
ಸಮಾಜ ಬಾಂಧವರ ಕ್ರೀಡಾ ಪ್ರತಿಭೆಗೆ ರಾಜ್ಯ, ದೇಶ ಮಟ್ಟದಲ್ಲಿ ಅವಕಾಶ ಸಿಗುವಂತಾಗಲಿ: ಗಣೇಶ್ ಕಾಂಚನ್
ಮುಂಬೈ (ಜ. 20): ಮುಂಬೈನ ಹಿರಿಯ ತುಳು-ಕನ್ನಡಿಗರ ಸಂಘಟನೆಯಾದ ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬೈ ಇದರ ಮೀರಾ-ಭಾಯಂದರ್ ಶಾಖೆಯ ವತಿಯಿಂದ ಸಮಾಜ ಬಾಂಧವರಿಗಾಗಿ ಆಯೋಜಿಸಲಾಗಿದ್ದ ‘ಕ್ರೀಡಾಕೂಟ – 2026’ ಜನೆವರಿ 18ರ ಭಾನುವಾರದಂದು ಮೀರಾ ರೋಡ್ನ ಶಾಂತಿನಗರದಲ್ಲಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಮೈದಾನದಲ್ಲಿ ಯಶಸ್ವಿಯಾಗಿ ಜರುಗಿತು.
ಉದ್ಘಾಟನಾ ಸಮಾರಂಭ
ಬೆಳಿಗ್ಗೆ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮೀರಾ-ಭಾಯಂದರ್ ಶಾಖೆಯ ಕಾರ್ಯದರ್ಶಿ ತಿಲಕ್ ಎನ್. ಸುವರ್ಣ ಎಲ್ಲರನ್ನು ಸ್ವಾಗತಿಸಿದರು. ಮೊಗವೀರ ವ್ಯವಸ್ಥಾಪಕ ಮಂಡಳಿಯ ಗೌರವ ಪ್ರಧಾನ ಕಾರ್ಯದರ್ಶಿ ದಿಲೀಪ್ ಮುಲ್ಕಿ ಅವರು ದೀಪ ಬೆಳಗಿಸಿ, ರಿಬ್ಬನ್ ಕತ್ತರಿಸಿ ಹಾಗೂ ಬಲೂನ್ ಹಾರಿಸುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ದಿಲೀಪ್ ಮುಲ್ಕಿ ಅವರು, “ಜೀವನದಲ್ಲಿ ಸೋಲು-ಗೆಲುವು ಮುಖ್ಯವಲ್ಲ, ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಎಂಬ ಪಾಠವನ್ನು ಕ್ರೀಡೆ ನಮಗೆ ಕಲಿಸುತ್ತದೆ,” ಎಂದು ಹೇಳುತ್ತಾ ಶುಭ ಹಾರೈಸಿದರು. ನಂತರ ಆಕರ್ಷಕ ಪಥಸಂಚಲನ ನಡೆಯಿತು.

