September 6, 2026
Mumbai News Kannada
ಮುಂಬಯಿ

ಕನ್ನಡ ವೆಲ್ಫೇರ್ ಸೊಸೈಟಿ ಘಾಟ್ಕೋಪರ್: ನವರಾತ್ರಿ ಉತ್ಸವದಲ್ಲಿ ಶಾರದಾ ಪೂಜೆಯ ವಿಜೃಂಭಣೆ





ಧಾರ್ಮಿಕ ಪ್ರಜ್ಞೆ ಹೆಚ್ಚಿಸುವ ಕಾರ್ಯ ಶ್ಲಾಘನೀಯ: ಮಹೇಶ್ ಎಸ್. ಶೆಟ್ಟಿ

ಚಿತ್ರ ವರದಿ: ಸುಭಾಷ್ ಶಿರಿಯ

ಘಾಟ್ಕೋಪರ್: ಮುಂಬೈನ ಘಾಟ್ಕೋಪರ್ ಪೂರ್ವದ ಕನ್ನಡ ವೆಲ್ಫೇರ್ ಸೊಸೈಟಿ ಮತ್ತು ಅದರ ಮಹಿಳಾ ವಿಭಾಗದ ವತಿಯಿಂದ ನವರಾತ್ರಿ ಉತ್ಸವದ ಅಂಗವಾಗಿ ಅಕ್ಟೋಬರ್ 30 ರಂದು ಅದ್ದೂರಿಯಾಗಿ ಶಾರದಾ ಪೂಜಾ ಕಾರ್ಯಕ್ರಮ ಜರುಗಿತು. ಸೊಸೈಟಿಯ ಪಂತ್ ನಗರ್‌ನಲ್ಲಿರುವ ಬಾಬಾಸ್ ಗ್ರೂಪ್ ಮಹೇಶ್ ಎಸ್. ಶೆಟ್ಟಿ ಸಭಾಗೃಹದಲ್ಲಿ ನಡೆದ ಈ ಪುಣ್ಯ ಕಾರ್ಯದಲ್ಲಿ ಅಪಾರ ಸಂಖ್ಯೆಯ ತುಳು-ಕನ್ನಡಿಗರು ಪಾಲ್ಗೊಂಡು ಶಾರದಾ ಮಾತೆಯ ಕೃಪೆಗೆ ಪಾತ್ರರಾದರು.

​ಈ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಉದ್ಯಮಿ, ಬಂಟರ ಸಂಘದ ಉಪಾಧ್ಯಕ್ಷ ಹಾಗೂ ಕನ್ನಡ ವೆಲ್ಫೇರ್ ಸೊಸೈಟಿ ವಜ್ರ ಮಹೋತ್ಸವ ಆಚರಣ ಸಮಿತಿಯ ಗೌರವ ಅಧ್ಯಕ್ಷರಾದ ಮಹೇಶ್ ಎಸ್. ಶೆಟ್ಟಿ ಅವರು ಮಾತನಾಡಿ, “ಕನ್ನಡ ವೆಲ್ಫೇರ್ ಸೊಸೈಟಿ ನಮ್ಮ ಸನಾತನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಕ್ರಿಯಾಶೀಲವಾಗಿ ದುಡಿಯುತ್ತಿದೆ. ವಿಶೇಷವಾಗಿ, ಮಹಿಳಾ ವಿಭಾಗವು ನವರಾತ್ರಿಯ ಪ್ರತಿದಿನ ಭಜನಾ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಮಾಜದಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಹೆಚ್ಚಿಸುತ್ತಿರುವುದು ಅತ್ಯಂತ ಅಭಿನಂದನೀಯ ಕಾರ್ಯ. ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರಗಳನ್ನು ಸದಾ ಪ್ರೋತ್ಸಾಹಿಸುತ್ತಾ, ತುಳು-ಕನ್ನಡಿಗರನ್ನು ಒಗ್ಗೂಡಿಸಿ ಸಮಾಜಮುಖಿ ಚಟುವಟಿಕೆಗಳನ್ನು ನಡೆಸಿಕೊಂಡು ಬಂದಿರುವ ಈ ಸಂಸ್ಥೆ ಇದೀಗ ವಜ್ರ ಮಹೋತ್ಸವದ ಸಿದ್ಧತೆಯಲ್ಲಿದೆ. ಈ ಯಶಸ್ವಿ ಪಯಣಕ್ಕೆ ನಾವೆಲ್ಲರೂ ಒಟ್ಟಾಗಿ ಶ್ರಮಿಸಬೇಕಾಗಿದೆ” ಎಂದು ಕರೆ ನೀಡಿದರು.

