
ಕಾಪು: ಇಲ್ಲಿನ ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಉಚ್ಚಂಗೀ ಸಹಿತ ಶ್ರೀ ಮಾರಿಯಮ್ಮ ದೇವಿಯ ಪ್ರಥಮ ಪ್ರತಿಷ್ಠಾ ವರ್ಧಂತ್ಯುತ್ಸವದ ಅಂಗವಾಗಿ ಆಯೋಜಿಸಲಾಗಿರುವ ಮೂರು ದಿನಗಳ ‘ಮಾತೃ ವೈಭವ ಉತ್ಸವ’ಕ್ಕೆ ಗುರುವಾರ ಅದ್ಧೂರಿ ಚಾಲನೆ ದೊರೆಯಿತು. ಉತ್ಸವದ ಪ್ರಯುಕ್ತ ನಡೆದ ಬೃಹತ್ ‘ಹಸಿರುವಾಣಿ ಹೊರೆಕಾಣಿಕೆ’ ಶೋಭಾಯಾತ್ರೆಯು ಭಕ್ತರ ಸಾಗರದೊಂದಿಗೆ ಭಕ್ತಿಭಾವದಿಂದ ಸಂಪನ್ನಗೊಂಡಿತು.
ದಂಡತೀರ್ಥದಿಂದ ಮಾರಿಗುಡಿಯವರೆಗೆ ಶೋಭಾಯಾತ್ರೆ
ಮೆರವಣಿಗೆಯ ಆರಂಭಕ್ಕೂ ಮುನ್ನ ಕಾಪು ದಂಡತೀರ್ಥ ಮಠದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ಹೊರೆಕಾಣಿಕೆ ಮೆರವಣಿಗೆ ಸಮಿತಿಯ ಅಧ್ಯಕ್ಷ ಐಕಳಬಾವ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ಅವರ ನೇತೃತ್ವದಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಉಳಿಯಾರಗೋಳಿ ದಂಡತೀರ್ಥ ಬಳಿಯಿಂದ ಮೆರವಣಿಗೆಗೆ ಚಾಲನೆ ನೀಡಲಾಯಿತು. ಪೊಲಿಪು ಜಂಕ್ಷನ್ ಮೂಲಕ ಕಾಪು ಪೇಟೆಯನ್ನು ಹಾದುಬಂದ ಶೋಭಾಯಾತ್ರೆಯು ಅಂತಿಮವಾಗಿ ದೇವಸ್ಥಾನದ ಸಂಕೀರ್ಣವನ್ನು ತಲುಪಿತು.

ಶೋಭಾಯಾತ್ರೆಗೆ ಡೋಲು, ಚೆಂಡೆ, ಕೊಂಬು-ಕಹಳೆ, ವಾದ್ಯಗೋಷ್ಠಿ ಮತ್ತು ಬ್ಯಾಂಡ್ ಸೆಟ್ಗಳು ಗಾಂಭೀರ್ಯ ತುಂಬಿದವು. ಕೀಲು ಕುದುರೆ, ಹಾಸ್ಯ ಗೊಂಬೆಗಳು ಹಾಗೂ ರಕ್ಕಸ ಗೊಂಬೆಗಳ ಸಹಿತ ವಿವಿಧ ಕಲಾತಂಡಗಳು ಮತ್ತು ಆಕರ್ಷಕ ಟ್ಯಾಬ್ಲೋಗಳು ಮೆರವಣಿಗೆಯ ರಂಗನ್ನು ಹೆಚ್ಚಿಸಿದವು. ಸುಮಾರು 50ಕ್ಕೂ ಅಧಿಕ ವಾಹನಗಳಲ್ಲಿ ಭಕ್ತರು ಶ್ರದ್ಧಾಭಕ್ತಿಯಿಂದ ಹೊರೆಕಾಣಿಕೆಯನ್ನು ಅರ್ಪಿಸಿದರು.
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಅಭಿವೃದ್ಧಿ ಸಮಿತಿ ಹಾಗೂ ಮಾತೃ ವೈಭವ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ, ಕಾರ್ಯನಿರ್ವಹಣಾಧಿಕಾರಿ ರವಿ ಕಿರಣ್ ಹಾಗೂ ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ಮನೋಹರ ಎಸ್. ಶೆಟ್ಟಿ ಪಾಲ್ಗೊಂಡಿದ್ದರು.

ಸಮಿತಿಯ ಪ್ರಮುಖರಾದ ರಮೇಶ್ ಹೆಗ್ಡೆ ಕಲ್ಯ, ಯೋಗೀಶ್ ಶೆಟ್ಟಿ ಬಾಲಾಜಿ, ದೇವಸ್ಥಾನದ ಟ್ರಸ್ಟಿಗಳಾದ ಮಾಧವ ಆರ್. ಪಾಲನ್, ಶೇಖರ್ ಸಾಲ್ಯಾನ್, ಮನೋಹರ ರಾವ್, ರವೀಂದ್ರ ಮಲ್ಲಾರು, ಜಯಲಕ್ಷ್ಮೀ ಎಸ್. ಶೆಟ್ಟಿ, ಚರಿತಾ ದೇವಾಡಿಗ ಉಪಸ್ಥಿತರಿದ್ದರು.
ಅಲ್ಲದೆ, ಮುಖಂಡರಾದ ಕಾಪು ದಿವಾಕರ ಶೆಟ್ಟಿ, ಸುಪ್ರಸಾದ್ ಶೆಟ್ಟಿ ಬೈಕಾಡಿ, ಭಗವಾನ್ ದಾಸ್ ಶೆಟ್ಟಿಗಾರ್, ಪ್ರಭಾಕರ ಪೂಜಾರಿ, ಶ್ರೀಕರ ಶೆಟ್ಟಿ ಕಲ್ಯ, ರಮೇಶ್ ಶೆಟ್ಟಿ ಕೊಲ್ಯ, ನಿರ್ಮಲ್ ಕುಮಾರ್ ಹೆಗ್ಡೆ, ವಿ.ಜಿ. ಶೆಟ್ಟಿ, ಡಾ. ಪ್ರಶಾಂತ್ ಶೆಟ್ಟಿ, ಸುಧಾಕರ ಶೆಟ್ಟಿ ಮಕರ, ರಘುರಾಮ ಶೆಟ್ಟಿ, ಸುನೀಲ್ ಪೂಜಾರಿ, ತುಳಸಿ ನಾರಾಯಣ್, ಮಮತಾ ಶೆಟ್ಟಿ, ಗೀತಾಂಜಲಿ ಎಂ. ಸುವರ್ಣ, ಸಾವಿತ್ರಿ ಗಣೇಶ್ ಸೇರಿದಂತೆ ಸಾವಿರಾರು ಭಕ್ತಾದಿಗಳು ಈ ವೈಭವದ ಕ್ಷಣಕ್ಕೆ ಸಾಕ್ಷಿಯಾದರು.




