
ಮುಂಬೈ: ಇನ್ನಂಜೆ ಚಂದ್ರಹಾಸ ಗುರುಸ್ವಾಮಿ ಅವರ ನೇತೃತ್ವದ ಇಲ್ಲಿನ ಅಂಧೇರಿ ಪಶ್ಚಿಮದ ‘ಶ್ರೀ ಅಯ್ಯಪ್ಪ ಭಕ್ತವೃಂದ ಸೇವಾ ಸಮಿತಿ’ಯ ವತಿಯಿಂದ 37ನೇ ವಾರ್ಷಿಕ ಅಯ್ಯಪ್ಪ ಮಹಾಪೂಜೆ ಮತ್ತು ಅನ್ನಸಂತರ್ಪಣೆಯು ಡಿಿಸೆಂಬರ್ 21ರ ಭಾನುವಾರ ಅಂಧೇರಿ ಪಶ್ಚಿಮದ ಮಹಾಲಕ್ಷ್ಮೀ ಕಾಲೋನಿಯಲ್ಲಿರುವ ಶ್ರೀ ಲಕ್ಷ್ಮೀ ನಾರಾಯಣ ಮಂದಿರದಲ್ಲಿ ನಡೆಯಲಿದೆ.
ಧಾರ್ಮಿಕ ಕಾರ್ಯಕ್ರಮಗಳ ವಿವರ:
ಅಂದು ಸಂಜೆ 5.00ಕ್ಕೆ ಶರಣು ಘೋಷ ಮತ್ತು ನಿತ್ಯ ಪೂಜೆಯೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ. ಬೆಳಿಗ್ಗೆ 6ರಿಂದ 7ರವರೆಗೆ ಗಣಪತಿ ಹೋಮ, 10 ಗಂಟೆಯಿಂದ ಭಜನಾ ಕಾರ್ಯಕ್ರಮ ಹಾಗೂ ಮಧ್ಯಾಹ್ನ 1 ಗಂಟೆಗೆ ಚಂದ್ರಹಾಸ ಗುರುಸ್ವಾಮಿ ಅವರ ಸಾರಥ್ಯದಲ್ಲಿ ಮಹಾಪೂಜೆ ಜರುಗಲಿದೆ. ಇದೇ ಸಂದರ್ಭದಲ್ಲಿ ಕಳೆದ 25 ವರ್ಷಗಳಿಂದ ನಿರಂತರವಾಗಿ ಶಬರಿಮಲೆ ಯಾತ್ರೆ ಕೈಗೊಳ್ಳುತ್ತಿರುವ ಇನ್ನಂಜೆ ರಮೇಶ್ ಸ್ವಾಮಿ ಮತ್ತು ಇನ್ನಂಜೆ ಪ್ರಕಾಶ್ ಶೆಟ್ಟಿ ಸ್ವಾಮಿ ಅವರನ್ನು ಅಯ್ಯಪ್ಪ ಸ್ವಾಮಿಯ ಮಹಾಪ್ರಸಾದ ನೀಡಿ ಗೌರವಿಸಲಾಗುವುದು. ಪೂಜಾ ಕಾರ್ಯಕ್ರಮದ ನಂತರ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.

ಚಂದ್ರಹಾಸ ಗುರುಸ್ವಾಮಿ: ಭಕ್ತಿ ಮತ್ತು ಸೇವೆಯ ಪಥ
ಮುಂಬೈ ಮತ್ತು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಪಾರ ಶಿಷ್ಯವರ್ಗವನ್ನು ಹೊಂದಿರುವ ಇನ್ನಂಜೆ ಚಂದ್ರಹಾಸ ಗುರುಸ್ವಾಮಿ ಅವರು ಕಳೆದ 39 ವರ್ಷಗಳಿಂದ ಅತ್ಯಂತ ಶ್ರದ್ಧೆ ಹಾಗೂ ಕಟ್ಟುನಿಟ್ಟಿನ ವ್ರತಾಚರಣೆಯೊಂದಿಗೆ ಶಬರಿಮಲೆ ಯಾತ್ರೆಯನ್ನು ಮುನ್ನಡೆಸುತ್ತಿದ್ದಾರೆ. ಈ ಬಾರಿ ಅವರು ತಮ್ಮ 40ನೇ ವರ್ಷದ ಯಾತ್ರೆಯ ಸಿದ್ಧತೆಯಲ್ಲಿದ್ದಾರೆ.
