
ಮುಂಬಯಿ, ನವೆಂಬರ್ 18:
ಮಹಾರಾಷ್ಟ್ರ ಸರ್ಕಾರದ ಉನ್ನತ ಶಿಕ್ಷಣ ಸಚಿವರೂ ಮತ್ತು ಮಹಾರಾಷ್ಟ್ರ ಬಿಜೆಪಿ ಘಟಕದ ಮಾಜಿ ರಾಜ್ಯಾಧ್ಯಕ್ಷರೂ ಆಗಿರುವ ಶ್ರೀ ಚಂದ್ರಕಾಂತ್ ಪಾಟೀಲ್ ಅವರು ಸಾಂತಾಕ್ರೂಜ್ ಪೂರ್ವದಲ್ಲಿರುವ ಪ್ರಭಾತ್ ಕಾಲನಿಯ ಶ್ರೀ ಪೇಜಾವರ ಮಠಕ್ಕೆ ಭೇಟಿ ನೀಡಿದರು.
ಸಚಿವರು ಮೊದಲು ಮಠದ ಶಿಲಾಮಯ ಮಂದಿರದಲ್ಲಿ ಪ್ರತಿಷ್ಠಾಪಿಸಲಾಗಿರುವ ಶ್ರೀಕೃಷ್ಣನ ಸನ್ನಿಧಾನದಲ್ಲಿ ದೇವರ ದರ್ಶನ ಪಡೆದರು. ಬಳಿಕ, ಮಠದ ಕಚೇರಿಯಲ್ಲಿ ವ್ಯವಸ್ಥಾಪಕರೊಂದಿಗೆ ಮಾತುಕತೆ ನಡೆಸಿದರು. ಈ ವೇಳೆ, ಅವರು ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಾಧೀಶರಾಗಿದ್ದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರನ್ನು ಸ್ಮರಿಸಿದರು ಹಾಗೂ ಹಾಲಿ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರ ಸೇವಾ ಕಾರ್ಯಗಳನ್ನು ಶ್ಲಾಘಿಸಿದರು.
ಸಚಿವರ ಭೇಟಿ ಸಂದರ್ಭದಲ್ಲಿ ಸ್ಥಾನೀಯ ಶಾಸಕರಾದ ನ್ಯಾಯವಾದಿ ಶ್ರೀ ಪರಾಗ್ ಆಳ್ವಣಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಧುರೀಣರಾದ ಶ್ರೀ ಮಹೇಂದ್ರ ಸೋನಿ ಮತ್ತು ಶ್ರೀ ಕೆ. ಸಾವಂತ್ ಉಪಸ್ಥಿತರಿದ್ದರು.
ಶ್ರೀ ಪೇಜಾವರ ಮಠದ ಪ್ರಧಾನ ವ್ಯವಸ್ಥಾಪಕರಾದ ಶ್ರೀ ರಾಮದಾಸ ಉಪಾಧ್ಯಾಯ ರೆಂಜಾಳ ಅವರು ಸಚಿವರಿಗೆ ಶ್ರೀದೇವರ ಪ್ರಸಾದವನ್ನು ನೀಡಿ ಗೌರವಿಸಿದರು.
ಮಠದ ವ್ಯವಸ್ಥಾಪಕರಾದ ವಿದ್ವಾನ್ ಶ್ರೀ ಹರಿ ಭಟ್, ಶ್ರೀ ನಿರಂಜನ್ ಗೋಗೈ, ಅರ್ಚಕರು ಮತ್ತು ಮಠದ ಪುರೋಹಿತ ವರ್ಗದವರು ಸಚಿವರನ್ನು ಬರಮಾಡಿಕೊಂಡರು.




