ವಿಧಾನಸಭೆಯಲ್ಲಿ ಇಂದು ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ ಕುರಿತು ಭಾರೀ ಚರ್ಚೆ ನಡೆಯಿತು. ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು 2000 ರೂಪಾಯಿಗಳನ್ನು ಡಿಬಿಟಿ ಮೂಲಕ ತಲುಪಿಸುತ್ತಿದ್ದೇವೆ. ರಾಜ್ಯದ ಈ ಮಾದರಿಯನ್ನು ನೋಡಿ ಬೇರೆ ರಾಜ್ಯಗಳೂ ಇಂತಹ ಯೋಜನೆ ಜಾರಿಗೆ ತಂದಿವೆ. ಈವರೆಗೆ 1.26 ಲಕ್ಷ ಕುಟುಂಬಗಳ ಯಜಮಾನಿಯರಿಗೆ ಒಟ್ಟು 46 ಸಾವಿರ ಕೋಟಿ ರೂಪಾಯಿ ನೀಡಿದ್ದೇವೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಮಾಹಿತಿ ನೀಡಿದರು. ಆದರೆ, ಎರಡು ತಿಂಗಳ ಹಣ ಬಾಕಿ ಇರುವ ವಿಚಾರವಾಗಿ ವಿಪಕ್ಷಗಳು ಪ್ರಶ್ನಿಸಿದಾಗ, ‘ಸದನಕ್ಕೆ ತಪ್ಪು ಮಾಹಿತಿ ನೀಡುವ ಉದ್ದೇಶ ನನಗಿರಲಿಲ್ಲ. ಮಾಹಿತಿ ಪಡೆಯುವಲ್ಲಿ ವ್ಯತ್ಯಾಸವಾಗಿದೆ, ಹಣ ಇನ್ನೂ ಸಂದಾಯವಾಗಿಲ್ಲ ಎಂಬುದು ನನ್ನ ಗಮನಕ್ಕೆ ಬಂದಿದೆ’ ಎಂದು ಸಚಿವರು ತಪ್ಪೊಪ್ಪಿಕೊಂಡು ವಿಷಾದ ವ್ಯಕ್ತಪಡಿಸಿದರು.
ಸಚಿವರ ಸಮರ್ಥನೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಶಾಸಕ ಸುನಿಲ್ ಕುಮಾರ್, ‘ಸರ್ಕಾರದ ಬಳಿ ಹಣ ಇಲ್ಲದಿದ್ದರೆ ನೇರವಾಗಿ ದಿವಾಳಿಯಾಗಿದೆ ಎಂದು ಒಪ್ಪಿಕೊಳ್ಳಲಿ. ಪದೇ ಪದೇ ತಪ್ಪು ಮಾಹಿತಿ ನೀಡಿ ಜನರನ್ನು ಹಾದಿ ತಪ್ಪಿಸುವುದು ಬೇಡ. ಎರಡು ತಿಂಗಳ ಹಣ ಹಾಕದೆ ಈಗ ಸದನಕ್ಕೆ ಬಂದು ಸಮರ್ಥಿಸಿಕೊಳ್ಳುವುದು ಸರಿಯಲ್ಲ. ಹಣ ಹಾಕಿದ್ದೇವೆ ಎಂದು ಹೇಳುವ ಬದಲು, ಇಲ್ಲ ಎಂದು ಒಪ್ಪಿಕೊಳ್ಳುವ ಧೈರ್ಯ ತೋರಲಿ’ ಎಂದು ಆಕ್ರೋಶ ಹೊರಹಾಕಿದರು. ಇದೇ ವೇಳೆ ಸಚಿವ ಬೈರತಿ ಸುರೇಶ್ ಮಧ್ಯಪ್ರವೇಶಿಸಿ, ‘ರಾಜ್ಯದ ಜನರಿಗೆ ಬಿಜೆಪಿ ಒಂದು ರೂಪಾಯಿ ಕೊಡುವ ಕೆಪಾಸಿಟಿ ಇಲ್ಲ’ ಎಂದು ಹೇಳಿದ್ದು ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಯಿತು.