ಕಾರ್ಯಕ್ರಮದಲ್ಲಿ ಮಂಡಳಿಯ ಉಪಾಧ್ಯಕ್ಷೆ ದಯಾವತಿ ಸುವರ್ಣ, ಪ್ರೀತಿ ಶ್ರೀಯಾನ್, ಟ್ರಸ್ಟಿಗಳಾದ ಪುರುಷೋತ್ತಮ ಕರ್ಕೇರ, ಸದಸ್ಯತ್ವ ನೋಂದಣಿ ಸಮಿತಿಯ ಕಾರ್ಯಾಧ್ಯಕ್ಷ ಕುಮಾರ್ ಮೆಂಡನ್, ಕ್ರೀಡಾ ಸಮಿತಿ ಕಾರ್ಯಾಧ್ಯಕ್ಷ ಮನಮೋಹನ್ ಕರ್ಕೇರ, ಪ್ರಜ್ವಲ್ ಸಾಲಿಯಾನ್, ಸುರೇಶ್ ಕುಂದರ್ ಮತ್ತು ಶಾಖೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕ್ರೀಡಾ ವೈವಿಧ್ಯತೆ
8 ವರ್ಷದ ಬಾಲಕ-ಬಾಲಕಿಯರಿಂದ ಹಿಡಿದು ಹಿರಿಯ ನಾಗರಿಕರವರೆಗೆ ವಿವಿಧ ವಯೋಮಾನದವರು ಕ್ರೀಡೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ತುಳುನಾಡಿನ ಸಾಂಪ್ರದಾಯಿಕ ಕ್ರೀಡೆಗಳಾದ ‘ಕುಟ್ಟಿ ದೊಣ್ಣೆ’, ಬಲೆ ಬೀಸುವುದು, ಲಗೋರಿ ಮತ್ತು ಮಡಕೆ ಹೊಡೆಯುವ ಸ್ಪರ್ಧೆಗಳು ಕ್ರೀಡಾಕೂಟದ ವಿಶೇಷ ಆಕರ್ಷಣೆಯಾಗಿದ್ದವು. ಮೀರಾ-ಭಾಯಂದರ್ ಶಾಖೆಯ ಕಾರ್ಯಾಧ್ಯಕ್ಷ ಗಂಗಾಧರ್ ಬಂಗೇರ ಅವರು ಅನಾರೋಗ್ಯದ ನಡುವೆಯೂ ಮೈದಾನಕ್ಕೆ ಆಗಮಿಸಿ, ಕಾರ್ಯಕ್ರಮದ ಯಶಸ್ವಿ ಆಯೋಜನೆಗಾಗಿ ಪದಾಧಿಕಾರಿಗಳನ್ನು ಅಭಿನಂದಿಸಿದರು.

ಸಮರೋಪ ಮತ್ತು ಬಹುಮಾನ ವಿತರಣೆ
ಸಂಜೆ ನಡೆದ ಬಹುಮಾನ ವಿತರಣಾ ಸಮಾರಂಭದ ಅಧ್ಯಕ್ಷತೆಯನ್ನು ಮಂಡಳಿಯ ಅಧ್ಯಕ್ಷ ಗಣೇಶ್ ಕಾಂಚನ್ ವಹಿಸಿದ್ದರು. ವೇದಿಕೆಯಲ್ಲಿ ಗೌರವ ಕೋಶಾಧಿಕಾರಿ ದೇವರಾಜ್ ಕುಂದರ್, ಟ್ರಸ್ಟಿಗಳಾದ ದೇವರಾಜ್ ಬಂಗೇರ, ಪುರುಷೋತ್ತಮ ಕರ್ಕೇರ, ಚಂದ್ರಶೇಖರ್ ಕರ್ಕೇರ, ಕ್ರೀಡಾ ಸಮಿತಿ ಕಾರ್ಯಾಧ್ಯಕ್ಷ ಮನಮೋಹನ್ ಕರ್ಕೇರ ಹಾಗೂ ಸದಸ್ಯತ್ವ ನೋಂದಣಿ ಸಮಿತಿಯ ಕಾರ್ಯಾಧ್ಯಕ್ಷ ಕುಮಾರ್ ಮೆಂಡನ್ ಉಪಸ್ಥಿತರಿದ್ದರು.
ದೇವರಾಜ್ ಬಂಗೇರ ಮಾತನಾಡಿ, “ಭಾಗವಹಿಸಿದ ಪ್ರತಿಯೊಬ್ಬರೂ ವಿಜೇತರೇ, ಈ ಸ್ಫೂರ್ತಿ ಸದಾ ಇರಲಿ” ಎಂದರು. ಕ್ರೀಡಾಕೂಟದ ರೂವಾರಿ, ಮೀರಾ-ಭಾಯಂದರ್ ಶಾಖೆಯ ಸಂಯೋಜಕ ಪ್ರಜ್ವಲ್ ಸಾಲಿಯಾನ್ ಮಾತನಾಡಿ, ಹಿರಿಯರ ಮಾರ್ಗದರ್ಶನ ಹಾಗೂ ಯುವಕರ ಪರಿಶ್ರಮವೇ ಈ ಯಶಸ್ಸಿಗೆ ಕಾರಣ ಎಂದರು.
