
ಮುಂಬಯಿ: ಪ್ರತಿಷ್ಠಿತ ವಿಜಯ ಕಾಲೇಜು ಮೂಲ್ಕಿ ಜಾಗತಿಕ ಹಳೆ ವಿದ್ಯಾರ್ಥಿ ಸಂಘ, ಮುಂಬಯಿ ಘಟಕದ ವತಿಯಿಂದ ಈ ವರ್ಷದ ವಾರ್ಷಿಕ ಸ್ನೇಹ ಸಮ್ಮೇಳನ, ಗುರುವಂದನೆ ಹಾಗೂ ಸಾಧಕ ಪುರಸ್ಕಾರ ಸಮಾರಂಭವು ಇದೇ ಮಾರ್ಚ್ 7ರ ಶನಿವಾರ ಸಂಜೆ 5:00 ಗಂಟೆಗೆ ಅಂಧೇರಿ ಪೂರ್ವದ ಸಾಕಿನಾಕದಲ್ಲಿರುವ ‘ಪೆನಿನ್ಸುಲಾ ಗ್ರಾಂಡ್ ಹೋಟೆಲ್’ನಲ್ಲಿ ಅದ್ದೂರಿಯಾಗಿ ಜರುಗಲಿದೆ.

ವಿಜಯ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿ ಪ್ರಸ್ತುತ ವಿಶ್ವದ ವಿವಿಧೆಡೆ ನೆಲೆಸಿರುವ ಹಳೆ ವಿದ್ಯಾರ್ಥಿಗಳು ಈ ಸಮಗಮದಲ್ಲಿ ಭಾಗಿಯಾಗಲಿದ್ದಾರೆ. ಸಂಘವು ತನ್ನ ಸಾಮಾಜಿಕ ಬದ್ಧತೆಯ ಭಾಗವಾಗಿ ಪ್ರತಿವರ್ಷ ಕಾಲೇಜಿನ 50ಕ್ಕೂ ಹೆಚ್ಚು ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುತ್ತಾ ಬಂದಿದ್ದು, ಈ ಬಾರಿಯೂ ಕಾರ್ಯಕ್ರಮದಲ್ಲಿ ಶಿಕ್ಷಣಕ್ಕೆ ಒತ್ತು ನೀಡಲಿದೆ.

ಗುರುವಂದನೆ ಮತ್ತು ಸಾಧಕ ಪುರಸ್ಕಾರ:
ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪ್ರೊ. ಪಾರ್ವತಿ ಅಮ್ಮ ಮತ್ತು ಪ್ರೊ. ಜಿ. ಎಸ್. ಹೆಗ್ಡೆ ಅವರು ಈ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿಗಳಿಂದ ‘ಗುರುವಂದನೆ’ ಸ್ವೀಕರಿಸಲಿದ್ದಾರೆ. ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ಹಳೆ ವಿದ್ಯಾರ್ಥಿಗಳಾದ ಸಿ.ಎ. ಸದಾಶಿವ ಶೆಟ್ಟಿ (ಕಬೇತಿಗುತ್ತು, ಮೂಲ್ಕಿ), ರಾಜಕುಮಾರ್ ಕಾರ್ನಾಡು ಮತ್ತು ವೈ. ಟಿ. ಶೆಟ್ಟಿ ಅವರಿಗೆ ‘ವಿಶೇಷ ಸಾಧಕ ಪುರಸ್ಕಾರ’ ನೀಡಿ ಗೌರವಿಸಲಾಗುವುದು. ಅಲ್ಲದೆ, ಹಳೆ ವಿದ್ಯಾರ್ಥಿಗಳ ಮಕ್ಕಳ ಹಾಗೂ ಮೊಮ್ಮಕ್ಕಳ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ಸನ್ಮಾನಿಸಲಾಗುವುದು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಯ್ಯಡೆ ಹೋಟೆಲ್ ಪ್ರೈವೇಟ್ ಲಿಮಿಟೆಡ್ನ ನಿರ್ದೇಶಕ ಹಾಗೂ ಮುಂಬಯಿ ಕ್ರಿಕೆಟ್ ಅಸೋಸಿಯೇಷನ್ನ ಮಾಜಿ ಜಂಟಿ ಕಾರ್ಯದರ್ಶಿ ಡಾ. ಪದ್ಮನಾಭ ಶೆಟ್ಟಿ ಭಾಗವಹಿಸಲಿದ್ದಾರೆ. ಗೌರವ ಅತಿಥಿಗಳಾಗಿ ವಿಜಯ ಕಾಲೇಜು ಮೂಲ್ಕಿ ಗವರ್ನಿಂಗ್ ಕೌನ್ಸಿಲ್ ಅಧ್ಯಕ್ಷ ಸುಹಾಸ್ ಹೆಗ್ಡೆ ನಂದಳಿಕೆ ಮತ್ತು ಕಾಲೇಜಿನ ಪ್ರಾಂಶುಪಾಲ ಪ್ರೊ. ವೆಂಕಟೇಶ ಭಟ್ ಉಪಸ್ಥಿತರಿರುವರು.
ಸಂಘದ ಗೌರವಾಧ್ಯಕ್ಷ ಆನಂದ ಶೆಟ್ಟಿ, ಅಧ್ಯಕ್ಷ ವಾಸುದೇವ ಸಾಲಿಯಾನ್, ಉಪಾಧ್ಯಕ್ಷ ಅಡ್ವೊಕೇಟ್ ಶೇಖರ್ ಭಂಡಾರಿ, ಕಾರ್ಯದರ್ಶಿ ಭಾಸ್ಕರ್ ಭೋಜ ಶೆಟ್ಟಿ, ಕೋಶಧಿಕಾರಿ ಸಿ.ಎ. ರೋಹಿತಾಕ್ಷ ದೇವಾಡಿಗ ಹಾಗೂ ಪದಾಧಿಕಾರಿಗಳು ಮತ್ತು ಸದಸ್ಯರು ಈ ಕಾರ್ಯಕ್ರಮಕ್ಕೆ ಸರ್ವರನ್ನು ಪ್ರೀತಿಯಿಂದ ಆಹ್ವಾನಿಸಿದ್ದಾರೆ.




