31 C
Mumbai
June 8, 2026
Mumbai News Kannada
ಸುದ್ದಿ

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ: ವಿಶ್ವನಾಥ ಯು. ಮಾಡಾ ನಿಧನಕ್ಕೆ ನುಡಿ ನಮನ





ಮೇರು ವ್ಯಕ್ತಿತ್ವದ ಶಿಸ್ತಿನ ಸಿಪಾಯಿ – ತೋನ್ಸೆ ಜಯಕೃಷ್ಣ ಎ. ಶೆಟ್ಟಿ

ಚಿತ್ರ ವರದಿ: ದಿನೇಶ್ ಕುಲಾಲ್, ಮುಂಬಯಿ.

​ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಮೂರನೆಯ ಅಧ್ಯಕ್ಷರಾಗಿದ್ದ ವಿಶ್ವನಾಥ ಯು. ಮಾಡಾ ಅವರ ನಿಧನಕ್ಕೆ ಸಮಿತಿಯ ವತಿಯಿಂದ ನುಡಿ ನಮನ ಸಲ್ಲಿಸಲಾಯಿತು.

​ನವೆಂಬರ್ 1ರಂದು (ನ1) ಸಾಂತಾಕ್ರೂಜ್ ಪೂರ್ವದ ಪೇಜ್‌ ವರ ಮಠದಲ್ಲಿ ದಕ್ಷಿಣ ಕನ್ನಡ ಜಿಲ್ಲೆಗಳ ಸರ್ವತೋಮುಖ ಅಭಿವೃದ್ಧಿಯ ಬಗ್ಗೆ ಯಶಸ್ವಿಯಾಗಿ ಹೋರಾಟ ನಡೆಸುತ್ತಿರುವ ಏಕೈಕ ಸರ್ಕಾರೇತರ ಸಂಘಟನೆ, ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಮಾಜಿ ಅಧ್ಯಕ್ಷ ವಿಶ್ವನಾಥ ಯು. ಮಾಡಾ ಅವರ ಸಂತಾಪ ಸಭೆಯಲ್ಲಿ ಗಣ್ಯರು ಮಾತನಾಡಿದರು.