​ಸೊಸೈಟಿಯ ಮಾಜಿ ಅಧ್ಯಕ್ಷರಾದ ನಾರಾಯಣ ಶೆಟ್ಟಿ ನಂದಳಿಕೆ ಅವರು ಮಾತನಾಡಿ, “ಭಗವಂತನಿಗೆ ಭಜನೆಯು ಅತ್ಯಂತ ಪ್ರಿಯವಾದ ಸಾಧನ. ನಿರಂತರ ಭಜನೆಗಳನ್ನು ಮಾಡುವುದರಿಂದ ನಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ ಮತ್ತು ಮನಸ್ಸಿಗೆ ಶಾಂತಿ ಲಭಿಸುತ್ತದೆ” ಎಂದರು.

​ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕನ್ನಡ ವೆಲ್ಫೇರ್ ಸೊಸೈಟಿಯ ಅಧ್ಯಕ್ಷರಾದ ನವೀನ್ ಶೆಟ್ಟಿ ಇನ್ನ ಬಾಳಿಕೆ ಅವರು ಮಾತನಾಡಿ, “ಮಹಿಳಾ ವಿಭಾಗವು ಕೆಲವು ವರ್ಷಗಳ ಹಿಂದೆ ಭಜನೆಯೊಂದಿಗೆ ಪ್ರಾರಂಭಿಸಿದ ಶಾರದಾ ಪೂಜಾ ಕಾರ್ಯಕ್ರಮವು ಇದೀಗ ವಿಜೃಂಭಣೆಯಿಂದ ನೆರವೇರುತ್ತಿದೆ. ನಮ್ಮ ಮಹಿಳಾ ವಿಭಾಗವು ಸಂಘಟಿತವಾಗಿ ವರ್ಷವಿಡೀ ಯಶಸ್ವಿಯಾಗಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಸಂಸ್ಥೆಯ ಮುಂಬರುವ ವಜ್ರ ಮಹೋತ್ಸವವನ್ನು ಯಶಸ್ವಿಗೊಳಿಸುವಲ್ಲಿ ಮಹಿಳಾ ವಿಭಾಗದ ಪಾತ್ರ ಬಹಳ ದೊಡ್ಡದು. ಈ ಮಹೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ನಡೆಸಲು ನಾವೆಲ್ಲರೂ ಒಗ್ಗಟ್ಟಿನಿಂದ ಶ್ರಮಿಸೋಣ” ಎಂದು ಹೇಳಿದರು.

​ಈ ಶುಭ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾದ ಮಹೇಶ್ ಎಸ್. ಶೆಟ್ಟಿ ಅವರನ್ನು ಅಧ್ಯಕ್ಷ ನವೀನ್ ಶೆಟ್ಟಿ ಇನ್ನ ಬಾಳಿಕೆ ಹಾಗೂ ಪದಾಧಿಕಾರಿಗಳು ಗೌರವಿಸಿದರು. ಅಲ್ಲದೆ, ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಶ್ರೀಮತಿ ಸುಜಲಾ ಅಜಿತ್ ಶೆಟ್ಟಿ ಅವರ ಕಾರ್ಯಕ್ಷಮತೆ ಮತ್ತು ಆಕರ್ಷಕ ಹಾಗೂ ಭವ್ಯವಾದ ಪೂಜಾ ಮಂಟಪವನ್ನು ನಿರ್ಮಿಸಿದ ಅಶೋಕ್ ಕೊಡ್ಯಡ್ಕ ಅವರನ್ನು ಸಂಸ್ಥೆಯ ಪರವಾಗಿ ಸನ್ಮಾನಿಸಲಾಯಿತು.

