ದಕ್ಷಿಣ ಕನ್ನಡದ ಶ್ರೀಧಾಮ ಮಾಣಿಲದ ಶ್ರೀ ಮೋಹನ್ ದಾಸ್ ಪರಮಹಂಸ ಸ್ವಾಮೀಜಿಯವರು ಬಿಡುಗಡೆ ಮಾಡಿ ಆಶೀರ್ವಚನ ನೀಡಲಿದ್ದಾರೆ.
ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಮುಂಬಯಿಯ ಇಸ್ಸಾರ್ ಫೈನಾನ್ಸಿಯಲ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ನ ಸಿ.ಎಂ.ಡಿ. ಡಾ. ಆರ್. ಕೆ. ಶೆಟ್ಟಿ, ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಅಧ್ಯಕ್ಷರಾದ ಮಯೂರ್ ಉಳ್ಳಾಲ್, ನೇರೂಳ್ ಶನಿ ಮಹಾತ್ಮ ಪೂಜಾ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿ. ಕೆ. ಸುವರ್ಣ, ಹಾಗೂ ನಾಸಿಕ್ ನಂದ ಟೆಕ್ಸ್ಟೈಲ್ನ ಮಾಲಕ ರಮಾನಂದ ಬಂಗೇರ ಅವರು ಆಗಮಿಸಲಿದ್ದಾರೆ.
ಸಮಾರಂಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಕುಲಾಲ ಸಂಘ ಮುಂಬಯಿಯ ಸ್ಥಳೀಯ ಸಮಿತಿಗಳಿಂದ ಕುಣಿತ ಭಜನೆ ಮತ್ತು ಜಾದುಗಾರ ಕುಂದರ್ ಅವರಿಂದ ಜಾದು ಪ್ರದರ್ಶನ ನಡೆಯಲಿದೆ.
ಸಮಾಜ ಬಾಂಧವರು ಮತ್ತು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಸಮಾರಂಭವನ್ನು ಯಶಸ್ವಿಗೊಳಿಸಬೇಕೆಂದು ಕುಲಾಲ ಸಂಘ ಮುಂಬಯಿಯ ಗೌರವಾಧ್ಯಕ್ಷ ಪಿ. ದೇವದಾಸ ಎಲ್ ಕುಲಾಲ್, ಉಪಾಧ್ಯಕ್ಷ ಡಿ. ಐ. ಮೂಲ್ಯ, ಗೌರವ ಪ್ರಧಾನ ಕಾರ್ಯದರ್ಶಿ ಕರುಣಾಕರ ಬಿ ಸಾಲ್ಯಾನ್, ಗೌರವ ಕೋಶಾಧಿಕಾರಿ ಜಯ ಎಸ್. ಅಂಚನ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಚಿತಾ ಡಿ. ಬಂಜನ್, ಕಟ್ಟಡ ಸಮಿತಿಯ ಕಾರ್ಯಾಧ್ಯಕ್ಷ ಗಿರೀಶ್ ಬಿ. ಸಾಲ್ಯಾನ್, ಉಪಕಾರ್ಯಾಧ್ಯಕ್ಷ ಸುನಿಲ್ ಆರ್ ಸಾಲ್ಯಾನ್, ಕಾರ್ಯದರ್ಶಿ ಉಮೇಶ್ ಬಂಗೇರ ಹಾಗೂ ಕಾರ್ಯಕಾರಿ ಸಮಿತಿ ಮತ್ತು ಉಪಸಮಿತಿಗಳ ಎಲ್ಲಾ ಸದಸ್ಯರು ಮತ್ತು ಎಲ್ಲ ಸದಸ್ಯರು ವಿನಂತಿಸಿದ್ದಾರೆ.




