ಮುಂಬೈನಿಂದ ಉಡುಪಿಗೆ ಕುಟುಂಬ ಸಮೇತ ಪ್ರಯಾಣಿಸುತ್ತಿದ್ದ ವೃದ್ದ ಮಹಿಳೆಯೊಬ್ಬರು ರೈಲಿನಲ್ಲಿ ಮಲಗಿದ್ದಾಗ ಅವರ ಚಿನ್ನಾಭರಣ ಮತ್ತು ನಗದು ದೋಚಲ್ಪಟ್ಟ ಘಟನೆ ನಡೆದಿದೆ. ಮಹಾರಾಷ್ಟ್ರದ ಮುಂಬೈನ ಚೆಂಬೂರು ನಿವಾಸಿಯಾಗಿರುವ 78 ವರ್ಷದ ಹೆಲ್ಮಿನಾ ಸಲಿನ್ಸ್ ಎಂಬ ದೂರುದಾರರು ಡಿಸೆಂಬರ್ 26ರಂದು ತಮ್ಮ ಮಗಳು ಮತ್ತು ಅಳಿಯ ಮತ್ತು ಮೊಮ್ಮಗಳೊಂದಿಗೆ ಮತ್ಸ್ಯಗಂಧ ಎಕ್ಸ್ಪ್ರೆಸ್ ನಲ್ಲಿ(12619) ಉಡುಪಿಗೆ ಪ್ರಯಾಣಿಸುತ್ತಿದ್ದರು. ಅವರು ಚಿನ್ನದ ಆಭರಣಗಳನ್ನು ಹೊಂದಿರುವ ವ್ಯಾನಿಟಿ ಬ್ಯಾಗ್, ಬಟ್ಟೆಗಳನ್ನು ಹೊಂದಿರುವ ಕೈ ಚೀಲ ಮತ್ತು ಸೂಟ್ಕೇಸ್ ಗಳನ್ನು ಹೊಂದಿದ್ದರು.
ದೂರುದಾರರು ಆಭರಣಗಳಿದ್ದ ವ್ಯಾನಿಟಿ ಬ್ಯಾಗ್ ಅನ್ನು ತಮ್ಮ ತಲೆಯ ಬಳಿ ಇಟ್ಟುಕೊಂಡು ರಾತ್ರಿ ಮಲಗಿದ್ದರು.
ಡಿಸೆಂಬರ್ 27 ರಂದು ಬೆಳಿಗ್ಗೆ ಸುಮಾರು 6.10 ರ ಸುಮಾರಿಗೆ, ರೈಲು ಮುರುಡೇಶ್ವರ ರೈಲ್ವೆ ನಿಲ್ದಾಣವನ್ನು ಹಾದು ಹೋಗುತ್ತಿದ್ದಾಗ ದೂರುದಾರರ ಮಗಳು ವ್ಯಾನಿಟಿ ಬ್ಯಾಗ್ ತನ್ನ ತಾಯಿಯ ತಲೆ ಬಳಿ ಇಲ್ಲದಿರೋದನ್ನು ಗಮನಿಸಿದರು. ಸ್ವಲ್ಪ ಸಮಯದ ಬಳಿಕ ಬ್ಯಾಗ್ ಟಿ ಟೇಬಲ್ ಬಳಿ ಪತ್ತೆಯಾಯಿತು. ಬ್ಯಾಗ್ ಪರಿಶೀಲಿಸಿದಾಗ 45. 8 ಲಕ್ಷ ರೂಪಾಯಿ ಮೌಲ್ಯದ 408 ಗ್ರಾಂ ತೂಕದ ಚಿನ್ನಾಭರಣ ಮತ್ತು 15,000 ನಗದು ಕದ್ದಿರುವುದು ಕಂಡು ಬಂದಿದೆ, ದೂರಿನ ಆಧಾರದ ಮೇಲೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಅನಾಮಧೇಯ ವ್ಯಕ್ತಿಗಳ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಂಬೈಯಿಂದ ಉಡುಪಿ-ಮಂಗಳೂರಿಗೆ ಪ್ರಯಾಣಿಸುವ ಸಂಧರ್ಭದಲ್ಲಿ ಇಂತಹ ಕಳ್ಳತನದ ಎಷ್ಟೋ ಘಟನೆಗಳು ನಡೆದರೂ, ಪ್ರಯಾಣಿಕರು ಇನ್ನೂ ಜಾಗ್ರತರಾಗದಿರುವುದು ಖೇದಕರ.ರೈಲು ಪ್ರಯಾಣದ ಸಮಯದಲ್ಲಿ ಅಮೂಲ್ಯ ವಸ್ತುಗಳ ಬಗ್ಗೆ ಹೆಚ್ಚಿನ ಜಾಗರೂಕತೆ ವಹಿಸುವುದು ಅವಶ್ಯಕ ಎಂದು ಈ ಘಟನೆ ಮತ್ತೊಮ್ಮೆಎಚ್ಚರಿಸುತ್ತದೆ.




