ಕಾಪು ತುಳು ರಂಗಭೂಮಿಯ ಹಿರಿಯ ಕಲಾವಿದ ಹಾಗೂ ಕಾಪು ರಂಗತರಂಗ ತಂಡದ ಸ್ಥಾಪಕ ಸದಸ್ಯ ಸುಜಿತ್ ಶೆಟ್ಟಿ ಪಾದೂರು (54) ಅವರು ಏಪ್ರಿಲ್ 3ರಂದು ನಿಧನರಾದರು. ಸುಜಿತ್ ಶೆಟ್ಟಿ ಅವರು ರಂಗಭೂಮಿಯಲ್ಲಿ ಹಾಸ್ಯ ಮತ್ತು ಸಾಮಾಜಿಕ ಕಳಕಳಿಯ ಪಾತ್ರಗಳ ಮೂಲಕ ಪ್ರೇಕ್ಷಕರ ಅಪಾರ ಪ್ರೀತಿ ಗಳಿಸಿದ್ದರು. ಕೆ. ಲೀಲಾಧರ ಶೆಟ್ಟಿ ಅವರ ನೇತೃತ್ವದ ಕಾಪು ರಂಗತರಂಗ ತಂಡದ ಆರಂಭದ ದಿನಗಳಿಂದಲೂ ಸಕ್ರಿಯರಾಗಿದ್ದ ಇವರು, ತಂಡದ ಸಂಘಟನಾತ್ಮಕ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದರು. ಕಳೆದ ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ನಟನೆಯಿಂದ ದೂರ ಉಳಿದಿದ್ದರು.
ಅವರ ನಿಧನಕ್ಕೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ, ಪ್ರಮುಖರಾದ ಕೆ. ವಾಸುದೇವ ಶೆಟ್ಟಿ, ಮನೋಹರ ಎಸ್. ಶೆಟ್ಟಿ, ನಡಿಕೆರೆ ರತ್ನಾಕರ ಶೆಟ್ಟಿ ಹಾಗೂ ಕಾಪು ರಂಗತರಂಗ ಮತ್ತು ತುಳು ರಂಗಭೂಮಿಯ ಕಲಾವಿದರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರು ಪತ್ನಿ, ಕಾಪು ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ ಶಶಿಪ್ರಭಾ ಶೆಟ್ಟಿ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.




