ಶ್ರೀ ನಿತ್ಯಾನಂದ ಯೋಗಾಶ್ರಮ, ಕೊಂಡೆವೂರು ಮಠದ **’ಧಾನ್ಯಲಕ್ಷ್ಮೀ ಕೃಷಿ ಯೋಜನೆ’**ಯಡಿಯಲ್ಲಿ ಸಾವಯವ ಪದ್ಧತಿಯಲ್ಲಿ ಬೆಳೆದ ಭತ್ತವನ್ನು ಕೊಯ್ಲು ಮಾಡುವ ವಾರ್ಷಿಕ “ಕೊಯ್ಲು ಉತ್ಸವವು” ದಿನಾಂಕ 16.11.2025ರಂದು ಪರಮಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ನಡೆಯಿತು.
ವೇದಿಕೆಯಲ್ಲಿ ಹಿರಿಯ ಕೃಷಿಕರಾದ ಶ್ರೀಮತಿ ಕಮಲಾ ಹೇರೂರು, ಮಂಗಳೂರಿನ ಮಡಿಲು ಸೇವಾ ತಂಡದ ಅಧ್ಯಕ್ಷರಾದ ಶ್ರೀ ಗಜೇಂದ್ರ ಪೂಜಾರಿ, ಮೀಂಜ ಪಂಚಾಯತ್ನ ಮಜೀರ್ಪಳ್ಳ ವಾರ್ಡಿನ ಸದಸ್ಯರೂ ಹಾಗೂ ಕ್ಷೇಮ ಕಾರ್ಯಸ್ಥಾಯಿ ಸಮಿತಿಯ ಅಧ್ಯಕ್ಷರೂ ಆದ ಶ್ರೀ ಬಾಬು ಕುಳೂರು, ಮತ್ತು ಚೆರುಗೋಳಿಯ ಹಿರಿಯ ಕೃಷಿಕರಾದ ಶ್ರೀ ಬಾಲಕೃಷ್ಣ ಪಡ್ಪು ಅವರು ಉಪಸ್ಥಿತರಿದ್ದರು.
ಪರಮಪೂಜ್ಯ ಸ್ವಾಮೀಜಿಯವರು ದೀಪ ಪ್ರಜ್ವಲನೆಯ ಮೂಲಕ ಸಾಂಪ್ರದಾಯಿಕವಾಗಿ ಕೊಯ್ಲು ಉತ್ಸವಕ್ಕೆ ಚಾಲನೆ ನೀಡಿದರು. ಬಳಿಕ ತಮ್ಮ ಆಶೀರ್ವಚನದಲ್ಲಿ, “ವಿಷಮುಕ್ತ ಆಹಾರವನ್ನು ನಾವೆಲ್ಲರೂ ಬಳಸಲು ಸಾವಯವ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡು, ನಮ್ಮ ಅಡುಗೆ ಕೋಣೆಯನ್ನು ಔಷಧಾಲಯವಾಗಿಸಿ ಭಾರತವನ್ನು ಶ್ರೀಮಂತಗೊಳಿಸೋಣ” ಎಂದು ಕರೆ ನೀಡಿದರು.
ಸದ್ಗುರು ಶ್ರೀ ನಿತ್ಯಾನಂದ ವಿದ್ಯಾಪೀಠದ ವಿದ್ಯಾರ್ಥಿನಿಯರಾದ ಶ್ಲಾಘ್ಯ, ಸಮೃತ, ಯಶಿತಾ ಅವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದ ನಿರೂಪಣೆಯನ್ನು ಆಶ್ರಮದ ಕಾರ್ಯಕರ್ತರಾದ ಶ್ರೀ ಸದಾಶಿವ ಮೋಂತಿಮಾರ್ ಅವರು ಮಾಡಿ, ಸ್ವಾಗತಿಸಿ ವಂದಿಸಿದರು.
ನಂತರ, ಪರಮಪೂಜ್ಯ ಸ್ವಾಮೀಜಿಯವರೊಂದಿಗೆ ಸೇರಿದ ಸಮಸ್ತ ಭಕ್ತಾದಿಗಳು ಮೆರವಣಿಗೆಯಲ್ಲಿ ಗದ್ದೆಗೆ ಹೋಗಿ ಭತ್ತ ಕಟಾವು ಮಾಡಿದರು.