ಕಳೆದ 21 ವರ್ಷಗಳಿಂದ ಪಾದರಕ್ಷೆ ಧರಿಸದೆ, 365 ದಿನಗಳ ಕಾಲ ಶುದ್ಧ ಶಾಖಾಹಾರಿಯಾಗಿ ಬ್ರಹ್ಮಚರ್ಯ ಪಾಲಿಸುತ್ತಿರುವ ಇವರು ಆಧ್ಯಾತ್ಮಿಕ ಶಕ್ತಿಯ ಪ್ರತೀಕವಾಗಿದ್ದಾರೆ. ಏಳು ಬಾರಿ ಮುಂಬೈನಿಂದ ಊರಿಗೆ, ಅಲ್ಲಿಂದ ಶಬರಿಮಲೆಗೆ ಪಾದಯಾತ್ರೆಯ ಮೂಲಕ ಸಾಗಿರುವ ಇವರು, ಕಠಿಣವಾದ ಮಂಡಲ ವ್ರತದೊಂದಿಗೆ ಕರಿಮಲೆ, ಅಳುದಮಲೆ, ನೀಳಿಮಲೆಯಂತಹ ಕಡಿದಾದ ಹಾದಿಗಳಲ್ಲಿ ಸಾವಿರಾರು ಭಕ್ತರಿಗೆ ಅಯ್ಯಪ್ಪ ದರ್ಶನ ಮಾಡಿಸಿದ ಕೀರ್ತಿ ಹೊಂದಿದ್ದಾರೆ. ವಿಶೇಷವೆಂದರೆ, ಇವರ ಪಾದಯಾತ್ರೆಯ ಸಂದರ್ಭದಲ್ಲಿ ಎರಡು ಬಾರಿ ಶ್ವಾನವೊಂದು ಇವರನ್ನು ಅನುಸರಿಸಿ ಶಬರಿಪೀಠದವರೆಗೆ ಸಾಗಿದ್ದು ಭಕ್ತರಲ್ಲಿ ಅಚ್ಚರಿ ಮೂಡಿಸಿತ್ತು.
ಸಾಮಾಜಿಕ ಕೊಡುಗೆ:
ಕೇವಲ ಧಾರ್ಮಿಕ ಕ್ಷೇತ್ರವಷ್ಟೇ ಅಲ್ಲದೆ, ಸಾಮಾಜಿಕ ಸೇವೆಯಲ್ಲೂ ಗುರುಸ್ವಾಮಿ ಅವರು ಮುಂಚೂಣಿಯಲ್ಲಿದ್ದಾರೆ. ಪ್ರಸಿದ್ಧ ಕುಂಜಾರು ಶ್ರೀ ದುರ್ಗಾದೇವಿ ದೇವಸ್ಥಾನ ಹಾಗೂ ಉಂಡಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನಗಳಿಗೆ ಇವರ ಸಾರಥ್ಯದ ‘ಶ್ರೀ ಅಯ್ಯಪ್ಪ ಭಕ್ತವೃಂದ ಶಂಕರಪುರ-ಮುಂಬೈ’ ವತಿಯಿಂದ ಭವ್ಯ ರಾಜಗೋಪುರಗಳನ್ನು ನಿರ್ಮಿಸಿಕೊಡಲಾಗಿದೆ. ಅಶಕ್ತರಿಗೆ ವೈದ್ಯಕೀಯ ನೆರವು ಹಾಗೂ ದೇವಸ್ಥಾನಗಳ ಜೀರ್ಣೋದ್ಧಾರ ಕಾರ್ಯಗಳಿಗೆ ಇವರು ಸದಾ ಹಸ್ತ ಚಾಚುತ್ತಾ ಬಂದಿದ್ದಾರೆ.
ಈ ಪುಣ್ಯ ಕಾರ್ಯದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಚಂದ್ರಹಾಸ ಶೆಟ್ಟಿ ಗುರುಸ್ವಾಮಿ, ಅಧ್ಯಕ್ಷ ಸೂರ್ಯಪ್ರಕಾಶ್ ಶೆಟ್ಟಿಗಾರ್, ಗೌರವ ಪ್ರಧಾನ ಕಾರ್ಯದರ್ಶಿ ಬಾಬು ಎಂ. ಶೆಟ್ಟಿ, ಗೌರವ ಕೋಶಾಧಿಕಾರಿ ವಿಜಯ್ ಎಸ್. ಶೆಟ್ಟಿ, ಜೊತೆ ಕಾರ್ಯದರ್ಶಿಗಳಾದ ದಿಲೀಪ್ ಎಸ್. ಶೆಟ್ಟಿ, ಪ್ರಭಾಶ್ಚಂದ್ರ ಎಸ್. ಶೆಟ್ಟಿ ಹಾಗೂ ಜೊತೆ ಕೋಶಾಧಿಕಾರಿಗಳಾದ ಭರತ್ ಕೆ. ಶೆಟ್ಟಿ ಮತ್ತು ಶಂಕರ್ ಎನ್. ಕೆ. ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ




