
ಉಡುಪಿ ತೋನ್ಸೆಯ ಶ್ರೀ ಬ್ರಹ್ಮ ಬೈದರ್ಕಳ ಪಂಚ ಧೂಮಾವತಿ ಗರೋಡಿಯ ಸಂಪೂರ್ಣ ಪುನರ್ ನವೀಕರಣದ ಅಂಗವಾಗಿ ಆಯೋಜಿಸಲಾಗಿದ್ದ ಶಿಲಾನ್ಯಾಸ ಮತ್ತು ಮೃತ್ತಿಕಾ ಪೂಜಾ ಕಾರ್ಯಕ್ರಮವು ಏಪ್ರಿಲ್ 1ರ ಬುಧವಾರದಂದು ಅತ್ಯಂತ ಭಕ್ತಿ ಸೌರಭದೊಂದಿಗೆ ಸಂಪನ್ನಗೊಂಡಿತು.
ಪುತ್ತೂರು ಶ್ರೀನಿವಾಸ ತಂತ್ರಿಗಳ ನೇತೃತ್ವದಲ್ಲಿ ಹಾಗೂ ವಾಸ್ತು ತಜ್ಞ ಗುಂಡಿಬೈಲು ಸುಬ್ರಹ್ಮಣ್ಯ ಭಟ್ ಅವರ ಮಾರ್ಗದರ್ಶನದಲ್ಲಿ, ಬೆಳಿಗ್ಗೆ ಒದಗಿದ ವೃಷಭ ಲಗ್ನ ಶುಭ ಮುಹೂರ್ತದಲ್ಲಿ ಗರಡಿಯ ನವೀಕರಣ ಕಾರ್ಯಕ್ಕೆ ಶಿಲಾನ್ಯಾಸ ನೆರವೇರಿಸಿ, ಮುಷ್ಟಿ ಕಾಣಿಕೆ ಸಮರ್ಪಿಸಲಾಯಿತು.

ಈ ಸಂದರ್ಭದಲ್ಲಿ ಮುಂಬೈಯ ಉದ್ಯಮಿಗಳು, ಸಂಘಟಕರುಗಳು, ಶಾಸಕರು, ಊರಿನ ರಾಜಕೀಯ, ಧಾರ್ಮಿಕ ಮುಂದಾಳುಗಳು, ಸಮಾಜದ ಗಣ್ಯರು, ಜೀರ್ಣೋದ್ಧಾರ ಸಮಿತಿಯ ಗೌರವ ಅಧ್ಯಕ್ಷರು, ಅಧ್ಯಕ್ಷರು ಮತ್ತು ಸರ್ವ ಸದಸ್ಯರು, ನಾಲ್ಕು ಕರೆ ಗುರಿಕಾರರು ಮತ್ತು ಗುರಿಕಾರರು, ಆಡಳಿತ ಮಂಡಳಿಯ ಅಧ್ಯಕ್ಷರು ಮತ್ತು ಸದಸ್ಯರು, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು, ಗರೋಡಿ ಸೇವಾ ಟ್ರಸ್ಟ್ ಮುಂಬೈಯ ಅಧ್ಯಕ್ಷರು ಮತ್ತು ಸದಸ್ಯರು, ಮಹಿಳಾ ಘಟಕದ ಅಧ್ಯಕ್ಷರು ಮತ್ತು ಸದಸ್ಯರು, ಅರ್ಚಕರು,ಕ್ಷೇತ್ರದ ಭಕ್ತರು, ತೋನ್ಸೆ ಗ್ರಾಮಸ್ಥರು ಉಪಸ್ಥಿತರಿದ್ದರು.

ತೋನ್ಸೆ ಗ್ರಾಮದ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಸಂಕೇತವಾಗಿರುವ ಈ ಗರೋಡಿಯು, ಊರ-ಪರವೂರ ಭಕ್ತಾದಿಗಳ ಸಹಕಾರ ಹಾಗೂ ದೈವದ ಸಂಕಲ್ಪದಂತೆ ಶೀಘ್ರದಲ್ಲೇ ನವ ಕಳೆಯನ್ನು ಪಡೆದು ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಶಕ್ತಿ ಕೇಂದ್ರವಾಗಿ ಪುನರ್ ಪ್ರತಿಷ್ಠಾಪನೆಗೊಳ್ಳಲಿ ಎಂಬ ಆಶಯದೊಂದಿಗೆ ಶಿಲಾನ್ಯಾಸ ಕಾರ್ಯಕ್ರಮವು ಸಂಪನ್ನಗೊಂಡಿತು.

ಸಮಾಜದ ಗಣ್ಯರ ಉಪಸ್ಥಿತಿ ಹಾಗೂ ಭಕ್ತರ ಅಪಾರ ಸೌರಭದ ನಡುವೆ ಜರುಗಿದ ಈ ಶಿಲಾನ್ಯಾಸ ಕಾರ್ಯಕ್ರಮವು, ತೋನ್ಸೆ ಗರೋಡಿಯ ಇತಿಹಾಸದಲ್ಲಿ ಒಂದು ಸುವರ್ಣ ಅಧ್ಯಾಯಕ್ಕೆ ಮುನ್ನುಡಿ ಬರೆದಂತಾಗಿದೆ. ಮುಂಬರುವ ದಿನಗಳಲ್ಲಿ ಜೀರ್ಣೋದ್ಧಾರ ಕಾರ್ಯವು ಸಕಲ ವಿಧಿವಿಧಾನಗಳೊಂದಿಗೆ ಯಶಸ್ವಿಯಾಗಿ ನೆರವೇರಲು ಈ ಕಾರ್ಯಕ್ರಮವು ದೈವೀ ಪ್ರೇರಣೆಯನ್ನು ನೀಡಿದೆ.




