
ಕುಲಾಲ ಭವನವು ಸಮಾಜದ ಒಗ್ಗಟ್ಟಿನ ಪ್ರತೀಕ: ಕಮಲಾದೇವಿ ಪ್ರಸಾದ ಆಸ್ರಣ್ಣ
ಚಿತ್ರ ವರದಿ: ದಿನೇಶ್ ಕುಲಾಲ್
ಮಂಗಳಾದೇವಿ (ಮಂಗಳೂರು), ಡಿ. 3: “ನಾವು ನಮ್ಮತನವನ್ನು ಮರೆತು ಸಮಾಜದ ಉನ್ನತಿಗೆ ಶ್ರಮಿಸಿದರೆ ಮಾತ್ರ ಸಮಾಜವು ಉನ್ನತ ಮಟ್ಟಕ್ಕೆ ಬೆಳೆಯಲು ಸಾಧ್ಯ. ಕುಲಾಲ್, ಮೂಲ್ಯ, ಕುಂಬಾರ ಹೆಸರುಗಳು ಹಲವು ಆಂತರಿಕ ಅರ್ಥಗಳನ್ನೊಳಗೊಂಡಿವೆ. ಕುಲಾಲ ಸಮಾಜವು ಸಾಂಘಿಕವಾಗಿ, ಅದರ ತತ್ವ-ಧೈಯಗಳಿಗೆ ಅನುಗುಣವಾಗಿ ಒಗ್ಗಟ್ಟಿನಿಂದ ನೂತನ ಭವನವನ್ನು ನಿರ್ಮಿಸಿರುವುದು ಶ್ಲಾಘನೀಯ ಕಾರ್ಯ” ಎಂದು ಶ್ರೀ ಕ್ಷೇತ್ರ ಕಟೀಲಿನ ಪ್ರಧಾನ ಅರ್ಚಕ ಕಮಲಾದೇವಿ ಪ್ರಸಾದ ಆಸ್ರಣ್ಣ ಹೇಳಿದರು.
ಮಂಗಳಾದೇವಿ ಸಮೀಪದಲ್ಲಿ ನೂತನವಾಗಿ ಉದ್ಘಾಟನೆಗೊಂಡ ಮುಂಬಯಿ ಕುಲಾಲ ಸಂಘದ ಕುಲಾಲ ಭವನದಲ್ಲಿ ನಡೆದ ಮುಂಬಯಿ ಕುಲಾಲರ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಂಟರ ಸಂಘ ಮುಂಬಯಿಯ ಕೋಶಾಧಿಕಾರಿ ಹಾಗೂ ನಾಲಸೋಪಾರ ತುಳು ಕೂಟ ಫೌಂಡೇಶನ್ನ ಅಧ್ಯಕ್ಷ ಶಶಿಧರ್ ಶೆಟ್ಟಿ ಇನ್ನಂಜೆ ಮಾತನಾಡಿ, ಮುಂಬಯಿ ಕುಲಾಲ ಸಂಘವು ಎಲ್ಲರನ್ನು ಒಗ್ಗೂಡಿಸಿ ಉನ್ನತ ಮಟ್ಟಕ್ಕೆ ಬೆಳೆಯುತ್ತಿರುವುದು ಅಭಿನಂದನೀಯ. ಈ ಭವನವು ಕುಲಾಲರ ಒಗ್ಗಟ್ಟಿಗೆ ಸಾಕ್ಷಿಯಾಗಿದೆ ಎಂದು ಬಣ್ಣಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಅಧ್ಯಕ್ಷರಾದ ಮಯೂರ್ ಉಳ್ಳಾಲ್ ಅವರು ಮುಂಬಯಿ ಕುಲಾಲ ಸಂಘದ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿ, ಮುಂಬಯಿ ಮತ್ತು ಮಂಗಳೂರಿನ ಕುಲಾಲರ ಸಂಬಂಧವು ಭವನ ನಿರ್ಮಾಣದ ಮೂಲಕ ಮತ್ತಷ್ಟು ಬಲಿಷ್ಠವಾಗಿದೆ. ಈ ಭವನವು ನಮ್ಮೆಲ್ಲರ ಒಗ್ಗಟ್ಟಿನ ಸಂಕೇತವಾಗಿದೆ ಹಾಗೂ ಈ ಕಾರ್ಯ ಯೋಜನೆಗೆ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಿರುವುದಾಗಿ ನುಡಿದರು.
ಕುಲಾಲ ಸಂಘ ಮುಂಬಯಿಯ ಅಧ್ಯಕ್ಷ ರಘು ಮೂಲ್ಯ ಅಧ್ಯಕ್ಷತೆ ವಹಿಸಿದ್ದರು. ಭವನ ನಿರ್ಮಾಣಕ್ಕಾಗಿ ವಿವಿಧ ನೆಲೆಯಲ್ಲಿ ಸೇವೆ ಹಾಗೂ ದಾನ ನೀಡಿದ ಗಣ್ಯರನ್ನು ಈ ಸಂದರ್ಭದಲ್ಲಿ ಸಮ್ಮಾನಿಸಲಾಯಿತು. ಇದೇ ವೇಳೆ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಪರವಾಗಿ ಅಧ್ಯಕ್ಷರಾದ ಮಯೂರ್ ಉಳ್ಳಾಲ್ ಅವರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಕುಲಾಲ ಸಂಘ ಮುಂಬಯಿಯ ಗೌರವಾಧ್ಯಕ್ಷ ಪಿದೇವದಾಸ್ ಎಲ್. ಕುಲಾಲ್, ಕಟ್ಟಡ ಸಮಿತಿ ಕಾರ್ಯಾಧ್ಯಕ್ಷ ಗಿರೀಶ್ ಬಿ. ಸಾಲ್ಯಾನ್, ಉಪಕಾರ್ಯಾಧ್ಯಕ್ಷ ಸುನಿಲ್ ಆರ್. ಸಾಲ್ಯಾನ್, ಮುಂಬಯಿ ಕುಲಾಲ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ಸುಚಿತಾ ಡಿ. ಬಂಜನ್ ಅಭಿನಂದನ ನುಡಿಗಳನ್ನಾಡಿದರು.
ವೇದಿಕೆಯಲ್ಲಿ ಸಂಘದ ಪದಾಧಿಕಾರಿಗಳು, ಉಪ ಸಮಿತಿಗಳ ಪದಾಧಿಕಾರಿಗಳು, ಸಂಘದ ಆರು ಸ್ಥಳೀಯ ಸಮಿತಿಗಳ ಪದಾಧಿಕಾರಿಗಳು ಹಾಗೂ ‘ಅಮೂಲ್ಯ’ ಸಂಪಾದಕೀಯ ಮಂಡಳಿಯವರು ಉಪಸ್ಥಿತರಿದ್ದರು. ಮಕ್ಕಳು ಮತ್ತು ಹಿರಿಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಕಟ್ಟಡ ಉದ್ಘಾಟನ ಸಮಿತಿ ಅಧ್ಯಕ್ಷ ಬಿ. ದಿನೇಶ್ ಕುಲಾಲ್ ಸ್ವಾಗತಿಸಿದರು. ಕುಲಾಲ ಸಂಘ ಮುಂಬಯಿಯ ಪ್ರಧಾನ ಕಾರ್ಯದರ್ಶಿ ಕರುಣಾಕರ್ ಬಿ. ಸಾಲ್ಯಾನ್ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಂಘದ ಉಪಾಧ್ಯಕ್ಷ ಡಿ. ಐ. ಮೂಲ್ಯ ಧನ್ಯವಾದ ಸಮರ್ಪಿಸಿದರು.