ಇದೇ ಸಂದರ್ಭದಲ್ಲಿ ಪ್ರಜ್ವಲ್ ಸಾಲಿಯಾನ್ ಅವರ ಯಶೋದೇವ್ ಫೌಂಡೇಶನ್ ಸಹಯೋಗದೊಂದಿಗೆ, ಸಮಾಜದವರಾದ ಸುಂದರ್ ಪುತ್ರನ್ ಹಾಗೂ ಸ್ಮಿತಾ ಬೈಕಂಪಾಡಿ ಅವರ ವೈದ್ಯಕೀಯ ಚಿಕಿತ್ಸೆಗಾಗಿ ಶಾಖೆಯ ವತಿಯಿಂದ ಆರ್ಥಿಕ ಸಹಾಯ ಹಸ್ತಾಂತರಿಸಲಾಯಿತು.

ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಗಣೇಶ್ ಕಾಂಚನ್ ಅವರು, “ಯುವ ಸದಸ್ಯರ ಪರಿಶ್ರಮದಿಂದ ಸಮಾಜ ಬಾಂಧವರು ಒಗ್ಗಟ್ಟಾಗಿದ್ದಾರೆ. ಈ ವೇದಿಕೆ ಕೇವಲ ಸ್ಪರ್ಧೆಯಾಗದೆ ಪ್ರತಿಭೆಗಳ ಅನಾವರಣಕ್ಕೆ ನಾಂದಿಯಾಗಲಿ. ನಮ್ಮ ಕ್ರೀಡಾಪಟುಗಳಿಗೆ ರಾಜ್ಯ ಹಾಗೂ ದೇಶ ಮಟ್ಟದಲ್ಲಿ ಅವಕಾಶಗಳು ಸಿಗುವಂತಾಗಲಿ,” ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಮಹಿಳಾ ವಿಭಾಗದ ಕಾರ್ಯದರ್ಶಿ ಅಮೃತಾ ಪಿ. ಸಾಲಿಯಾನ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಅಮರ್ ಕಾಂಚನ್ ವಿಜೇತರ ಪಟ್ಟಿಯನ್ನು ವಾಚಿಸಿದರು.
ಶಾಖೆಯ ಉಪಕಾರ್ಯಾಧ್ಯಕ್ಷ ಹರೀಶ್ ಕೋಟ್ಯಾನ್, ಗೌರವ ಕಾರ್ಯದರ್ಶಿ ತಿಲಕ್ ಎನ್. ಸುವರ್ಣ, ಗೌರವ ಕೋಶಾಧಿಕಾರಿ ಕಿಶೋರ್ ಎ. ಉಪ್ಪೂರು, ಮಹಿಳಾ ವಿಭಾಗದ ಅಧ್ಯಕ್ಷೆ ಪ್ರಭಾವತಿ ಎಚ್. ಅಮೀನ್, ಕೋಶಾಧಿಕಾರಿ ಜಾನಕಿ ತಿಂಗಳಾಯ, ಯುವ ವಿಭಾಗದ ಕಾರ್ಯದರ್ಶಿ ಮಾನ್ಸಿ ಆರ್. ಪುತ್ರನ್, ಕೋಶಾಧಿಕಾರಿ ವಿಪಿನ್ ತಿಂಗಳಾಯ, ಶಾಖಾ ಕ್ರೀಡಾ ಸಮಿತಿ ಅಧ್ಯಕ್ಷ ರವಿ ಎನ್. ಸುವರ್ಣ, ಕಾರ್ಯದರ್ಶಿ ದೇವಕಿ ಎಚ್. ಕೋಟ್ಯಾನ್ ಹಾಗೂ ಸದಸ್ಯರು ಕ್ರೀಡಾಕೂಟದ ಯಶಸ್ವಿಗಾಗಿ ಶ್ರಮಿಸಿದರು.




