September 6, 2026
Mumbai News Kannada
ತುಳುನಾಡು

ಉಡುಪಿ ಕೃಷ್ಣನಿಗೆ ‘ಪಾರ್ಥಸಾರಥಿ’ ಸುವರ್ಣ ರಥ ಸಮರ್ಪಣೆ





ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಭಕ್ತಿಯ ಹೊಳೆ ಹರಿಯುತ್ತಿದೆ. ‘ಉತ್ಸವ ಬ್ರಹ್ಮ’ ಎಂದೇ ಖ್ಯಾತನಾದ ಉಡುಪಿ ಕೃಷ್ಣನಿಗೆ ಈಗ ಭವ್ಯವಾದ ‘ಪಾರ್ಥಸಾರಥಿ ಸುವರ್ಣ ರಥ’ ಸಮರ್ಪಣೆಯಾಗುತ್ತಿದೆ. ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಸನ್ಯಾಸ ಜೀವನದ 50 ವರ್ಷಗಳ ಸಾರ್ಥಕ ಕ್ಷಣದ ನೆನಪಿಗಾಗಿ ಈ ಚಿನ್ನದ ರಥವನ್ನು ದೇವರಿಗೆ ಅರ್ಪಿಸಲಾಗುತ್ತಿದೆ.

ಪುತ್ತಿಗೆ ಶ್ರೀಗಳಾದ ಶ್ರೀ ಸುಗುಣೇಂದ್ರ ತೀರ್ಥರು ಸನ್ಯಾಸ ಜೀವನಕ್ಕೆ ಪದಾರ್ಪಣೆ ಮಾಡಿ 50 ವರ್ಷಗಳು ಸಂದಿವೆ. ಈ ಸುವರ್ಣ ಮಹೋತ್ಸವದ ನೆನಪಿಗಾಗಿ ಶ್ರೀಕೃಷ್ಣನಿಗೆ ಚಿನ್ನದ ರಥವನ್ನು ಸಮರ್ಪಿಸಲಾಗುತ್ತಿದೆ. ಪುತ್ತಿಗೆ ಪರ್ಯಾಯವು ಈಗಾಗಲೇ ‘ಕೋಟಿಗೀತಾ ಲೇಖನ ಯಜ್ಞ’ದ ಮೂಲಕ ವಿಶ್ವದ ಗಮನ ಸೆಳೆದಿದ್ದು, ಇದನ್ನು ‘ವಿಶ್ವಗೀತಾ ಪರ್ಯಾಯ’ ಎಂದು ಆಚರಿಸಲಾಗುತ್ತಿದೆ. ಈ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರು ಸಹ ಇಲ್ಲಿಗೆ ಭೇಟಿ ನೀಡಿ ಭಗವದ್ಗೀತೆ ಪಠಿಸಿದ್ದರು ಎಂಬುದು ವಿಶೇಷ.

ಉಡುಪಿ ಕೃಷ್ಣಮಠದಲ್ಲಿ ಈಗಾಗಲೇ ಏಳು ರಥಗಳು ಬಳಕೆಯಲ್ಲಿದ್ದವು. ಈಗ ಸಮರ್ಪಣೆಯಾಗುತ್ತಿರುವ ಪಾರ್ಥಸಾರಥಿ ಸುವರ್ಣ ರಥವು ಎಂಟನೇ ರಥವಾಗಿದೆ. ಉಡುಪಿಯಲ್ಲಿ ಅಷ್ಟಮಠಗಳಿರುವಂತೆ, ಈಗ ಕೃಷ್ಣನಿಗೆ ಅಷ್ಟ ರಥಗಳ ಸೇವೆ ಲಭ್ಯವಾದಂತಾಗಿದೆ. ಕುರುಕ್ಷೇತ್ರದಲ್ಲಿ ಅರ್ಜುನನಿಗೆ ಭಗವದ್ಗೀತೆ ಬೋಧಿಸುವ ಕೃಷ್ಣನ ಪಾರ್ಥಸಾರಥಿ ರೂಪದ ಸುಂದರ ಚಿತ್ರಣವನ್ನು ಈ ರಥವು ಒಳಗೊಂಡಿದೆ.

