
ಮುಂಬಯಿ: ಬೋರಿವಲಿ ಪೂರ್ವದ ರಾಷ್ಟ್ರೀಯ ಉದ್ಯಾನದ ಸನಿಹದ ಶ್ರೀಕೃಷ್ಣ ನಗರ, ನ್ಯಾನ್ಸಿ ಕಾಂಪ್ಲೆಕ್ಸ್, ಶೀತಲ್ ರಿಗಾಲಿಯಾದಲ್ಲಿ ಇತ್ತೀಚೆಗೆ ನವೀಕೃತಗೊಂಡು, ಪುನಃ ಪ್ರತಿಷ್ಠಾಪನೆ ಹಾಗೂ ಬ್ರಹ್ಮಕಲಶೋತ್ಸವಗೊಂಡಿರುವ ಶ್ರೀ ಜಗದೀಶ್ವರಿ ಮಂದಿರದಲ್ಲಿ ಏಪ್ರಿಲ್ 8ರಂದು ದೃಢ ಕಲಶಾಭಿಷೇಕ ನೆರವೇರಿತು.
ಮಂದಿರದ ಮುಖ್ಯಸ್ಥರಾದ ಶೇಖರ್ ಕೋಟ್ಯಾನ್ ಅವರ ಮುಂದಾಳುತ್ವದಲ್ಲಿ ಮತ್ತು ಸಮಿತಿಯ ಸರ್ವ ಸದಸ್ಯರ ಸಹಯೋಗದೊಂದಿಗೆ ಈ ಕಾರ್ಯಕ್ರಮ ನಡೆಯಿತು. ವೇದಮೂರ್ತಿ ವಿಜಯ ಉಪಾಧ್ಯಾಯ ಅವರ ಪೌರೋಹಿತ್ಯದಲ್ಲಿ, ಅಂಧೇರಿಯ ಗುರುಪ್ರಸಾದ್ ಭಟ್ ಮತ್ತು ತಂಡದವರು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿಕೊಟ್ಟರು.
ಧಾರ್ಮಿಕ ಕಾರ್ಯಕ್ರಮಗಳ ವಿವರ:
- ಬೆಳಿಗ್ಗೆ: ದೇವತಾ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಗಳು ಪ್ರಾರಂಭಗೊಂಡು, ಪುಣ್ಯಾಹವಾಚನ, ಗಣಹೋಮ, ದೃಢ ಕಲಶಾಭಿಷೇಕ ಪ್ರಧಾನ ಹೋಮಗಳು ನಡೆದವು. ತದನಂತರ ಕಲಶಾಭಿಷೇಕ, ಮಹಾಪೂಜೆ ಹಾಗೂ ಮಂತ್ರಾಕ್ಷತೆಯ ನಂತರ ಅನ್ನಪ್ರಸಾದ ವಿತರಣೆಯಾಯಿತು.
- ಸಂಜೆ: ಲಲಿತಾ ಸಹಸ್ರನಾಮ ಪಠಣ ಹಾಗೂ ಶ್ರೀ ಹನುಮಾನ್ ಮಹಿಳಾ ಭಜನಾ ಮಂಡಳಿಯ ಸದಸ್ಯೆಯರಿಂದ ಭಜನಾ ಸೇವೆ ಜರುಗಿತು. ನಂತರ ದೇವಿಗೆ ಮಹಾಮಂಗಳಾರತಿ ಮತ್ತು ರಂಗಪೂಜೆ ನೆರವೇರಿತು. ತೀರ್ಥಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮಗಳು ಸಂಪನ್ನಗೊಂಡವು.
ಈ ಸನ್ನಿಧಿಯಲ್ಲಿ ಜರುಗಿದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪರಿಸರದ ತುಳು-ಕನ್ನಡಿಗರೇ ಅಲ್ಲದೆ ಅನ್ಯಭಾಷಿಕ ಭಕ್ತಾದಿಗಳು ಸಹ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರಸಾದ ಸ್ವೀಕರಿಸಿದರು. ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ| ಪಿ.ವಿ. ಶೆಟ್ಟಿ ಅವರನ್ನು ಗೌರವಿಸಲಾಯಿತು.




