34 C
Mumbai
March 6, 2026
Mumbai News Kannada
ಮುಂಬಯಿ

ಗೊರೆಗಾಂವ್ ಕರ್ನಾಟಕ ಸಂಘದ 67ನೇ ನಾಡಹಬ್ಬ ಹಾಗೂ ವಿಚಾರಗೋಷ್ಠಿ ಸಮಾರಂಭಕ್ಕೆ ಚಾಲನೆ,





ಭಾಷೆ, ಸಂಸ್ಕೃತಿ ಉಳಿಸುವಲ್ಲಿ ಗೋರೆಗಾಂವ್ ಕರ್ನಾಟಕ ಸಂಘದ ಸೇವೆ ಅನನ್ಯ: ಡಾ. ದಿವಾಕರ ಶೆಟ್ಟಿ ಇಂದ್ರಾಳಿ

ಚಿತ್ರ ವರದಿ: ದಿನೇಶ್ ಕುಲಾಲ್

ಮುಂಬಯಿ: “ಕನ್ನಡಿಗರಾದ ನಾವು ನಮ್ಮ ಭಾಷೆಯನ್ನು ಉಳಿಸಿ ಬೆಳೆಸುವಲ್ಲಿ ಸದಾ ಕಾರ್ಯನಿರತರಾಗಿರಬೇಕು. ಈ ನಿಟ್ಟಿನಲ್ಲಿ ಗೋರೆಗಾಂವ್ ಕರ್ನಾಟಕ ಸಂಘವು ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸುವಲ್ಲಿ ಅವಿಸ್ಮರಣೀಯ ಸೇವೆ ಸಲ್ಲಿಸುತ್ತಿದೆ,” ಎಂದು ಡೊಂಬಿವಲಿ ಕರ್ನಾಟಕ ಸಂಘದ ಅಧ್ಯಕ್ಷ ಡಾ. ದಿವಾಕರ ಶೆಟ್ಟಿ ಇಂದ್ರಾಳಿ ಶ್ಲಾಘಿಸಿದರು.

​ಮಲಾಡ್ ಪಶ್ಚಿಮದ ಸುಂದರ ನಗರದಲ್ಲಿರುವ ಡಿ.ಜಿ. ಕೇತನ್ ಇಂಟರ್ನ್ಯಾಷನಲ್ ಸ್ಕೂಲ್ ಸಭಾಗೃಹದಲ್ಲಿ ಭಾನುವಾರ (ಮಾರ್ಚ್ 1) ಜರುಗಿದ ಗೋರೆಗಾಂವ್ ಕರ್ನಾಟಕ ಸಂಘದ 67ನೆಯ ನಾಡಹಬ್ಬ ಹಾಗೂ ವಿಚಾರಗೋಷ್ಠಿ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.

​”ದೇಶ-ವಿದೇಶಗಳಲ್ಲಿರುವ ಕನ್ನಡಿಗರು ಎಲ್ಲೇ ಇದ್ದರೂ ಕನ್ನಡವನ್ನು ಮರೆಯಬಾರದು. ಕನ್ನಡವನ್ನು ಉಳಿಸುವುದು ನಮ್ಮ ಮುಖ್ಯ ಗುರಿಯಾಗಲಿ. ನಮ್ಮ ಭಾಷೆಯನ್ನು ಪ್ರೀತಿಸುವುದರ ಜೊತೆಗೆ ಇತರ ಭಾಷೆಗಳನ್ನೂ ಗೌರವಿಸೋಣ,” ಎಂದ ಅವರು ಸಂಘದ ಚಟುವಟಿಕೆಗಳಿಗೆ ತಮ್ಮ ಸದಾಕಾಲದ ಬೆಂಬಲವನ್ನು ಘೋಷಿಸಿದರು.

