
ಭವನವು ಸಮಾಜದ ಅಭಿವೃದ್ಧಿ ಕಾರ್ಯಕ್ಕೆ ಪೂರಕವಾಗಲಿದೆ: ದೊಡ್ಡಣ್ಣ ಕುಲಾಲ್
ಪುಣೆ, ನವೆಂಬರ್ 3: ಕುಲಾಲ ಸಂಘ ಮುಂಬಯಿ ವತಿಯಿಂದ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಮಂಗಳಾದೇವಿ ಹತ್ತಿರದ ಕುಲಾಲ ಭವನವು ನವೆಂಬರ್ 23, 2025 ರಂದು ಉದ್ಘಾಟನೆಗೊಳ್ಳಲಿದೆ.
ಈ ಹಿನ್ನೆಲೆಯಲ್ಲಿ, ನವೆಂಬರ್ 29 ರಂದು ಪುಣೆಯ ಕತ್ರಾಜ್, ದತ್ತ ನಗರದಲ್ಲಿರುವ ಹೋಟೆಲ್ ರಾಜ್ವೀರ್ ಬ್ಯಾಂಕ್ವೆಟ್ ಹಾಲ್ನಲ್ಲಿ ಆಹ್ವಾನ ಪತ್ರಿಕೆ ವಿತರಣಾ ಸಮಾರಂಭ ನಡೆಯಿತು.
ಸಮಾರಂಭವು ಸಂಘದ ಗೌರವ ಅಧ್ಯಕ್ಷರಾದ ದೇವದಾಸ್ ಕುಲಾಲ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಘದ ಉಪಾಧ್ಯಕ್ಷರಾದ ಡಿ.ಐ. ಮೂಲ್ಯ, ಬಿಲ್ಡಿಂಗ್ ಕಮಿಟಿ ಕಾರ್ಯಾಧ್ಯಕ್ಷರಾದ ಗಿರೀಶ್ ಸಾಲಿಯಾನ್ ಬಂಟ್ವಾಳ, ಉಪ ಕಾರ್ಯಾಧ್ಯಕ್ಷರಾದ ಸುನಿಲ್ ಸಾಲಿಯಾನ್, ಕಾರ್ಯದರ್ಶಿ ಉಮೇಶ್ ಬಂಗೇರ ಹಾಗೂ ಅಧಿಕಾರಿ ಸಮಿತಿಯ ಸದಸ್ಯರಾದ ರಘು ಆರ್. ಮೂಲ್ಯ (ಗೊರೆಗಾಂವ್), ಸಂಜೀವ ಬಂಗೇರ (ಸಾಯನ್), ದೇವಕಿ ಸುನಿಲ್ ಸಾಲಿಯಾನ್, ಸುಂದರ್ ಮೂಲ್ಯ (ಸಾಯನ್), ಮತ್ತು ರಮೇಶ್ ಬಂಜನ್ ಅವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ, ಅವರು ಕುಲಾಲ ಸುಧಾರಕ ಸಂಘ ಪುಣೆ ಇದರ ಅಧ್ಯಕ್ಷರಾದ ದೊಡ್ಡಣ್ಣ ಕುಲಾಲ್, ಉಪಾಧ್ಯಕ್ಷ ನವೀನ್ ಬಂಟ್ವಾಳ್, ಹಾಗೂ ಮಹಿಳಾ ಉಪಾಧ್ಯಕ್ಷೆಗಳಾದ ಜಯಂತಿ ಮೂಲ್ಯ, ಶೋಭಾ ಪಿ. ಕುಲಾಲ್, ಮತ್ತು ಯಶಸ್ವಿನಿ ಎಂ. ಕುಲಾಲ್ ಅವರಿಗೆ ಆಮಂತ್ರಣ ಪತ್ರಿಕೆ ನೀಡುವ ಮೂಲಕ ವಿತರಣಾ ಕಾರ್ಯವನ್ನು ನೆರವೇರಿಸಿದರು.
