
—
ಜನವರಿ 31 ರಂದು ಜಯಲಕ್ಷ್ಮೀ ಎಸ್ ಜೋಕಟ್ಟೆಯವರ ಕವಿತೆಗಳು’ಮತ್ತು ಡಾ. ದುರ್ಗಪ್ಪ ಯ. ಕೋಟಿಯವರ್ ಅವರ ‘ಮುಂಬೈ ಕನ್ನಡ ಗದ್ಯ ವಾಹಿನಿ’ ಬಿಡುಗಡೆ
ಮುಂಬಯಿ: ಗೋರೆಗಾಂವ್ ಕರ್ನಾಟಕ ಸಂಘ , ಮುಂಬೈಇದರ ಗ್ರಂಥಾಯನ ವಿಭಾಗ’ದ ಆಶ್ರಯದಲ್ಲಿ
ಜನವರಿ 31 ರಂದು ಶನಿವಾರ ಸಂಜೆ 5 ಗಂಟೆಗೆ ಎರಡು ಕೃತಿಗಳ ಬಿಡುಗಡೆ ಕಾರ್ಯಕ್ರಮ ಜರಗಲಿದೆ. ಅಂದು ಜಯಲಕ್ಷ್ಮೀ ಎಸ್ ಜೋಕಟ್ಟೆಯವರ ಕವಿತೆಗಳು’ ( ಸಂಪಾದಕ: ಶ್ರೀನಿವಾಸ ಜೋಕಟ್ಟೆ,)ಮತ್ತು ಡಾ. ದುರ್ಗಪ್ಪ ಯ. ಕೋಟಿಯವರ್ ಅವರ ಪಿ ಎಚ್ ಡಿ ಸಂಶೋಧನಾಗ್ರಂಥ ‘ಮುಂಬೈ ಕನ್ನಡ ಗದ್ಯ ವಾಹಿನಿ’ ಬಿಡುಗಡೆ ಗೊಳ್ಳಲಿದೆ.

ಗೋರೆಗಾಂವ್ ಪಶ್ಚಿಮದ ಅಂಬಾಬಾಯಿ ದೇವಸ್ಥಾನದ ಹತ್ತಿರ,
ಆರೆ ರೋಡ್ ಇಲ್ಲಿರುವ
ಕೇಶವ ಗೋರೆ ಸ್ಮಾರಕ ಟ್ರಸ್ಟ್ ನ ಎರಡನೇ ಮಹಡಿಯಲ್ಲಿ ಈ ಕೃತಿ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿದೆ.
ಅಂದಿನ ಅಧ್ಯಕ್ಷತೆಯನ್ನು ಸರಿತಾ ಸುರೇಶ್ ನಾಯಕ್ (ಉಪಾಧ್ಯಕ್ಷರು: ಗೋರೆಗಾಂವ್ ಕರ್ನಾಟಕ ಸಂಘ) ವಹಿಸಲಿದ್ದಾರೆ.
ಶ್ರೀನಿವಾಸ ಜೋಕಟ್ಟೆ ಸಂಪಾದಿತ ‘ಜಯಲಕ್ಷ್ಮೀ ಎಸ್ ಜೋಕಟ್ಟೆಯವರ ಕವಿತೆಗಳು’ ಕೃತಿಯನ್ನು ಪೇಟೆಮನೆ ಪ್ರಕಾಶ್ ಶೆಟ್ಟಿ ಬಿಡುಗಡೆ ಗೊಳಿಸಲಿದ್ದಾರೆ. ಕೃತಿ ಪರಿಚಯವನ್ನು ಸುರೇಂದ್ರಕುಮಾರ್ ಮಾರ್ನಾಡ್ ಮಾಡಲಿರುವರು.
ದುರ್ಗಪ್ಪ ಯ. ಕೋಟಿಯವರ್ ಕೃತಿ ‘ಮುಂಬೈ ಕನ್ನಡ ಗದ್ಯ ವಾಹಿನಿ’ಯನ್ನು ಡಾ. ಈಶ್ವರ ಅಲೆವೂರು ಬಿಡುಗಡೆ ಗೊಳಿಸುವರು.ಕೃತಿ ಪರಿಚಯವನ್ನು ಸುರೇಖಾ ಹರಿಪ್ರಸಾದ್ ಶೆಟ್ಟಿ ಮಾಡುವರು.
ವೇದಿಕೆಯಲ್ಲಿ ಶೈಲಾ ಎಸ್ ನಾಯಕ್ (ಗ್ರಂಥಾಯನ ನಿರ್ದೇಶಕಿ) ಮತ್ತು ಶಾಂತಾ ಎಸ್ ಶೆಟ್ಟಿ
(ಗೋರೆಗಾಂವ್ ಕರ್ನಾಟಕ ಸಂಘದ ಕಾರ್ಯದರ್ಶಿ) ಉಪಸ್ಥಿತರಿರುವರು.
ನಿರೂಪಣೆಯನ್ನು ಕವಿ ರಂಗಕರ್ಮಿ ಸಾ. ದಯಾ ಮಾಡಲಿದ್ದಾರೆ.
ಪುಸ್ತಕ ಪ್ರೇಮಿಗಳಿಗೆ ಆದರದ ಸ್ವಾಗತವನ್ನು ಸಂಘದ ಹಾಗೂ ಗ್ರಂಥಾಯನದ ಪರವಾಗಿ
ವಿಶ್ವನಾಥ ಕೆ ಶೆಟ್ಟಿ
ಅಧ್ಯಕ್ಷರು : ಗೋರೆಗಾಂವ್ ಕರ್ನಾಟಕ ಸಂಘ. ಮತ್ತು
ಯಶೋದಾ ಆರ್. ಶೆಟ್ಟಿ
(ಗ್ರಂಥಾಯನ ಸಂಚಾಲಕಿ) ಕೋರಿದ್ದಾರೆ.