ಮುಂಬೆಳಕು ಸಂಚಿಕೆ ಬಿಡುಗಡೆ:

ಸಂಘದ ಅಧ್ಯಕ್ಷ ವಿಶ್ವನಾಥ ಕೆ. ಶೆಟ್ಟಿ ಅವರು ಸಂಘದ ಮುಖವಾಣಿ ‘ಮುಂಬೆಳಕು’ ವಾರ್ಷಿಕ ಸಂಚಿಕೆಯನ್ನು ಗಣ್ಯರ ಸಮ್ಮುಖದಲ್ಲಿ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಸಂಘದ ಕಾರ್ಯಾಲಯವು ಪುನರ್ನಿರ್ಮಾಣದ ಹಂತದಲ್ಲಿದೆ. ಯಾವುದೇ ಖಾಯಂ ಆದಾಯವಿಲ್ಲದ ಕಾರಣ ನಮಗೆ ದಾನಿಗಳ ನೆರವು ಅನಿವಾರ್ಯವಾಗಿದೆ. ಸಂಘದ ಏಳಿಗೆಗೆ ಶ್ರಮಿಸುತ್ತಿರುವ ಸರ್ವ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಸೇವೆ ಶ್ಲಾಘನೀಯ,” ಎಂದರು.

ವಿಚಾರಗೋಷ್ಠಿ:

ಪತ್ರಕರ್ತ ದಯಾಸಾಗರ್ ಚೌಟ ಅವರ ಅಧ್ಯಕ್ಷತೆಯಲ್ಲಿ ವಿಚಾರಗೋಷ್ಠಿ ನಡೆಯಿತು. ‘ಸಾಮಾಜಿಕ ಹಾಗೂ ಶೈಕ್ಷಣಿಕ ನೆಲೆಯಲ್ಲಿ ಕನ್ನಡಿಗರ ಕೊಡುಗೆ’ ಕುರಿತು ಅಮೃತಾ ಎ. ಶೆಟ್ಟಿ ಮತ್ತು ‘ಧಾರ್ಮಿಕ ಹಾಗೂ ಸಾಂಸ್ಕೃತಿಕ ನೆಲೆಯಲ್ಲಿ ಕನ್ನಡಿಗರ ಕೊಡುಗೆ’ ಬಗ್ಗೆ ಜಿ.ಟಿ. ಆಚಾರ್ಯ ಉಪನ್ಯಾಸ ನೀಡಿದರು.

ಸಂಸ್ಕೃತಿ ಸಂರಕ್ಷಣೆ ನಮ್ಮ ಹೊಣೆ:

ಕಾರ್ಯಕ್ರಮ ಉದ್ಘಾಟಿಸಿದ ಸಮಾಜ ಸೇವಕ ಸತೀಶ್ ಶೆಟ್ಟಿ ಕೊಟ್ರಪಾಡಿ ಮಾತನಾಡಿ, “ಸಂಘವು ಭಾಷೆಯ ಜೊತೆಗೆ ಧರ್ಮ ಮತ್ತು ಸಂಸ್ಕೃತಿಯನ್ನು ಉಳಿಸುವ ಕಾರ್ಯ ಮಾಡುತ್ತಿದೆ. ಇಂತಹ ಕನ್ನಡ ಪರ ಕಾರ್ಯಕ್ರಮಗಳು ತುಳು-ಕನ್ನಡಿಗರನ್ನು ಒಂದುಗೂಡಿಸುತ್ತವೆ,” ಎಂದು ಹಾರೈಸಿದರು. ಗೌರವ ಅತಿಥಿ ಥಾಣೆ ಬಂಟ್ಸ್ ಅಸೋಷಿಯೇಶನ್ ಉಪಾಧ್ಯಕ್ಷ ಚಂದ್ರಶೇಖರ ಎಸ್. ಶೆಟ್ಟಿ ಮಾತನಾಡಿ, ಮಕ್ಕಳನ್ನು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗಿಸುವ ಅಗತ್ಯವನ್ನು ಪ್ರತಿಪಾದಿಸಿದರು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷೆ ಸರಿತಾ ನಾಯಕ್, ಪ್ರಧಾನ ಕಾರ್ಯದರ್ಶಿ ಶಾಂತಾ ಎನ್. ಶೆಟ್ಟಿ, ಜೊತೆ ಕೋಶಾಧಿಕಾರಿ ಉಷಾ ಶೆಟ್ಟಿ, ಪಾರುಪತ್ಯಗಾರರಾದ ದೇವಲ್ಕುಂದ ಭಾಸ್ಕರ್ ಶೆಟ್ಟಿ, ನಾರಾಯಣ ಮೆಂಡನ್ ಉಪಸ್ಥಿತರಿದ್ದರು.