ಈ ರಥದ ಮತ್ತೊಂದು ವಿಶೇಷತೆ ಎಂದರೆ ಇದನ್ನು ಎಲ್ಲಾ ಋತುಗಳಲ್ಲೂ ಬಳಸಬಹುದು. ಸಾಮಾನ್ಯವಾಗಿ ಮಳೆಗಾಲದಲ್ಲಿ ರಥಬೀದಿಯಲ್ಲಿ ರಥೋತ್ಸವ ನಡೆಸಲು ತೊಂದರೆಯಾಗುತ್ತದೆ. ಆದರೆ ಈ ನೂತನ ಸುವರ್ಣ ರಥವನ್ನು ಗರ್ಭಗುಡಿಯ ಸುತ್ತಲಿನ ಪೌಳಿಯಲ್ಲಿ ಎಳೆಯಲು ವಿನ್ಯಾಸಗೊಳಿಸಲಾಗಿದೆ. ಇದರಿಂದಾಗಿ ಮಳೆ ಬಂದರೂ ಕೃಷ್ಣನ ರಥೋತ್ಸವ ಸೇವೆಗೆ ಯಾವುದೇ ಅಡ್ಡಿ ಯಾಗುವುದಿಲ್ಲ.

ಉಡುಪಿ ಕೃಷ್ಣನನ್ನು ‘ಅನ್ನಬ್ರಹ್ಮ’ ಮತ್ತು ‘ಉತ್ಸವ ಬ್ರಹ್ಮ’ ಎಂದು ಭಕ್ತರು ಕರೆಯುತ್ತಾರೆ. ಇಲ್ಲಿ ಪ್ರತಿದಿನವೂ ಒಂದಲ್ಲ ಒಂದು ರೀತಿಯ ಉತ್ಸವಗಳು ನಡೆಯುತ್ತಲೇ ಇರುತ್ತವೆ. ಈಗ ಸಮರ್ಪಣೆಯಾಗುತ್ತಿರುವ ಈ ಚಿನ್ನದ ರಥದಿಂದಾಗಿ, ಭಕ್ತರು ಇನ್ನು ಮುಂದೆ ಪ್ರತಿದಿನವೂ ಉತ್ಸವ ಬ್ರಹ್ಮನಿಗೆ ಸುವರ್ಣ ರಥೋತ್ಸವದ ಸೇವೆಯನ್ನು ಸಲ್ಲಿಸುವ ಮೂಲಕ ಪುನೀತರಾಗಬಹುದಾಗಿದೆ.



Related posts

ಉಡುಪಿ : ಅಕ್ಷತಾ ಪೂಜಾರಿ ಮೇಲೆ ಪೊಲೀಸರಿಂದ ಹಲ್ಲೆ ಪ್ರಕರಣ – ಇಂದು ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯ ತುರ್ತು ಸಭೆ

Mumbai News Desk

ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇಗುಲಕ್ಕೆ ಮುಷ್ಟಿ ಕಾಣಿಕೆ ಸಮರ್ಪಣೆ

Mumbai News Desk

ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ನ ನೂತನ ಅಧ್ಯಕ್ಷರಾಗಿ ಪ್ರಭೋದ್ ಚಂದ್ರ ಹೆಜಮಾಡಿ ಆಯ್ಕೆ

Mumbai News Desk

ಭಯ-ಭಕ್ತಿಯ ರೋಮಾಂಚನ: ಕಣ್ಮನ ಸೆಳೆದ ಕಾಪುವಿನ ಇತಿಹಾಸ ಪ್ರಸಿದ್ಧ ಪಿಲಿಕೋಲ

Mumbai News Desk

ಮುಲ್ಕಿ : ಸಾಧಕರ ಅರಸು ಕಂಬಳ ಪ್ರಶಸ್ತಿ 2025 ಪ್ರಕಟ – ಹರಿಶ್ಚಂದ್ರ ಪಿ ಸಾಲ್ಯಾನ್ ರವರಿಗೆ ಸಾಹಿತ್ಯ ಕ್ಷೇತ್ರ ಪ್ರಶಸ್ತಿ

Mumbai News Desk

ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ಬಲಿ ಉತ್ಸವ ಸಂಪನ್ನ

Mumbai News Desk