ಜಯಲಕ್ಷ್ಮೀ ಎಸ್. ಜೋಕಟ್ಟೆ ಪರಿಚಯ:
ಉಡುಪಿ ಜಿಲ್ಲೆಯ ಬ್ರಹ್ಮಾವರ ದವರಾಗಿರುವ ಜಯಲಕ್ಷ್ಮೀ ಎಸ್ ಜೋಕಟ್ಟೆ ಅವರು ಶಾಲಾ ಜೀವನದಲ್ಲೇ ಸಂಗೀತ, ಚಿತ್ರಕಲೆ ಸಾಹಿತ್ಯದಲ್ಲಿ ಅಪಾರ ಆಸಕ್ತಿ ವಹಿಸಿ ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದವರು. ‘ನೂಪುರ ಪರಿಸರ ಕಾವ್ಯ ಸ್ಪರ್ಧೆ’ಯಲ್ಲಿ ದ್ವಿತೀಯ ಬಹುಮಾನ ಪಡೆದಿದ್ದರು. ಪ್ರಕಾಶ ಕಡಮೆ ಅವರ ಸಮಷ್ಟಿ ಹೊತ್ತಿಗೆ, ಮಯೂರ ಮಾಸಿಕ, ಕರ್ಮವೀರ ವಾರಪತ್ರಿಕೆ, ಯುಗಪುರುಷ ದೀಪಾವಳಿಯ ಹಲವು ಸಂಚಿಕೆಗಳು, ಸ್ನೇಹಸಂಬಂಧ, ಡಾ.ಜಿ.ಎನ್.ಉಪಾಧ್ಯ ಅವರು ಸಂಪಾದಿಸಿದ ನಸುಕು ಡಾಟ್ ಕಾಮ್ ಮುಂಬಯಿ ವಿಶೇಷಾಂಕ….. ಮೊದಲಾದುವುಗಳಲ್ಲಿ ಇವರ ಹಲವು ಕವಿತೆಗಳು ಪ್ರಕಟವಾಗಿವೆ. ಮುಂಬಯಿ ಆಕಾಶವಾಣಿಯಲ್ಲಿಯೂ ಇವರ ಹಲವು ಲೇಖನ ಗಳು, ಸಂದರ್ಶನ ಕಾರ್ಯಕ್ರಮಗಳು ಪ್ರಸಾರವಾಗಿವೆ. ಜಯಲಕ್ಷ್ಮೀ ಅವರು ನವಂಬರ್ 24 (2025) ರಂದು ನಿಧನರಾಗಿದ್ದು ಇದೀಗ ಅವರ ಪತಿ ಶ್ರೀನಿವಾಸ ಜೋಕಟ್ಟೆ ಸಂಪಾದಕತ್ವದಲ್ಲಿ ಜಯಲಕ್ಷ್ಮೀ ಅವರ ಕವಿತೆಗಳ ಸಂಗ್ರಹ ಪ್ರಕಟವಾಗಿದೆ.

ಡಾ. ದುರ್ಗಪ್ಪ ಯ. ಕೋಟಿಯವರ್ ಪರಿಚಯ:
ಡಾ.ದುರ್ಗಪ್ಪ ಯ. ಕೋಟಿಯವರ್ ಅವರು ಹುಬ್ಬಳ್ಳಿ, ಸೊಲ್ಲಾಪುರ, ಅಕ್ಕಲಕೋಟೆ, ಮುಂಬಯಿಯಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮಾಡಿದ್ದಾರೆ. ಇದೀಗ ಬೃಹನ್ ಮುಂಬಯಿ ಮಹಾನಗರಪಾಲಿಕೆಯ ಕನ್ನಡ ಶಾಲೆಯಲ್ಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಾಹಿತ್ಯಾಸಕ್ತರಾದ ಇವರು ಒಳ-ಹೊರನಾಡಿನ ಅನೇಕ ಪತ್ರಿಕೆಗಳಲ್ಲಿ ಕವಿತೆ, ಬಿಡಿ ಬರಹಗಳು, ವಿಮರ್ಶಾ ಲೇಖನಗಳನ್ನು ಬರೆದಿರುತ್ತಾರೆ. ‘ಮುಂಬಯಿಯಲ್ಲಿ ಕನ್ನಡದ ಡಿಂಡಿಮ’ ಇದು ಅವರ ಚೊಚ್ಚಲ ಕೃತಿ. ಇದನ್ನು ಅಭಿಜಿತ್ ಪ್ರಕಾಶನವು 2017ರಲ್ಲಿ ಪ್ರಕಟಿಸಿದೆ. ಇವರು ಬರೆದು ಸಲ್ಲಿಸಿದ ಪಿಎಚ್.ಡಿ ಮಹಾಪ್ರಬಂಧ ‘ಮುಂಬಯಿ ಕನ್ನಡ ಗದ್ಯ ಸಾಹಿತ್ಯ’ ಎಂಬ ವಿಷಯಕ್ಕೆ ಮುಂಬಯಿ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಇದೀಗ ಈ ಸಂಶೋಧನಾ ಮಹಾಪ್ರಬಂಧ ಕೃತಿ ರೂಪದಲ್ಲಿ ಹೊರಬಂದಿದೆ.




