30.9 C
Mumbai
June 8, 2026
Mumbai News Kannada
ಮುಂಬಯಿ

ಮುಂಬಯಿ: ಭಾರತ್ ಕೋ-ಆಪರೇಟಿವ್ ಬ್ಯಾಂಕ್ ಫೋರ್ಟ್ ಶಾಖೆ ಸ್ಥಳಾಂತರ; ನೂತನ ಆವರಣ ಉದ್ಘಾಟನೆ





ಚಿತ್ರ: ಭಾಸ್ಕರ್ ಕಾಂಚನ್, ವರದಿ: ದಿನೇಶ್ ಕುಲಾಲ್

ಮುಂಬಯಿ: ಸಹಕಾರಿ ವಲಯದ ಮುಂಚೂಣಿ ಬ್ಯಾಂಕ್‌ಗಳಲ್ಲಿ ಒಂದಾದ ಭಾರತ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್‌ನ ಫೋರ್ಟ್ ಶಾಖೆಯು ಗನ್‌ಬೋ ಸ್ಟ್ರೀಟ್‌ನಲ್ಲಿರುವ ಬೆನಜೀರ್ ಹೌಸ್ ಪಕ್ಕದ ನೂತನ ಆವರಣಕ್ಕೆ ಸ್ಥಳಾಂತರಗೊಂಡಿದ್ದು, ಇದರ ಉದ್ಘಾಟನಾ ಸಮಾರಂಭವು ಮಾರ್ಚ್ 9ರ ಸೋಮವಾರದಂದು ಸಂಭ್ರಮದಿಂದ ನೆರವೇರಿತು.

​ಬ್ಯಾಂಕಿನ ಅಧ್ಯಕ್ಷರಾದ ಸೂರ್ಯಕಾಂತ್ ಜೆ. ಸುವರ್ಣ ಅವರು ನೂತನ ಆವರಣವನ್ನು ಉದ್ಘಾಟಿಸಿದರು. ಉಪಾಧ್ಯಕ್ಷರಾದ ಅಡ್ವೊಕೇಟ್ ಸೋಮನಾಥ್ ಬಿ. ಅಮೀನ್ ಅವರು ಎಟಿಎಂ ಕೇಂದ್ರದ ಕಾರ್ಯಾಚರಣೆಗೆ ಚಾಲನೆ ನೀಡಿದರು.

ಸಮಾರಂಭದಲ್ಲಿ ಮಾತನಾಡಿದ ಅಧ್ಯಕ್ಷ ಸೂರ್ಯಕಾಂತ್ ಜೆ. ಸುವರ್ಣ, “ಗ್ರಾಹಕರ ತೃಪ್ತಿಯೇ ಬ್ಯಾಂಕಿನ ಅತಿದೊಡ್ಡ ಶಕ್ತಿ. ‘ಗ್ರಾಹಕ ಸ್ನೇಹಿ ಬ್ಯಾಂಕ್’ ಎಂಬ ಮೂಲ ಧ್ಯೇಯಕ್ಕೆ ನಾವು ಬದ್ಧರಾಗಿದ್ದೇವೆ. ನಾವೆಲ್ಲರೂ ಒಗ್ಗೂಡಿ ಶ್ರಮಿಸುವ ಮೂಲಕ ಭಾರತ್ ಬ್ಯಾಂಕನ್ನು ದೇಶದ ಸರ್ವಶ್ರೇಷ್ಠ ಸಹಕಾರಿ ಬ್ಯಾಂಕ್ ಆಗಿ ರೂಪಿಸುತ್ತೇವೆ,” ಎಂದು ಆಶಯ ವ್ಯಕ್ತಪಡಿಸಿದರು.