​ಮಹಿಳಾ ವಿಭಾಗದ ಸದಸ್ಯರಿಂದ ಭಜನಾ ಕಾರ್ಯಕ್ರಮವು ಪ್ರಾರಂಭವಾಯಿತು. ನಂತರ, ಬ್ರಹ್ಮಲಿಂಗೇಶ್ವರಿ ಭಜನಾ ಮಂಡಳಿ ಭಾಂಡುಪ್, ಶ್ರೀ ಶಾಸ್ತ ಭಜನಾ ಮಂಡಳಿ ವಿದ್ಯಾ ವಿಹಾರ್ ಸೇರಿದಂತೆ ವಿವಿಧ ಭಜನಾ ತಂಡಗಳಿಂದ ನಿರಂತರ ಭಜನಾ ಸೇವೆ ನಡೆಯಿತು. ಮಹಾ ಆರತಿಯ ನಂತರ ನೆರೆದಿದ್ದ ಎಲ್ಲ ಭಕ್ತಾದಿಗಳಿಗೆ ಪ್ರಸಾದ ಭೋಜನದ ವ್ಯವಸ್ಥೆ ಮಾಡಲಾಗಿತ್ತು.

​ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಕನ್ನಡ ವೆಲ್ಫೇರ್ ಸೊಸೈಟಿಯ ಗೌರವ ಪ್ರಧಾನ ಕಾರ್ಯದರ್ಶಿ ತಿಮ್ಮ ದೇವಾಡಿಗ, ಗೌರವ ಕೋಶಾಧಿಕಾರಿ ಹರೀಶ್ ಎಂ ಶೆಟ್ಟಿ, ಜೊತೆ ಕಾರ್ಯದರ್ಶಿ ರಮಾನಂದ ಶೆಟ್ಟಿ, ಜೊತೆ ಕೋಶಾಧಿಕಾರಿ ಶಂಕರ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಶ್ರೀಮತಿ ಸುಜಲಾ ಅಜಿತ್ ಶೆಟ್ಟಿ, ಮಹಿಳಾ ವಿಭಾಗ, ಯುವ ವಿಭಾಗದ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ತುಳು-ಕನ್ನಡಿಗರು ಭಾಗವಹಿಸಿ, ತಾಯಿ ಶಾರದಾ ಮಾತೆಯ ಆಶೀರ್ವಾದ ಪಡೆದರು.



Related posts

ಸಾಯಿನಾಥ ಮಿತ್ರ ಮಂಡಳಿಯಿಂದ ಹೊರೆ ಕಾಣಿಕೆ ಮೆರವಣಿಗೆ

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ ರೋಷನ್ ಬಾಲಕೃಷ್ಣ ಮೂಲ್ಯ ಗೆ ಶೇ 84.60 ಅಂಕ.

Mumbai News Desk

ಮಹಾರಾಷ್ಟ್ರ : ಎಸ್ ಎಸ್ ಸಿ ಪರೀಕ್ಷೆಯಲ್ಲಿ ಕಾವ್ಯ ಅಮಿತ್ ಪಾಲನ್ಕರ್ ಗೆ ಶೇ.97.20 ಅಂಕ.

Mumbai News Desk

ಕುಲಾಲ ಸಂಘ ಮುಂಬಯಿ, ಚರ್ಚ್ ಗೇಟ್  – ದಹಿಸರ್ ಸ್ಥಳೀಯ ಮಹಿಳಾ ವಿಭಾಗ. ”ಆಟಿದ ಒಂಜಿ ಪೊರ್ಲು” ಕಾರ್ಯಕ್ರಮ.

Mumbai News Desk

ಎಸ್ ಎಸ್ ಸಿ ಪರೀಕ್ಷೆಯಲ್ಲಿ ಕಾರ್ತಿಕ್ ಜೆ ಪೂಜಾರಿ ಶೇ 97.80 ಅಂಕ.

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ ನಮಿತ್ ಉಮೇಶ್ ಪೂಜಾರಿಗೆ ಶೇ 87.40 ಅಂಕ.

Mumbai News Desk