ಮುಂಬಯಿ/ಕಾರ್ಕಳ:
ಶ್ರೀ ಉಮಾ ಮಹೇಶ್ವರಿ ಭಜನಾ ಮಂಡಳಿ (ಜರಿಮರಿ, ಮುಂಬಯಿ) ಯ ಹಿರಿಯ ಮತ್ತು ಸಕ್ರಿಯ ಸದಸ್ಯರಾಗಿದ್ದ ಶ್ರೀ ಪ್ರವೀಣ್ ಪೂಜಾರಿ (50) ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ಇಂದು, ದಿನಾಂಕ ಅಕ್ಟೋಬರ್ 14, 2025 ರ ಬೆಳಿಗ್ಗೆ 6.00 ಗಂಟೆಗೆ ತಮ್ಮ ಹುಟ್ಟೂರಾದ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಪಳ್ಳಿ ಗ್ರಾಮದಲ್ಲಿ ನಿಧನರಾದರೆಂದು ತಿಳಿಸಲು ಮಂಡಳಿಯು ತೀವ್ರ ದುಃಖ ವ್ಯಕ್ತಪಡಿಸಿದೆ.
ಅವರ ಈ ಹಠಾತ್ ಅಗಲಿಕೆಯು ಮಂಡಳಿಗೆ ತುಂಬಲಾರದ ನಷ್ಟವನ್ನುಂಟು ಮಾಡಿದೆ. ಮುಂಬಯಿಯ ಜರಿಮರಿಯಲ್ಲಿ ಹಲವು ವರ್ಷಗಳ ಕಾಲ ನೆಲೆಸಿದ್ದ ಪ್ರವೀಣ್ ಪೂಜಾರಿ ಅವರು ಇತ್ತೀಚೆಗೆ ಕೆಲವು ವರ್ಷಗಳಿಂದ ಹುಟ್ಟೂರಿನಲ್ಲಿ ವಾಸ್ತವ್ಯವಿದ್ದರು. ಸಂಸ್ಥೆಯ ಕಾರ್ಯಕ್ರಮಗಳು, ಸಾಮಾಜಿಕ ಸೇವೆ ಮತ್ತು ಭಜನಾ ಚಟುವಟಿಕೆಗಳಲ್ಲಿ ಅವರ ಪಾತ್ರ ಮತ್ತು ಕೊಡುಗೆ ಅನನ್ಯವಾಗಿತ್ತು. ಅವರ ನಿಷ್ಠೆ, ಸೇವಾ ಮನೋಭಾವ ಮತ್ತು ಬದ್ಧತೆಯನ್ನು ಮಂಡಳಿಯ ಎಲ್ಲಾ ಸದಸ್ಯರು ಕೃತಜ್ಞತೆಯಿಂದ ಸ್ಮರಿಸಿದ್ದಾರೆ.
ಮೃತರಾದ ಶ್ರೀ ಪ್ರವೀಣ್ ಪೂಜಾರಿ ಅವರು ತಾಯಿ, ಪತ್ನಿ, ಮಗಳು ಹಾಗೂ ಅಪಾರ ಸಂಖ್ಯೆಯ ಬಂಧುಮಿತ್ರರನ್ನು ಅಗಲಿದ್ದಾರೆ.
ದಿವಂಗತರ ಆತ್ಮಕ್ಕೆ ಶಾಂತಿ ಕೋರಿ, ಶ್ರೀ ಉಮಾ ಮಹೇಶ್ವರಿ ಭಜನಾ ಮಂಡಳಿಯ ಭುವಾಜಿ ಶ್ರೀ ರವೀಂದ್ರ ಶಾಂತಿ ಮತ್ತು ಎಲ್ಲಾ ಸದಸ್ಯರು ಮೃತರ ಕುಟುಂಬಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ.
ಮೃತರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಹಾಗೂ ಅವರ ಕುಟುಂಬ ಮತ್ತು ಬಂಧುಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಪರಮಾತ್ಮನು ನೀಡಲಿ ಎಂದು ಮಂಡಳಿಯು ಪ್ರಾರ್ಥಿಸುತ್ತದೆ.