ಕುಲಾಲ ಸುಧಾರಕ ಸಂಘ ಪುಣೆ ಇದರ ಅಧ್ಯಕ್ಷರಾದ ದೊಡ್ಡಣ್ಣ ಕುಲಾಲ್ ಮಾತನಾಡಿ, ಈ ಭವನವು ಸಮಾಜದ ಅಭಿವೃದ್ಧಿ ಕಾರ್ಯಕ್ಕೆ ಪೂರಕವಾಗಲಿದೆ ಎಂದರು. ಅಲ್ಲದೆ, ಪುಣೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಕಾರ್ಯಕ್ರಮಕ್ಕೆ ಆಗಮಿಸಲು ಸಿದ್ಧತೆ ನಡೆದಿದೆ ಎಂದು ತಿಳಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ದೇವದಾಸ್ ಕುಲಾಲ್ ಅವರು ಮಾತನಾಡಿ, “ನಮ್ಮ ಕುಲಾಲ ಬಾಂಧವರು ತಾವು ಎಲ್ಲೇ ಇದ್ದರೂ ನಮ್ಮ ಊರಿನ ಸಂಸ್ಕಾರ-ಸಂಸ್ಕೃತಿಯನ್ನು ಬಿಟ್ಟುಕೊಡದೆ, ಜಾತಿ ಬಾಂಧವರೆಲ್ಲ ಒಗ್ಗಟ್ಟಾಗಿ ಇರಲು ಪ್ರೇರೇಪಿಸುವವರು. ಪುಣೆಯಿಂದ ದೊಡ್ಡ ದೊಡ್ಡ ದಾನಿಗಳಿಂದ ಭವನ ನಿರ್ಮಾಣಕ್ಕೆ ನೆರವು ದೊರೆತಿದೆ. ನಮ್ಮ ದಾನಿಗಳು ನಮ್ಮವರೇ ಆಗಿದ್ದಾರೆ. ಇನ್ನೂ ಸಹ ನಿಮ್ಮವರಿಂದ ಸಹಾಯ ಸಿಗಬಹುದು. ನವೆಂಬರ್ 23 ರಂದು ನಡೆಯಲಿರುವ ಭವನದ ಕಾರ್ಯಕ್ರಮಕ್ಕೆ ನೀವೆಲ್ಲರೂ ಬಂದು ಒಗ್ಗಟ್ಟು ಮತ್ತು ಒಮ್ಮತವನ್ನು ತೋರಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು” ಎಂದು ವಿನಂತಿಸಿದರು.
ಗಿರೀಶ್ ಬಿ. ಸಾಲಿಯಾನ್ ಅವರು ಮಾತನಾಡಿ, “ನಾವು ಆರ್ಥಿಕವಾಗಿ ಅತ್ಯಂತ ಹಿಂದುಳಿದಿದ್ದರೂ, ನಕ್ಷತ್ರದಂತೆ ಮಿನುಗುವ ಇಂತಹ ಭವ್ಯ ಭವನವನ್ನು ನಿರ್ಮಿಸಲು ಬಹಳ ಕಷ್ಟವಾಯಿತು. ಆದರೂ ನಮ್ಮ ಧನ ಬಲ ಮತ್ತು ಜನ ಬಲದಿಂದಾಗಿ ಇದು ಸಾಧ್ಯವಾಗಿದೆ. ದೇಶದ ಮೂಲೆ ಮೂಲೆಯಲ್ಲಿರುವ ಬಾಂಧವರ ಮತ್ತು ದಾನಿಗಳ ಸಹಾಯದಿಂದ ಬಹು ವೆಚ್ಚದ ಈ ಭವನ ಲೋಕಾರ್ಪಣೆಯ ಅಂಚಿನಲ್ಲಿದೆ. ಇದು ದೇವರ ದಯೆ ಮತ್ತು ನಿಮ್ಮೆಲ್ಲರ ಸಹಕಾರದಿಂದ ನಮಗೆ ನೋಡುವ ಭಾಗ್ಯ ಸಿಕ್ಕಿದೆ. ಇಂತಹ ಅವಕಾಶ ಯಾವಾಗಲೂ ಸಿಗುವುದಿಲ್ಲ. ಇದರ ಪ್ರಯೋಜನವನ್ನು ನೀವೆಲ್ಲರೂ ಪಡೆದು, ಆದಷ್ಟು ಪುಣೆ ಪರಿಸರದ ಜನರು ಹಾಜರಿದ್ದು ನಿಮ್ಮ ಇರುವಿಕೆಯನ್ನು ತೋರಿಸಬೇಕು” ಎಂದು ಮನವಿ ಮಾಡಿದರು.