  • ತೋನ್ಸೆ ಜಯಕೃಷ್ಣ ಎ. ಶೆಟ್ಟಿ (ಸಮಿತಿಯ ಸಂಸ್ಥಾಪಕರು): ಮಾಡಾ ಅವರ ಶಿಸ್ತಿನ ಜೀವನ ಪದ್ಧತಿ, ಕಠಿಣ ಪರಿಶ್ರಮ ಮತ್ತು ಅವರ ವ್ಯಕ್ತಿತ್ವವು ತಮ್ಮ ಸಾಧನೆಗೆ ಪ್ರೇರಣೆ ನೀಡಿದೆ. ಅವರಿಂದ ನಾವು ಬಹಳಷ್ಟು ಶಿಸ್ತಿನ ಅನುಭವ ಪಡೆದಿದ್ದೇವೆ. ಸಮಿತಿಗೆ ಅವರು ಮಾಡಿದ ಸೇವೆ ಪ್ರಯೋಜನಕಾರಿಯಾಗಿದೆ. ಅವರು ನಡೆದು ಬಂದ ದಾರಿ ಇತರರಿಗೂ ಮಾರ್ಗದರ್ಶನವಾಗಲಿ, ಹಾಗೂ ಸಮಿತಿಯಲ್ಲಿ ಅವರ ಹೆಸರು ಸದಾಕಾಲ ಉಳಿಯುವಂತಾಗಲಿ. ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ದೇವರು ಅವರ ಕುಟುಂಬಕ್ಕೆ ಕರುಣಿಸಲಿ ಎಂದು ನುಡಿದರು. “ವಿಶ್ವನಾಥ ಯು. ಮಾಡಾ ಅವರೊಂದಿಗೆ ದೀರ್ಘಕಾಲದ ಗೆಳೆತನ ನಮ್ಮದಾಗಿತ್ತು. ಅವರು ಸೇವೆ ಮಾಡುತ್ತಿದ್ದ ಎಲ್ಲಾ ಸಂಘಟನೆಗಳಲ್ಲಿ ಶಿಸ್ತನ್ನು ಪಾಲಿಸಿಕೊಂಡು ಬರುತ್ತಿದ್ದರು. ಅವರ ಸೇವಾ ಕಾರ್ಯ ನಮ್ಮ ಸಮಿತಿಗೆ ಆದರ್ಶವಾಗಿದೆ,” ಎಂದರು.
  • ಧರ್ಮಪಾಲ ಯು. ದೇವಾಡಿಗ (ಸಮಿತಿಯ ಮಾಜಿ ಅಧ್ಯಕ್ಷರು): ದಿವಂಗತರಿಗೆ ಶ್ರದ್ಧಾಂಜಲಿ ಅರ್ಪಿಸುತ್ತಾ, “ಶಿಸ್ತಿನ ಸಿಪಾಯಿ ವಿಶ್ವನಾಥ ಯು. ಮಾಡಾ ಅವರು ಯಾವುದೇ ಸಭೆ-ಸಮಾರಂಭವನ್ನು ಯಾರಿಗೂ ಕಾಯಿಸದೆ ಸಮಯಕ್ಕೆ ಸರಿಯಾಗಿ ಪ್ರಾರಂಭಿಸುವ ಪದ್ಧತಿಯನ್ನು ಹೊಂದಿದ್ದರು. ಅವರದ್ದು ವಿಶೇಷ ವ್ಯಕ್ತಿತ್ವ. ಅವರು ಅಧ್ಯಕ್ಷರಾಗಿದ್ದ ಸಮಯದಲ್ಲಿ ನಮ್ಮ ಜಿಲ್ಲೆಗಳಿಗಾಗಿ ಸಮಿತಿಯ ಮೂಲಕ ಅವರು ಮಾಡಿದ ಕೆಲಸ ಎಂದಿಗೂ ಮರೆಯುವಂತಿಲ್ಲ,” ಎಂದು ಸ್ಮರಿಸಿದರು.
  • ಮುಂಡ್ಕೂರು ಸುರೇಂದ್ರ ಸಾಲ್ಯಾನ್ (ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ): “ವಿಶ್ವನಾಥ ಯು. ಮಾಡಾ ಅವರು ಇಂದು ನಮ್ಮೊಂದಿಗಿಲ್ಲದಿದ್ದರೂ, ಸಮಿತಿಯಲ್ಲಿ ಅವರು ಮಾಡಿದ ಕಾರ್ಯ ಸದಾ ನೆನಪಿನಲ್ಲಿ ಉಳಿಯುವಂತಾಗಿದೆ,” ಎಂದು ಅವರ ಸೇವಾ ಕಾರ್ಯವನ್ನು ಶ್ಲಾಘಿಸುತ್ತಾ ನುಡಿ ನಮನ ಸಲ್ಲಿಸಿದರು.
  • ನಿತ್ಯಾನಂದ ಡಿ. ಕೋಟ್ಯಾನ್ (ಸಮಿತಿಯ ಅಧ್ಯಕ್ಷರು): ಮಾಡಾ ಅವರಿಗೆ ನುಡಿ ನಮನ ಸಲ್ಲಿಸುತ್ತಾ, ಅವರ ಅಧ್ಯಕ್ಷೀಯ ಅವಧಿಯಲ್ಲಿ ಹಲವಾರು ಯಶಸ್ವೀ ಕಾರ್ಯಕ್ರಮಗಳು ನಡೆದವು. ಅವರು ಸಮಯದ ಇತಿಮಿತಿಯನ್ನು ಅರಿತು ಶಿಸ್ತಿನಿಂದ ಕಾರ್ಯನಿರ್ವಹಿಸುತ್ತಿದ್ದರು. ಅವರೊಂದಿಗೆ ಸಮಿತಿಯಲ್ಲಿ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುವ ಸೌಭಾಗ್ಯ ತಮಗೂ ದೊರಕಿದ್ದು, ಅವರ ಆತ್ಮಕ್ಕೆ ದೇವರು ಶಾಂತಿ ಕರುಣಿಸಲಿ ಎಂದರು.

