
ಚಿತ್ರ ವರದಿ: ದಿನೇಶ್
ಮುಂಬಯಿ, ಏ. 3: ರಾಮಾಭಿವಂದ್ಯಾ ಯಕ್ಷ ಸೇವಾ ಬಳಗ ಮತ್ತು ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಂಯುಕ್ತ ಆಯೋಜನೆಯಲ್ಲಿ, ಸರಣಿ ತಾಳಮದ್ದಲೆಯ 4ನೇ ಕಂತು ‘ಭರತಾಗಮನ’ ಎಂಬ ಕಥಾಭಾಗವು ಮಾರ್ಚ್ 26ರ ರಾಮನವಮಿಯಂದು ವಿದ್ಯಾ ವಿಹಾರ್ನ ಶ್ರೀ ಅಂಬಿಕಾ ಆದಿನಾಥೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಸಂಪನ್ನಗೊಂಡಿತು.
ತಾಳಮದ್ದಲೆ ಕಾರ್ಯಕ್ರಮದ ನಡುವೆ ನಡೆದ ಸಭಾ ಕಾರ್ಯಕ್ರಮದಲ್ಲಿ ಪೂಜ್ಯ ವೇ| ಮೂ| ಪೆರ್ಣಂಕಿಲ ಹರಿದಾಸ ಭಟ್, ಶ್ರೀ ಅಂಬಿಕಾ ಆದಿನಾಥೇಶ್ವರ ಮಹಾಗಣಪತಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಹರಿದಾಸ ಗೋಪಾಲ ಶೆಟ್ಟಿ, ಮುಖ್ಯ ಅತಿಥಿಯಾಗಿ ಬಂಟರ ಸಂಘದ ಕುರ್ಲಾ-ಭಾಂಡುಪ್ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಭೂಮಿಕಾ ಶೆಟ್ಟಿ ಹಾಗೂ ವಿಶ್ವ ಹಿಂದೂ ಪರಿಷತ್ತಿನ ಥಾಣೆ ಪ್ರಮುಖರಾದ ಪೊಲ್ಯ ಉಮೇಶ್ ಶೆಟ್ಟಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮುಂಬೈ ನಗರದ ಯಕ್ಷಗಾನ ಕಲಾವಿದ, ಸಂಘಟಕ ರಾಘವೇಂದ್ರ ಮೊಗವೀರ ಬಗ್ವಾಡಿ ದಂಪತಿಯನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಘವೇಂದ್ರ ಮೊಗವೀರ ಬಗ್ವಾಡಿ ಅವರು, “ಶ್ರೀ ರಾಮನವಮಿ ಉತ್ಸವದ ಸಂದರ್ಭದಲ್ಲಿ ನೀಡಿದ ಈ ಸನ್ಮಾನವನ್ನು ದೇವರ ಪ್ರಸಾದ ರೂಪದಲ್ಲಿ ಸ್ವೀಕರಿಸಿದ್ದೇನೆ. ಇದನ್ನು ನಮ್ಮ ಅಯ್ಯಪ್ಪ ಯಕ್ಷಗಾನ ಮಂಡಳಿಗೆ ಸಮರ್ಪಿಸುತ್ತೇನೆ. ನನ್ನ ಕಲಾ ಸೇವೆಗೆ ಪೋಷಕರ ಆಶೀರ್ವಾದ ಹಾಗೂ ಪತ್ನಿ-ಮಕ್ಕಳ ಸಹಕಾರವೇ ಕಾರಣ,” ಎಂದು ನುಡಿದರು.
ಕಾರ್ಯಕ್ರಮವನ್ನು ಸಂಯೋಜಕರಾದ ವಾಸುದೇವ ಮಾರ್ನಾಡ್ ನಿರೂಪಿಸಿದರು. ಕನ್ನಡ ಭವನದ ಪ್ರಾಂಶುಪಾಲರಾದ ಅಮೃತಾ ಶೆಟ್ಟಿ ಸ್ವಾಗತಿಸಿ ಅತಿಥಿಗಳ ಪರಿಚಯ ನೀಡಿದರು. ಸಿ.ಎ. ರಾಜಶ್ರೀ ಜೆ. ಶೆಟ್ಟಿ ಹಾಗೂ ಅಮೃತಾ ಶೆಟ್ಟಿ ಸನ್ಮಾನ ಪತ್ರ ವಾಚಿಸಿದರು. ಕಾರ್ಯಕ್ರಮದ ಸಂಯೋಜಕರಾದ ಸುರೇಶ ಶೆಟ್ಟಿ ನಂದ್ರೊಳ್ಳಿ ವಂದಿಸಿದರು.