ದಾನಿಗಳಾದ ಸುನಿಲ್ ಸಾಲಿಯಾನ್ ಅವರು ಮಾತನಾಡಿ, “ಸಂಘದ ಕೆಲಸ ಹಾಗೂ ಸಂಘಕ್ಕಾಗಿ ನೀಡಿದ ಠೇವಣಿ ಹಣ, ದಾನ ರೂಪದಲ್ಲಿ ಕೊಟ್ಟ ಸಹಕಾರ- ನಿಮ್ಮೆಲ್ಲರ ದೇಣಿಗೆ ಎಂದೂ ವ್ಯರ್ಥವಾಗುವುದಿಲ್ಲ. ಅದು ನಮ್ಮ ಬಾಂಧವರ ಆರೋಗ್ಯ, ಶೈಕ್ಷಣಿಕ ನೆರವು, ಅವಶ್ಯಕತೆ ಇರುವವರಿಗೆ ಮದುವೆ ಸಹಾಯದಂತಹ ಒಳ್ಳೆಯ ಕಾರ್ಯಗಳಿಗೆ ಉಪಯೋಗವಾಗಲಿದೆ. ಮುಂಬಯಿ ಸಂಘವು ಉತ್ತಮ ಕೆಲಸ ಮಾಡುತ್ತಾ ಬಂದಿದೆ. ನಿಮ್ಮೆಲ್ಲರ ಹಾಗೂ ಪುಣೆಯ ಉದ್ಯಮಿಗಳ ಸಹಕಾರ ನಿರಂತರ ಎಲ್ಲರಿಗೂ ಸಿಗುತ್ತಿದೆ. ನೀವೆಲ್ಲರೂ ಆಗಮಿಸಿ ಅಲ್ಲಿಯ ಕಾರ್ಯಕ್ರಮದ ವೈಭವವನ್ನು ನೋಡಬೇಕು” ಎಂದು ವಿನಂತಿಸಿದರು.
ಕಾರ್ಯಕ್ರಮದ ನಿರೂಪಣೆ ಮತ್ತು ಗೌರವಾರ್ಪಣೆಯನ್ನು ದಿನೇಶ್ ಕುಲಾಲ್ ಅವರು ನೆರವೇರಿಸಿದರು.
ಈ ಸಂದರ್ಭದಲ್ಲಿ ದಾನಿಗಳನ್ನು ಹಾಗೂ ಪಿಂಪ್ರಿ ಚಿಂಚವಾಡ ಕುಲಾಲ ಸಂಘದ ಅಧ್ಯಕ್ಷರಾದ ರವಿ ಮೂಲ್ಯ ಮತ್ತು ಕಮಿಟಿ ಸದಸ್ಯರಾದ ಉಮೇಶ್ ಮೂಲ್ಯ ಇವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ಸಂಘದ ಕೋಶಾಧಿಕಾರಿ ಮಹೇಶ್ ಕುಲಾಲ್, ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಚೇರ್ಮನ್ ಮನೋಜ್ ಸಾಲಿಯಾನ್, ಮತ್ತು ಸದಾಶಿವ ಮೂಲ್ಯ ಅವರು ಕಾರ್ಯಕ್ರಮಕ್ಕೆ ಸಹಕರಿಸಿದರು.
ಅಂತಿಮವಾಗಿ, ಉಪಾಧ್ಯಕ್ಷೆ ಜಯಂತಿ ಮೂಲ್ಯ ಅವರು ವಂದನಾರ್ಪಣೆ ಮಾಡಿದರು.