​ಸಮಿತಿಯ ಉಪಾಧ್ಯಕ್ಷರಾದ ಸಿ. ಎ. ಐ. ಆರ್. ಶೆಟ್ಟಿ, ದೇವಾಡಿಗ ಸಂಘದ ಅಧ್ಯಕ್ಷ ರವಿ ದೇವಾಡಿಗ, ಬಂಟರ ಸಂಘ ಮುಂಬಯಿಯ ಗೌರವ ಪ್ರಧಾನ ಕಾರ್ಯದರ್ಶಿ ಡಾ. ಆರ್. ಕೆ. ಶೆಟ್ಟಿ, ಭಂಡಾರಿ ಸೇವಾ ಸಂಘದ ಮಾಜಿ ಅಧ್ಯಕ್ಷ ನ್ಯಾ. ಆರ್. ಎಂ. ಭಂಡಾರಿ, ಶ್ರೀ ಶನಿ ಮಹಾತ್ಮಾ ಪೂಜಾ ಸಮಿತಿ ಖಾರ್ ಇದರ ಗೌರವ ಅಧ್ಯಕ್ಷ ಶಂಕರ ಸುವರ್ಣ, ಡಾ. ಸುರೇಂದ್ರ ಕುಮಾರ್ ಹೆಗ್ಡೆ, ನ್ಯಾ. ಸಂತೋಷ್ ಹೆಗ್ಡೆ, ಕುಲಾಲ ಸಂಘದ ಗೌರವ ಅಧ್ಯಕ್ಷ ದೇವದಾಸ ಕುಲಾಲ್, ಲೋಕನಾಥ್ ಪೂಜಾರಿ, ಡಾ. ತುಕಾರಾಮ ಶೆಟ್ಟಿ ವಿಶ್ವನಾಥ್ ಮಾಡಾ ಅವರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸಿ, ಅವರೊಂದಿಗಿನ ನೆನಪುಗಳನ್ನು ಸ್ಮರಿಸಿದರು.

​ಸಭೆಯಲ್ಲಿ ಜ್ಯೋತಿ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷ ಗಿರೀಶ್ ಸಾಲ್ಯಾನ್, ನ್ಯಾ. ಗುಣಾಕರ ಶೆಟ್ಟಿ, ಗೌರವ ಕಾರ್ಯದರ್ಶಿ ಹ್ಯಾರಿ ಸಿಕ್ವೇರಾ, ಜೊತೆ ಕೋಶಾಧಿಕಾರಿಗಳಾದ ತೋನ್ಸೆ ಸಂಜೀವ ಪೂಜಾರಿ, ರಾಕೇಶ್ ಭಂಡಾರಿ ಮೊದಲಾದವರು ಉಪಸ್ಥಿತರಿದ್ದು, ಸಮಿತಿಯ ಮಾಜಿ ಅಧ್ಯಕ್ಷ ವಿಶ್ವನಾಥ ಯು. ಮಾಡಾ ಅವರ ನಿಧನಕ್ಕೆ ಪುಷ್ಪ ನಮನ ಸಲ್ಲಿಸಿದರು.



Related posts

ಜಯಪ್ರಕಾಶ್ ಪೂಜಾರಿ, ಮುಂಬೈ ಅವರಿಗೆ ತುಳುವರ್ಲ್ಡ್ ಸಮ್ಮಾನ್

Mumbai News Desk

ಅನಿತಾ ಪಿ.ತಾಕೊಡೆಯವರ ಕಥಾ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೆ.ವಾಸುದೇವಾಚಾರ್ಯ ದತ್ತಿ ಪುರಸ್ಕಾರ

Mumbai News Desk

ಆರ್ಯಭಟ ಪುರಸ್ಕೃತ ಕೆ.ಕೆ. ಶೆಟ್ಟರಿಗೆ ಹುಟ್ಟೂರ ಅಭಿನಂದನೆ

Mumbai News Desk

ಶ್ರೀ ಸ್ವಾಮಿ ನಿತ್ಯಾನಂದ ಚಾರಿಟೇಬಲ್ ಟ್ರಸ್ಟ್, ಕಲ್ಯಾಣ್ ವತಿಯಿಂದ ಗಣೇಶಪುರಿಯಲ್ಲಿ  ಭಂಡಾರ ಸೇವೆ ಸಂಪನ್ನ

Mumbai News Desk

ಮಾರಣಕಟ್ಟೆ ಮೇಳದ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ‘ ರಾಮಾಂಜನೇಯ.. ಕನಕಾಂಗಿ ಕಲ್ಯಾಣ’ ಯಕ್ಷಗಾನ ಪ್ರದರ್ಶನ

Mumbai News Desk

ಜಾಗತಿಕ, ರಾಷ್ಟ್ರೀಯ, ರಾಜ್ಯ ಮತ್ತು ಮುಂಬೈ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಇಂದಿನ (31/05/26)ಪ್ರಮುಖ ವಿದ್ಯಮಾನಗಳ ಸಂಕ್ಷಿಪ್ತ ಸುದ್ದಿ ಸಂಕಲನ

Mumbai News Desk