ಹಿರಿಯ ಗ್ರಾಹಕ ಶ್ರೀನಿವಾಸ ಅಂಚನ್ ಮಾತನಾಡಿ, “ಕಂಪ್ಯೂಟರ್ ಸೌಲಭ್ಯಗಳಿಲ್ಲದ ಕಾಲದಲ್ಲೂ ಬ್ಯಾಂಕ್ ಸಿಬ್ಬಂದಿ ಅತ್ಯಂತ ದಕ್ಷತೆ ಮತ್ತು ಪಾರದರ್ಶಕತೆಯಿಂದ ಕಾರ್ಯನಿರ್ವಹಿಸುತ್ತಿದ್ದರು. ಅಂದಿನಿಂದ ಇಂದಿನವರೆಗೂ ಬ್ಯಾಂಕ್ ಸಿಬ್ಬಂದಿ ತೋರುತ್ತಿರುವ ಸೇವಾ ತತ್ಪರತೆ ನಿಜಕ್ಕೂ ಪ್ರಶಂಸನೀಯ,” ಎಂದರು.

​ಮತ್ತೋರ್ವ ಗ್ರಾಹಕಿ ಅರುಣಾ ಉದೇಶಿ ತಮ್ಮ ನೆನಪುಗಳನ್ನು ಹಂಚಿಕೊಳ್ಳುತ್ತಾ, “ಬಾಲ್ಯದಲ್ಲಿ ತಂದೆ ಹೇಳಿದಂತೆ ಅಂದು ನಾನು ಈ ಬ್ಯಾಂಕ್‌ನಲ್ಲಿ ಇಟ್ಟ ಹಣ ಇಂದು ಮರವಾಗಿ ಬೆಳೆದು ನಿಂತಿದೆ. ಬ್ಯಾಂಕ್ ಅಧಿಕಾರಿಗಳಾದ ಸಂದ್ಯಾ ಅವರು ನೀಡಿದ ಸಹಕಾರ ಮತ್ತು ಸಿಬ್ಬಂದಿ ವರ್ಗದ ಆತ್ಮೀಯ ಸೇವೆ ಅವಿಸ್ಮರಣೀಯ,” ಎಂದು ಬಣ್ಣಿಸಿದರು.

ನಿರ್ದೇಶಕ ಗೌರೀಶ್ ಕೋಟ್ಯಾನ್ ಮಾತನಾಡಿ, “ನೂತನ ಸ್ಥಳದಲ್ಲಿ ಶಾಖೆಯ ಆರ್ಥಿಕ ವ್ಯವಹಾರಗಳು ದ್ವಿಗುಣಗೊಳ್ಳುವುದರಲ್ಲಿ ಸಂಶಯವಿಲ್ಲ,” ಎಂದು ಹಾರೈಸಿದರು. ಸ್ಥಳದ ಮಾಲೀಕರುಗಳಾದ ನಜೀರ್ ಅಥಾನಿ ಹಾಗೂ ಜಹೀರ್ ಅಥಾನಿ ಅವರು ಮಾತನಾಡಿ, ಈ ಪ್ರದೇಶದ ಜನರಿಗೆ ಉತ್ತಮ ಸಹಕಾರಿ ಬ್ಯಾಂಕ್‌ನೊಂದಿಗೆ ವ್ಯವಹರಿಸುವ ಅವಕಾಶ ಲಭಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಬ್ಯಾಂಕಿನ ನಿರ್ದೇಶಕರುಗಳಾದ ಚಂದ್ರಶೇಖರ್ ಎಸ್. ಪೂಜಾರಿ, ಮೋಹನ್‌ದಾಸ್ ಜಿ. ಪೂಜಾರಿ, ನಿರಂಜನ ಎಲ್. ಪೂಜಾರಿ, ಸುರೇಶ್ ಬಿ. ಸುವರ್ಣ, ಗೌರೇಶ್ ಆರ್. ಕೋಟ್ಯಾನ್, ಮಾಜಿ ಕಾರ್ಯಾಧ್ಯಕ್ಷ ಡಿ.ಬಿ. ಅಮೀನ್, ಮಾಜಿ ಉಪ ಕಾರ್ಯಾಧ್ಯಕ್ಷೆ ಪುಷ್ಪಲತಾ ಎನ್. ಸಾಲಿಯನ್, ಆಡಳಿತ ನಿರ್ದೇಶಕ ವಿದ್ಯಾನಂದ್ ಎಸ್. ಕರ್ಕೇರ, ಜಂಟಿ ಆಡಳಿತ ನಿರ್ದೇಶಕ ದಿನೇಶ್ ಬಿ. ಸಾಲಿಯನ್ ಹಾಗೂ ಮಹಾಪ್ರಬಂಧಕ ಮಹೇಶ್ ಬಿ. ಕೋಟ್ಯಾನ್ ಉಪಸ್ಥಿತರಿದ್ದರು.

