
ಅಧ್ಯಕ್ಷ ಗೋಪಾಲಕೃಷ್ಣ ಜಿ.ಗಾಣಿಗ ಹಾಗೂ ಕಾರ್ಯದರ್ಶಿ ಸೀತಾರಾಮ ಶೆಟ್ಟಿ ಅಮಾವಾಸ್ಯೆಬೈಲು ಪುನರಾಯ್ಕೆ.
ಚಿತ್ರ, ವರದಿ: ಉಮೇಶ್ ಕೆ.ಅಂಚನ್
ಮುಂಬಯಿ, ಅ.1: ಶ್ರೀ ನಿತ್ಯಾನಂದ ಸೇವಾ ಸಮಿತಿ ಮೀರಾಭಾಯಂದರ್ ಇದರ ವಾರ್ಷಿಕ ಮಹಾಸಭೆಯು ಸೆ.27ರಂದು ಮೀರಾ ರೋಡ್ ಶಾಂತಿ ನಗರದ ಸೆಕ್ಟರ್ 5 ರಲ್ಲಿರುವ ಬಿಲ್ಲವರ ಅಸೋಸಿಯೇಶನಿನ ಮೀರಾ ರೋಡ್ ಸ್ಥಳೀಯ ಕಚೇರಿಯಲ್ಲಿ ಸಮಿತಿಯ ಅಧ್ಯಕ್ಷರಾದ ಗಂಗೊಳ್ಳಿ ಗೋಪಾಲಕೃಷ್ಣ ಜಿ. ಗಾಣಿಗರ ಅಧ್ಯಕ್ಷತೆಯಲ್ಲಿ ನಡೆಯಿತು.
ಆರಂಭದಲ್ಲಿ ವಸಂತಿ ಶೆಟ್ಟಿ ಮತ್ತು ಜಯಶ್ರೀ ಶೆಟ್ಟಿಯವರ ಪ್ರಾರ್ಥನೆಯೊಂದಿಗೆ ಗುರುದೇವರ ಭಾವಚಿತ್ರಕ್ಕೆ ದೀಪ ಪ್ರಜ್ವಲಿಸಿ ಮಹಾಸಭೆಗೆ ಚಾಲನೆ ನೀಡಲಾಯಿತು.
ಕಾರ್ಯದರ್ಶಿ ಸೀತಾರಾಮ ಶೆಟ್ಟಿ ಅಮಾವಾಸ್ಯೆ ಬೈಲು ವಾರ್ಷಿಕ ವರದಿ ಓದಿದರೆ ಶೈಲೇಶ್ ಶೆಟ್ಟಿ ಸೂಡ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಯಿತು. ಮುಂದಿನ ಅವಧಿಗೆ ಲೆಕ್ಕಪರಿಶೋಧಕರನ್ನಾಗಿ ವಿಶಾಲ್ ಅಸೋಸಿಯೇಟ್ಸ್ ರವರನ್ನು ನೇಮಿಸಲಾಯಿತು.
ಮಹಾಸಭೆಯಲ್ಲಿ ಮುಂದಿನ ಮೂರು ವರ್ಷಕ್ಕೆ ಪ್ರಸ್ತುತ ಕಮಿಟಿಯನ್ನೇ ಮುಂದುವರಿಸಲು ನಿರ್ಧರಿಸಲಾಯಿತು ಹಾಗೂ ಕಾರ್ಯಕಾರಿ ಸಮಿತಿಯಲ್ಲಿ ಕೆಲವೊಂದು ಕಾರಣದಿಂದ ಹಾಜರಾಗಲಾಗದ ಸದಸ್ಯರ ಬದಲಿಗೆ ಹೊಸ ಸದಸ್ಯರನ್ನು ನೇಮಿಸಲಾಯಿತು .
ಪ್ರತೀ ವರ್ಷದಂತೆ ಫೆಬ್ರವರಿ ಮೊದಲ ವಾರದ ಶನಿವಾರದಂದು ನಡೆಯಲಿರುವ ಗಣೇಶ್ ಪುರಿ ಪಾದಯಾತ್ರೆ ಹಾಗೂ ಸಮಿತಿಗೊಂದು ಕಚೇರಿಯನ್ನು ಖರೀದಿಸುವ ಬಗ್ಗೆ ಚರ್ಚೆ ನಡೆದು ಪೂರಕವಾಗಿ ಚಂದ್ರಹಾಸ್ ಕೆ.ಶೆಟ್ಟಿ ಇನ್ನ, ಹರೀಶ್ ರೈ ಕುಂಬ್ಳೆ, ಉದಯ ಎಮ್.ಶೆಟ್ಟಿ ಮಲಾರ್ ಬೀಡು ಹಾಗೂ ಮತ್ತಿತರರು ಸಹಕರಿಸುವ ಸಂಪೂರ್ಣ ಭರವಸೆ ನೀಡಿದರು. ಮುಖ್ಯ ಸಲಹೆಗಾರರಾದ ಗುಣಪಾಲ್ ಉಡುಪಿ, ಸಂಚಾಲಕ ಆನಂದ್ ಶೆಟ್ಟಿ ಕುಕ್ಕುಂದೂರು, ಉಪಾಧ್ಯಕ್ಷರುಗಳಾದ ವಸಂತಿ ಶೆಟ್ಟಿ, ರವೀಂದ್ರ ಶೆಟ್ಟಿ ದೇರಳಕಟ್ಟೆ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಜಯಶ್ರೀ ಶೆಟ್ಟಿ, ಯುವ ವಿಭಾಗದ ರಾಜೇಶ್ ಶೆಟ್ಟಿ ಕಾಪು, ಬುವಾಜಿ ಚಾಮುಂಡೇಶ್ವರಿ ಸನ್ನಿಧಿಯ ಲಕ್ಷ್ಮಣ್ ಶೆಟ್ಟಿ , ಹರ್ಷ ಕುಮಾರ್ ಡಿ.ಶೆಟ್ಟಿ, ಚಂದ್ರಶೇಖರ ಎಸ್.ಶೆಟ್ಟಿ ಮತ್ತಿತರರು ಸಲಹೆ ಸೂಚನೆಗಳನ್ನು ನೀಡಿದರು.
ಅಧ್ಯಕ್ಷ ಗೋಪಾಲಕೃಷ್ಣ ಗಾಣಿಗರು ಮಾತನಾಡಿ ಸಮಿತಿಯ ಪ್ರತೀ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು ಹಾಗೂ ಮುಂದಿಗೂ ಹೆಚ್ಚಿನ ಸಹಕಾರ ನೀಡುವಲ್ಲಿ ವಿನಂತಿಸಿದರು.
ಇತ್ತೀಚೆಗೆ ನಿಧನರಾದ ಸಮಿತಿಯ ಟ್ರಸ್ಟಿಗಳಾದ ಮಹಾಬಲ ಸಮಾನಿ ಹಾಗೂ ಚಿರಂಜೀವಿ ಸುರೇಶ್ ಶೆಟ್ಟಿಯವರ ಆತ್ಮ ಶಾಂತಿಗಾಗಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.ದನ್ಯವಾದದೊಂದಿಗೆ ಮಹಾಸಭೆಯು ಮುಕ್ತಾಯವಾಯಿತು.