​ಸುಗುಣ ಬಂಗೇರ, ಸಹನಿ ವಿ. ಶೆಟ್ಟಿ, ಪೇಟೆಮನೆ ಪ್ರಕಾಶ್ ಶೆಟ್ಟಿ, ಮೇರಿ ಲಿಲ್ಲಿ ಡಿ. ಸೋಜಾ, ಲೀಲಾ ಗಣೇಶ್ ಹಾಗೂ ಶೈಲಾ ನಾಯಕ್ ಅತಿಥಿಗಳನ್ನು ಪರಿಚಯಿಸಿದರು. ಪ್ರಮೀಳಾ ಆಚಾರ್ಯ ಮತ್ತು ತಂಡದವರು ಸ್ವಾಗತ ಗೀತೆ ಹಾಡಿದರು. ಸೀಮಾ ಕುಲಕರ್ಣಿ ತಂಡದವರಿಂದ ಉದ್ಘಾಟನಾ ಗೀತೆ ಹಾಗೂ ಪ್ರಾರ್ಥನೆ ನೆರವೇರಿತು. ಶಾಂತಾ ಎನ್. ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರೆ, ಸಹನಿ ವಿ. ಶೆಟ್ಟಿ ವಂದಿಸಿದರು.

​ಸಂಜೆ ನಡೆದ ಸಾಂಸ್ಕೃತಿಕ ವೈವಿಧ್ಯದಲ್ಲಿ ಸಂಘದ ಮಹಿಳಾ ಸದಸ್ಯರು, ದೇವಾಡಿಗ ಸಂಘ ಮುಂಬಯಿ ಹಾಗೂ ಕರ್ನಾಟಕ ವಿಶ್ವಕರ್ಮ ಅಸೋಷಿಯೇಶನ್ ಮಹಿಳಾ ಘಟಕದ ಸದಸ್ಯರಿಂದ ವಿವಿಧ ಪ್ರದರ್ಶನಗಳು ಜರುಗಿದವು. ಬಾಲಕೃಷ್ಣ ಬಂಗೇರ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.



Related posts

ಭಾರತ್ ಬ್ಯಾಂಕ್‌ನ ಗೋರೆಗಾಂವ್ ಪಶ್ಚಿಮ ಶಾಖೆಯಲ್ಲಿ 47ನೇ ಸಂಸ್ಥಾಪನಾ ದಿನಾಚರಣೆ

Mumbai News Desk

ಡೊಂಬಿವಲಿ ಶ್ರೀ ಜಗದಂಬಾ ಮಂದಿರದಲ್ಲಿ ಮಹಾಶಿವರಾತ್ರಿ ಉತ್ಸವ

Mumbai News Desk

ಶ್ರೀ ಮಹಾ ವಿಷ್ಣು ಮಂದಿರ ಡೊಂಬಿವಲಿ, ಇದರ ಮಹಿಳಾ ವಿಭಾಗದ ವತಿಯಿಂದ ಅರಸಿನ ಕುಂಕುಮ ಕಾರ್ಯಕ್ರಮ

Mumbai News Desk

“ಅಂಬರ್ನಾಥ್ ಗೋಪಾಲ್ ಪೂಜಾರಿ” ಯವರಿಗೆ ಬಿಲ್ಲವರ ಅಸೋಸಿಯೇಷನ್, ಡೊಂಬಿವಲಿ ಸ್ಥಳೀಯ ಕಚೇರಿಯ ವತಿಯಿಂದ ಸನ್ಮಾನ

Mumbai News Desk

ಮದರ್ ಇಂಡಿಯಾ ದ ಶೈಕ್ಷಣಿಕ ಮತ್ತು ಸಾಮಾಜಿಕ ಸೇವೆ ನಿರಂತರವಾಗಿರಲಿ -ಸುರೇಂದ್ರ ಪೂಜಾರಿ ಮುಂಬೈ :

Mumbai News Desk

ಭಾರತ್ ಬ್ಯಾಂಕ್ ಇದರ ಭಾಯಂದರ್ ಶಾಖಾ ಪ್ರಭಂದಕರಾದ ಪ್ರವೀಣ್ ಎಂ. ಬಂಗೇರ ಸೇವಾ ನಿವೃತಿ

Mumbai News Desk