
ಮುಂಬಯಿ: ಚಾರ್ಕೋಪ್ನ ತುಳು–ಕನ್ನಡಿಗರ ಹೆಮ್ಮೆಯ ಸಂಸ್ಥೆಯಾದ ಚಾರ್ಕೋಪ್ ಕನ್ನಡಿಗರ ಬಳಗವು ಸಾಂಪ್ರದಾಯಿಕ, ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಮೌಲ್ಯಗಳನ್ನು ಎತ್ತಿಹಿಡಿಯುವ ಒಂದು ಆದರ್ಶ ಸಂಘಟನೆಯಾಗಿದೆ. ಈ ಬಳಗದ ಆಶ್ರಯದಲ್ಲಿ ಕಳೆದ ಹಲವಾರು ವರ್ಷಗಳಿಂದ ವೈವಿಧ್ಯಮಯ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಾ ಬರುತ್ತಿರುವುದು ಹೆಮ್ಮೆಯ ವಿಷಯ.
ಮಕರ ಸಂಕ್ರಾಂತಿಯ ಪ್ರಯುಕ್ತ ಜನವರಿ 24ರಂದು ಮಹಿಳಾ ವಿಭಾಗದ ವತಿಯಿಂದ ಸಾಂಪ್ರದಾಯಿಕ ‘ಹಳದಿ–ಕುಂಕುಮ’ ಕಾರ್ಯಕ್ರಮವು ಅತ್ಯಂತ ಸಡಗರದಿಂದ ಜರುಗಿತು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಪದ್ಮಾವತಿ ಬಿ. ಶೆಟ್ಟಿ, ಸಂಚಾಲಕಿ ಶ್ರೀಮತಿ ಶಾಂತಾ ಭಟ್ ಹಾಗೂ ಕೋಶಾಧಿಕಾರಿ ಶ್ರೀಮತಿ ರಾಜೀವಿ ಕೋಟ್ಯಾನ್ ಅವರ ನೇತೃತ್ವದಲ್ಲಿ ಈ ಸಂಭ್ರಮಕ್ಕೆ ಚಾಲನೆ ನೀಡಲಾಯಿತು.
- ಮಧ್ಯಾಹ್ನ 3:30ರಿಂದ ಸಂಜೆ 4:30ರವರೆಗೆ ಭಜನೆ-ಕೀರ್ತನೆಗಳೊಂದಿಗೆ ಶ್ರೀ ಲಲಿತಾಂಬೆ ದೇವಿಯ ಸಹಸ್ರನಾಮ ಅರ್ಚನೆ ಮಾಡಲಾಯಿತು. ಭಕ್ತಿಯಿಂದ ಪೂಜೆ ಸಲ್ಲಿಸಿ ಆರಾಧ್ಯ ದೇವಿಯ ಕೃಪೆಗೆ ಪಾತ್ರರಾದರು.
- ಸಂಜೆ 4:30ರ ನಂತರ ಔಪಚಾರಿಕವಾಗಿ ಹಳದಿ–ಕುಂಕುಮ ಕಾರ್ಯಕ್ರಮ ಪ್ರಾರಂಭವಾಯಿತು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಕಾರ್ಯಾಧ್ಯಕ್ಷೆ ಪದ್ಮಾವತಿ ಬಿ. ಶೆಟ್ಟಿಯವರು, “ಕುಂಕುಮವು ಮಹಿಳೆಯರ ಸೌಭಾಗ್ಯದ ಸಂಕೇತವಾದರೆ, ಹಳದಿಯು ಆರೋಗ್ಯದ ಸಂಕೇತವಾಗಿದೆ. ಮಕರ ಸಂಕ್ರಾಂತಿಯ ಈ ಚಳಿಗಾಲದ ಸಮಯದಲ್ಲಿ ಎಳ್ಳು-ಬೆಲ್ಲ ಸೇವನೆಯು ಮಾನವನ ದೇಹದಲ್ಲಿ ಶಕ್ತಿಯನ್ನು ವೃದ್ಧಿಸುತ್ತದೆ” ಎಂದು ಇದರ ಮಹತ್ವವನ್ನು ತಿಳಿಸಿದರು.
ಸಂಚಾಲಕಿ ಶಾಂತಾ ಭಟ್ ಅವರು ಮಾತನಾಡಿ, “ಬಳಗದಲ್ಲಿ ಪ್ರತಿ ವರ್ಷವೂ ನಡೆಯುವ ಈ ಕಾರ್ಯಕ್ರಮವು ಮಹಿಳೆಯರ ಸ್ನೇಹ ಮತ್ತು ಒಗ್ಗಟ್ಟಿನ ಪ್ರತೀಕವಾಗಿದೆ. ನಮ್ಮ ಬಳಗವು ಇದೇ ರೀತಿ ಆದರ್ಶ ಸಂಘವಾಗಿ ಬೆಳೆಯಲಿ,” ಎಂದು ಶುಭ ಹಾರೈಸಿದರು.
ಈ ಕಾರ್ಯಕ್ರಮದ ಯಶಸ್ಸಿಗೆ ಜೊತೆ ಕೋಶಾಧಿಕಾರಿ ರಶ್ಮಿ ಆಚಾರ್ಯ, ಹಾಗೂ ಪದಾಧಿಕಾರಿಗಳಾದ ಪದ್ಮಾವತಿ ನಾಯಕ್, ವಿಜಯಲಕ್ಷ್ಮಿ ಶೆಟ್ಟಿ, ಯಮುನಾ ಸಾಲಿಯನ್, ಉಷಾ ಆಚಾರ್ಯ, ಮಾಲತಿ ಸಾಲಿಯನ್, ರಾಜಕುಮಾರಿ ಶೆಟ್ಟಿ, ನಿರ್ಮಲಾ ಶೆಟ್ಟಿ ಮತ್ತು ಅಮೃತಾ ಕನ್ನರ್ಪಾಡಿ ಅವರು ಸಕ್ರಿಯವಾಗಿ ಸಹಕರಿಸಿದರು. ಆಗಮಿಸಿದ ಮಹಿಳೆಯರಿಗೆ ಹಳದಿ-ಕುಂಕುಮ ಹಚ್ಚಿ, ಸ್ನೇಹದ ಸಂಕೇತವಾಗಿ ಉಡುಗೊರೆಗಳನ್ನು ವಿತರಿಸಿ ಸಂಭ್ರಮ ಹಂಚಿಕೊಂಡರು.
ಅಲ್ಲದೆ, ಸುನಿತಾ ಕಾವೂರು, ಲೀಲಾ ಶೆಟ್ಟಿ ಹಾಗೂ ಶೋಭಾ ಪೂಜಾರಿ ಅವರು ಕಾರ್ಯಕ್ರಮದ ನಿರ್ವಹಣೆಯಲ್ಲಿ ಸಾಥ್ ನೀಡಿದರು. ಸಂಘದ ಅಧ್ಯಕ್ಷರಾದ ರವೀಂದ್ರ ಶೆಟ್ಟಿ ಹಾಗೂ ಗೌರವ ಕಾರ್ಯದರ್ಶಿ ಪ್ರಕಾಶ್ ಕೋಟ್ಯಾನ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಆಗಮಿಸಿದ ಸರ್ವರಿಗೂ ಲಘು ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು.