​ಬೆಳಿಗ್ಗೆ ಗಣಹೋಮ ಹಾಗೂ ಸತ್ಯನಾರಾಯಣ ಪೂಜೆಯನ್ನು ಪುರೋಹಿತರಾದ ರವೀಂದ್ರ ಶಾಂತಿ ನೆರವೇರಿಸಿದರು, ರಮೇಶ್ ಶಾಂತಿ ಮತ್ತು ಗೋವಿಂದ್ ಪೂಜಾರಿ ಸಹಕರಿಸಿದರು. ಐಶ್ವರ್ಯ ಮತ್ತು ನಿಖಿಲ್ ಕರ್ಕೇರ ದಂಪತಿ ಪೂಜೆಯ ಯಜಮಾನಿಕೆ ವಹಿಸಿದ್ದರು.

​ಶಾಖಾ ಪ್ರಬಂಧಕ ಪ್ರವೀಣ್ ಅಮೀನ್ ಸ್ವಾಗತಿಸಿದರು. ನಿಶಾ ಕಲ್ಲಪುತ್ತಿಗೆ ಕಾರ್ಯಕ್ರಮ ನಿರೂಪಿಸಿದರೆ, ಸಹಾಯಕ ಪ್ರಬಂಧಕಿ ಜಯಶ್ರೀ ಅಂಚನ್ ವಂದಿಸಿದರು.



Related posts

ರೈ ಸಮಿತಿ ಎಜುಕೇಶನಲ್ ಟ್ರಸ್ಟ್‌ನ ಮಲಾಡ್‌ನ ಸ್ಕಾಲರ್ ಅಕಾಡೆಮಿ ಶಾಲೆಯ ವಾರ್ಷಿಕೋತ್ಸವ

Mumbai News Desk

ಮುಂಬಯಿಯ ಚಾರ್ಕೋಪ್ ಕನ್ನಡಿಗರ ಬಳಗದಲ್ಲಿ ರಂಗೋಲಿ ಸ್ಪರ್ಧೆ

Mumbai News Desk

ಚೆಂಬೂರು ಬಸವೇಶ್ವರ ತಾತ್ವಿಕ ಹಾಗೂ ಸಾಂಸ್ಕೃತಿಕ ಸಂಸ್ಥೆ ದತ್ತಿ ಉಪನ್ಯಾಸ, ಸಂಸ್ಕಾರದಿಂದಲೇ ಸಂಸ್ಕೃತಿಯ ಪ್ರಗತಿ- ಡಾ. ಭರತ್ ಕುಮಾರ್ ಪೊಲಿಪು

Mumbai News Desk

ಬಾಂಬೆ ಬಂಟ್ಸ್ ಅಸೋಸಿಯೇಶನ್ ಉನ್ನತ ಶಿಕ್ಷಣ ಸಂಸ್ಥೆಯ 11 ನೇ ವಾರ್ಷಿಕೋತ್ಸವ ಸಂಭ್ರಮ.

Mumbai News Desk

ತುಳುನಾಡ ಸೇವಾ ಸಮಾಜ ಮೀರಾ ಭಾಯಂದರ್ -ಹಳದಿಕುಂಕುಮ, ವಿಶ್ವ ಮಹಿಳಾ ದಿನಾಚರಣೆ ಹಾಗೂ ಸಂಸ್ಥಾಪಕ ದಿನಾಚರಣೆ.

Mumbai News Desk

ಸಮಾಜ ಸೇವಕ ಡಾ. ಪಿ.ವಿ. ಶೆಟ್ಟಿಗೆ ಕರ್ನಾಟಕ ಸಂಘ ಮುಂಬಯಿ ಗೌರವಾರ್ಪಣೆ

Mumbai News Desk